×
Ad

ಸುಲ್ತಾನ್‌ಬತ್ತೇರಿ ‘ಐತಿಹಾಸಿಕ ಕೋಟೆ’ಗೆ ಕಬ್ಬಿಣದ ಬೇಲಿಯ ಭದ್ರತೆ!

Update: 2019-06-07 20:54 IST

ಮಂಗಳೂರು, ಜೂ.7: ಐತಿಹಾಸಿಕ ಕೋಟೆಗಳಲ್ಲಿ ಒಂದಾಗಿರುವ ನಗರದ ಸುಲ್ತಾನ್ ಬತ್ತೇರಿ ಈಗಾಗಲೇ ಸಾಕಷ್ಟು ಹಾನಿಗೊಳಗಾಗಿದ್ದು, ಕೊನೆಗೂ ಎಚ್ಚೆತ್ತುಕೊಂಡಿರುವ ಪುರಾತತ್ವ ಇಲಾಖೆ ಕೋಟೆಗೆ ಕಬ್ಬಿಣದ ಬೇಲಿ ಮೂಲಕ ರಕ್ಷಣೆಗೆ ಮುಂದಾಗಿದೆ.

ಐತಿಹಾಸಿಕ ಸ್ಥಳ, ಕೋಟೆ, ಕಟ್ಟಡಗಳಿಗೆ ರಕ್ಷಣೆ ನೀಡುವುದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ. ಹೊಸದಿಲ್ಲಿಯ ಕೇಂದ್ರ ಕಚೇರಿಯ ನಿರ್ದೇಶನದ ಮೇರೆಗೆ ಸುಲ್ತಾನ್ ಬತ್ತೇರಿ ಕೋಟೆಯ ಸುತ್ತ ಕಬ್ಬಿಣದ ಬೇಲಿ ಹಾಕುವ ಕಾರ್ಯ ಆರಂಭವಾಗಿದೆ.

ಕೋಟೆಯ ಸುತ್ತ ಕಬ್ಬಿಣದ ಬೇಲಿ ಹಾಕಲು ಕಬ್ಬಿಣದ ರಾಡ್, ಗೇಟ್‌ಗಳು ಬಂದಿವೆ. ಕೋಟೆಯ ಸುತ್ತ ಇದಕ್ಕಾಗಿ ಮಣ್ಣು ತೆಗೆದು ರಾಡ್ ಅಳವಡಿಸಿ ಬೇಲಿ ಹಾಕುವ ಕಾಮಗಾರಿಗೆ ಚಾಲನೆಯೂ ದೊರಕಿದೆ. ಭಾರತೀಯ ಪುರಾತತ್ವ ಸರ್ವೆಕ್ಷಣಾ ಇಲಾಖೆಯ ಅಧೀನದಲ್ಲಿರುವ ಎಲ್ಲಾ ಮಹತ್ವದ ಸ್ಥಳಗಳ ಸುತ್ತ ರಕ್ಷಣೆ ಹಾಗೂ ಭದ್ರತೆ ಒದಗಿಸುವ ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಹೊಸದಿಲ್ಲಿಯ ಕೇಂದ್ರ ಕಚೇರಿ ಮೇರೆಗೆ ಬೆಂಗಳೂರಿನಲ್ಲಿ ರುವ ಇಲಾಖೆಯ ವತಿಯಿಂದ ಸುಲ್ತಾನ್‌ಬತ್ತೇರಿ ಐತಿಹಾಸಿಕ ಕೋಟೆಗೆ ರಕ್ಷಣೆ ಒದಗಿಸುವ ಕಾಮಗಾರಿಗೆ ಇತ್ತೀಚೆಗೆ ಟೆಂಡರ್ ಕರೆಯಲಾಗಿತ್ತು.

ಸುಲ್ತಾನ್ ಬತ್ತೇರಿ ಕೋಟೆಯ ಹೊರಭಾಗ ಕಸ ಕಡ್ಡಿ, ತ್ಯಾಜ್ಯಗಳು ತುಂಬಿ ಅವಗಣನೆಗೆ ಒಳಗಾಗಿತ್ತು. ಲಾರಿ ಮುಖೇನ ಮಣ್ಣನ್ನು ಸುರಿದು ಇಲ್ಲಿ ಡಂಪಿಂಗ್ ಯಾರ್ಡ್ ರೀತಿ ಮಾಡಿದ್ದರು. ಮಳೆಗಾಲದಲ್ಲಿ ಈ ವ್ಯಾಪ್ತಿಯಲ್ಲಿ ನಿರ್ವಹಣೆ ಇಲ್ಲದೆ ಗಿಡಗಂಟಿಗಳು ತುಂಬಿಕೊಳ್ಳುತ್ತದೆ. ಇದರಿಂದ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಇದೀಗ ಕೋಟೆಯ ಹೊರಭಾಗದಲ್ಲಿ ಕಬ್ಬಿಣದ ಬೇಲಿ ಅಳವಡಿಸಲು ಉದ್ದೇಶಿಸಲಾಗಿದೆ. ಈ ಮೂಲಕ ಕೋಟೆಯ ಸುತ್ತ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶ.

