×
Ad

ಕಡಲ್ಕೊರೆತ ತಡೆಗೆ ಸನ್ನದ್ಧರಾಗಿ: ಸಚಿವ ಖಾದರ್

Update: 2019-06-03 20:17 IST

ಮಂಗಳೂರು, ಜೂ.3: ಮಳೆಗಾಲದಲ್ಲಿ ಉಳ್ಳಾಲದ ಮುಕ್ಕಚೇರಿ ಮತ್ತು ಕೈಕೋ ಪ್ರದೇಶಗಳಲ್ಲಿ ಸಮುದ್ರ ಕೊರೆತ ತೀವ್ರವಾಗಿ ಕಾಡಲಿದ್ದು, ಈ ಪ್ರದೇಶ ವ್ಯಾಪ್ತಿಯಲ್ಲಿ ಕಡಲ್ಕೊರೆತ ತಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಬಂದರು ಇಲಾಖೆ ಅಧಿಕಾರಿಗಳಿಗೆ ರಾಜ್ಯ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನಿರ್ದೇಶನ ನೀಡಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉಳ್ಳಾಲದ ಮುಕ್ಕಚೇರಿ ಮತ್ತು ಕೈಕೋ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕಡಲ್ಕೊರೆತ ಸಂಭವಿಸಲಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಹೇಳಿದರು.

25 ಹೆಚ್ಚುವರಿ ಟ್ಯಾಂಕರ್: ಜಿಲ್ಲೆಯಾದ್ಯಂತ ಮುಂಗಾರು ವಿಳಂಬದಿಂದ ಕುಡಿಯುವ ನೀರು ಪೂರೈಕೆಗೆ ತೊಂದರೆಯಾದ ಪ್ರದೇಶಗಳಿಗೆ ನೀರು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ನಗರ ವ್ಯಾಪ್ತಿಗೆ ಜೂ.7ರ ನಂತರ ನೀರು ಪೂರೈಕೆಗೆ ಈಗಾಗಲೇ ಇರುವ ಟ್ಯಾಂಕರ್‌ಗಳ ಜೊತೆ 25 ಹೆಚ್ಚುವರಿ ಟ್ಯಾಂಕರ್‌ಗಳನ್ನು ಪಡೆದಿಕೊಳ್ಳಿ ಎಂದು ಸಚಿವರು ಮಹಾನಗರ ಪಾಲಿಕೆ ಇಂಜಿನಿಯರ್ ನಿಂಗೇಗೌಡರಿಗೆ ಸೂಚನೆ ನೀಡಿದರು.

ಜೂ.15ರ ನಂತರ ಜಿಲ್ಲೆಯಲ್ಲಿ ಮಳೆಯಾಗುವ ಲಕ್ಷಣಗಳಿದ್ದು, ಅಲ್ಲಿಯವರೆಗೆ ಜನರಿಗೆ ತೊಂದರೆಯಾಗದಂತೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ದೂರು ಬಂದ ಪ್ರದೇಶಗಳಿಗೆ ಆದ್ಯತೆ ಮೇರೆಗೆ ನೀರು ನೀಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.

ಉಳ್ಳಾಲದಲ್ಲಿ ಆರು ಬೋರ್‌ವೆಲ್ ಮತ್ತು ಎಂಟು ತೆರೆದ ಬಾವಿಗಳಿದ್ದು, ಒಂಬತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೋಟೆಕಾರ್‌ನ ಮೂರು ವಾರ್ಡ್‌ಗಳಿಗೆ ಬೋರ್‌ವೆಲ್ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಬ್ಯಾಂಕರ್‌ಗಳ ಜೊತೆ ಸಭೆ: ಸರಕಾರದ ವಿವಿಧ ಸಾಲ ಯೋಜನೆಗಳಡಿಯಲ್ಲಿ ಸಾಲ ಸೌಲಭ್ಯ ಪಡೆಯುವವರನ್ನು ಸ್ಥಳೀಯ ಬ್ಯಾಂಕ್‌ಗಳ ಮ್ಯಾನೇಜರ್‌ಗಳು ವಿವಿಧ ನೆಪವೊಡ್ಡಿ ಸಾಲ ನಿರಾಕರಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಜನ ಸಾಮಾನ್ಯರ ಸಬಲೀಕರಣಕ್ಕೆ ರೂಪಿಸಲಾದ ಯೋಜನೆಗಳಿಗೆ ಇದರಿಂದ ಹಿನ್ನಡೆಯಾಗಲಿದೆ ಎಂದು ಸಚಿವ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

ಸ್ವಯಂ ಉದ್ಯೋಗ ಯೋಜನೆ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ಕಲಿಕಾ ಸಾಲಕ್ಕೆ ಯಾವುದೇ ರೀತಿಯಲ್ಲಿ ಕತ್ತರಿಯಾಡಿಸದೆ ಸರಕಾರ ಆರಿಸಿದ ಅಭ್ಯರ್ಥಿಗಳಿಗೆ ಸಾಲ ನೀಡಬೇಕು ಎಂದು ಸಭೆಯಲ್ಲಿದ್ದ ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸಚಿವರು ಸೂಚಿಸಿದರು.

ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಸಾಲ ದೊರಕಿಸಲು ಬ್ಯಾಂಕ್‌ಗಳು ಸಹಕರಿಸಬೇಕು. ಬೇರೆ ಯಾರೋ ಸಾಲ ಮರುಪಾವತಿ ಮಾಡದಿರುವುದಕ್ಕೆ ಅರ್ಹರಿಗೆ ನಿರಾಕರಿಸಬಾರದು. ಬಡ ವಿದ್ಯಾರ್ಥಿಗಳು ಹೆಚ್ಚಾಗಿ ಶೈಕ್ಷಣಿಕ ಸಾಲದ ಮೇಲೆ ಅವಲಂಬಿತರಾಗಿರುತ್ತಾರೆ. ಶೈಕ್ಷಣಿಕ ಸಾಲ ಪಡೆಯುವ ವಿದ್ಯಾರ್ಥಿಗಳಲ್ಲಿ ಸರಕಾರದ ಯೋಜನೆಗಳು ಹಾಗೂ ಸಾಲ ಪಡೆದುಕೊಳ್ಳಲು ಇರುವ ಕ್ರಮಗಳ ಬಗ್ಗೆ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ. ಇದನ್ನು ಕೂಡಲೇ ನಿವಾರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಬ್ಯಾಂಕಿಂಗ್ ಸಮಸ್ಯೆ ಪರಿಹರಿಸಲು ಅದಾಲತ್ ಮಾದರಿ ಕಾರ್ಯಕ್ರಮ ಆಯೋಜಿಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಲೀಡ್ ಬ್ಯಾಂಕ್ ಪ್ರತಿನಿಧಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ಸಾಲ ನೀಡುವಿಕೆ ಮತ್ತು ಮರುಪಾವತಿ ಬಗ್ಗೆ ಸಮಗ್ರ ಅಂಕಿ ಸಂಖ್ಯೆ ಮಾಹಿತಿಯೊಡನೆ ಹಾಗೂ ಸರಕಾರದ ಯೋಜನೆಗಳಡಿ ನೆರವು ನೀಡಿದ ಟ್ರ್ಯಾಕ್ ಲಿಸ್ಟ್‌ನ್ನು ನೀಡುವುದರಿಂದ ಬ್ಯಾಂಕ್‌ಗಳಿಗೆ ಸೂಕ್ತ ನಿರ್ದೇಶನ ನೀಡಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ನಗರೋತ್ಥಾನ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಕಾಂಕ್ರಿಟ್ ರಸ್ತೆ, ಸಣ್ಣ ಮಾರುಕಟ್ಟೆ ಕಟ್ಟಡಗಳು ಹಾಗೂ ಆಟದ ಮೈದಾನಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದ ಸಚಿವ ಯು.ಟಿ.ಖಾದರ್, ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ವೇಗವಾಗಿ ಪ್ರಾರಂಭಿಸಲು ಆದಷ್ಟು ಶೀಘ್ರವಾಗಿ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಮಹಾನಗರ ಪಾಲಿಕೆ ಆಯುಕ್ತ ನಾರಾಯಣಪ್ಪ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಬ್ಯಾಂಕ್‌ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಅತಿವೃಷ್ಟಿಗೆ ಸಂಬಂಧಿಸಿದಂತೆ ಸಂಭವಿಸುವ ಸಮಸ್ಯೆಗಳಿಗೆ ಗರಿಷ್ಠ ಮೂರು ದಿನಗಳೊಳಗಾಗಿ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಿಡಿಲು, ಗುಡುಗಿನಿಂದಾಗುವ ಹಾನಿಗಳಿಗೆ ಮಾನವೀಯ ನೆಲೆಯಿಂದ ಉದಾರವಾಗಿ ಪರಿಹಾರದ ಮೊತ್ತ ನೀಡಲು ಶ್ರಮಿಸಲಾಗುವುದು.
- ಯು.ಟಿ. ಖಾದರ್,
ರಾಜ್ಯ ನಗರಾಭಿವೃದ್ಧಿ ಸಚಿವ

ಸುಳ್ಯದಲ್ಲಿ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ ಆದ್ಯತೆ
ಪುತ್ತೂರು ತಾಲೂಕಿನಲ್ಲಿ ನೀರಿಗೆ ತೊಂದರೆ ಇಲ್ಲ. ತಾಲೂಕಿನ ಎತ್ತರದಲ್ಲಿರುವ ಪ್ರದೇಶಗಳಾದ ಒಳಮೊಗರು, ಪರಿಯತ್ತೋಡಿಯಂತಹ ಪ್ರದೇಶಗಳಿಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಕುಮಾರಧಾರಾ ನದಿಯಲ್ಲಿ ಒಳಹರಿವಿದೆ ಎಂದು ಸಹಾಯಕ ಆಯುಕ್ತ ಕೃಷ್ಣಮೂರ್ತಿ ತಿಳಿಸಿದರು. ಬಳಿಕ ಮಾತನಾಡಿದ ಸಚಿವ ಯು.ಟಿ.ಖಾದರ್, ಸುಳ್ಯದಲ್ಲಿ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News