ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ: ಡಾ.ಅಜಿತ್ ಕೆ.ಶೆಟ್ಟಿ
ಉಡುಪಿ, ಜೂ.4: ತಂಬಾಕಿನಲ್ಲಿ 3000ಕ್ಕೂ ಅಧಿಕ ರಾಸಾಯನಿಕಗಳಿದ್ದು, ಇದರ ಸೇವನೆ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಜಿತ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಜಿಪಂ, ಎನ್ಸಿಡಿ ಘಟಕ ಹಾಗೂ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ತಂಬಾಕು ದಿನಾಚರಣೆ ಮತ್ತು ಹೆಚ್1ಎನ್1 ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನು ನಿಷೇದಿಸಲಾಗಿದ್ದು, ತಂಬಾಕು ಸೇವನೆಯನ್ನು ತ್ಯಜಿಸಲಿಚ್ಚಿಸುವವರು ಉಡುಪಿ ಜಿಲ್ಲಾಸ್ಪತ್ರೆಯ ಎನ್ಟಿಸಿಪಿ ಘಟಕವನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು. ಕಾರ್ಯಕ್ರಮ ದಲ್ಲಿ ಅವರು ಹೆಚ್1ಎನ್1 ಕಾಯಿಲೆಯ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ವೈದ್ಯಾಧಿಕಾರಿ ಡಾ. ಮಹೇಶ್ ಐತಾಳ್, ತಂಬಾಕು ಮತ್ತು ಅದರ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಪ್ರಸ್ತಾವಿಕ ಮಾತು ಗಳನ್ನಾಡಿದರು.
ಎನ್ಸಿಡಿ ವಿಭಾಗದ ವೈದ್ಯಾಧಿಕಾರಿ ಡಾ. ಎರಿಕ್ ಫೆರ್ನಾಂಡಿಸ್, ತಂಬಾಕಿನ ವಿವಿಧ ವಿಧಗಳು, ಅದರ ಸೇವನೆಯಿಂದ ಬರುವ ಆರೋಗ್ಯ ಸಮಸ್ಯೆಗಳು, ಕಾಯಿಲೆಗಳು, ಗರ್ಭಿಣಿ ಸ್ತ್ರೀಯರಲ್ಲಿ ತಂಬಾಕು ಸೇವನೆಯಿಂದ ಮಗುವಿನ ಬೆಳವಣಿಗೆಯ ಮೇಲಾಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ದಂತ ವೈದ್ಯಾಧಿಕಾರಿ ಡಾ. ಆರತಿ ಕುಲಕರ್ಣಿ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಎನ್ಸಿಡಿ ವಿಭಾಗದ ಆಪ್ತ ಸಮಾಲೋಚಕಿ ಮಮತಾ ಸ್ವಾಗತಿಸಿ, ವಂದಿಸಿದರು.