1985ರಲ್ಲೇ ರಾಷ್ಟ್ರೀಯ ಮಹತ್ವದ ಸ್ಮಾರಕವಾಗಿ ಘೋಷಣೆ

ಪುರಾತತ್ವ ಇಲಾಖೆಗೆ ಸಂಬಂಧಿಸಿ ಮಂಗಳೂರಿನಲ್ಲಿ ಕಚೇರಿ ಇಲ್ಲದ ಹಿನ್ನೆಲೆಯಲ್ಲಿ ಸುಲ್ತಾನ್‌ಬತ್ತೇರಿಯಲ್ಲಿ ನಡೆಸಲು ಉದ್ದೇಶಿಸಿರುವ ಕಾಮಗಾರಿಯ ಬಗ್ಗೆ ದ.ಕ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ.

ಈ ಕೋಟೆಯ ನಿರ್ಮಾಣಕ್ಕೂ ಒಂದು ಐತಿಹಾಸಿಕ ಕಾರಣವಿದೆ. ಅಂದರೆ ಗುರುಪುರ ನದಿಗೆ ಯುದ್ಧ ನೌಕೆಗಳು ಬರುವುದನ್ನು ತಡೆಯಲು ಟಿಪ್ಪು ಸುಲ್ತಾನನು ಕಾವಲು ಕೋಟೆಯಾದ ಈ ಸುಲ್ತಾನ್ ಬತ್ತೇರಿಯನ್ನು ನಿರ್ಮಿಸಿದ್ದ. ಇದು ಸಣ್ಣದಾದ ಒಂದು ಕಾವಲು ಗೋಪುರವಾದರೂ ಸಹ ಕೋಟೆಯಂತೆ ಕಾಣುತ್ತಿದೆ. ಪಿರಂಗಿಗಳ ಮೂಲಕ ಗುಂಡುಗಳನ್ನು ಹಾರಿಸುವ ಸಲುವಾಗಿ ಇದು ರಚಿತವಾಗಿದೆ ಎಂದು ಇಲ್ಲಿ ಅಳವಡಿಸಲಾದ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

1784ರಲ್ಲಿ ಗುರುಪುರ ನದಿಯ ತಟದಲ್ಲಿ ನಿರ್ಮಾಣಗೊಂಡ ಈ ಕೋಟೆಯು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧೀನಕ್ಕೊಳಪಟ್ಟಿವೆ. ಅಂದರೆ ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ 1985ರ ಪ್ರಕಾರ ಸಂರಕ್ಷಿತ ಸ್ಮಾರಕ ಅಂದರೆ ರಾಷ್ಟ್ರೀಯ ಮಹತ್ವದ ಸ್ಮಾರಕ ಎಂದು ಘೋಷಿಸಲಾಗಿದೆ.ಸುಲ್ತಾನ್‌ಬತ್ತೇರಿ ಕೋಟೆಯ ಮಹತ್ವವನ್ನು ಸಾರುವ ಫಲಕವೊಂದು ಇಲ್ಲಿ ಎಡಬದಿಯಲ್ಲಿದ್ದರೆ, ‘ಹಾನಿಗೈದರೆ ಶಿಕೆ’್ಷ ಎಂಬ ದಂಡದ ಎಚ್ಚರಿಕೆ ಫಲಕವು ಬಲಬದಿಯಲ್ಲಿದೆ. ಅದು ಬಿಟ್ಟರೆ ಇಲ್ಲಿ ಬೇರೇನೂ ಕಾಣಲು ಸಿಗುವುದಿಲ್ಲ. ಐತಿಹಾಸಿಕ ಸ್ಮಾರಕವಾಗಿ ಗುರುತಿಸಲ್ಪಟ್ಟಿರುವ ಈ ಕೋಟೆಗೆ ಅಗತ್ಯ ಸೌಲಭ್ಯಗಳೇ ಇಲ್ಲ. ಜತೆಗೆ, ಇಲ್ಲಿನ ಕೋಟೆಯ ರಕ್ಷಣೆಗೆ ಕಾವಲುಗಾರರಿಲ್ಲ. ವಿದೇಶದಿಂದ ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲು ಮಾರ್ಗದರ್ಶಕರೂ ಇಲ್ಲ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News