ಮೋದಿಯ ದ್ವೇಷ ಮತ್ತು ವಿಷದ ಮಾತುಗಳನ್ನು ಪ್ರೀತಿಯಿಂದ ಎದುರಿಸುತ್ತೇವೆ: ರಾಹುಲ್ ಗಾಂಧಿ

Update: 2019-06-08 13:29 GMT

ತಿರುವನಂತಪುರಂ, ಜೂ.8: ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದ್ವಿತೀಯ ದಿನವೂ ಪ್ರಧಾನಿ ಮೋದಿ ವಿರುದ್ಧದ ಟೀಕಾ ಪ್ರಹಾರವನ್ನು ಮುಂದುವರಿಸಿದ್ದು ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭ ಮೋದಿಯ ಭಾಷಣ ಸುಳ್ಳು, ವಿಷಯುಕ್ತ ಮತ್ತು ದ್ವೇಷಭಾವನೆಯಿಂದ ಕೂಡಿತ್ತು ಎಂದು ಹೇಳಿದ್ದಾರೆ.

ವಯನಾಡ್ ಕ್ಷೇತ್ರವ್ಯಾಪ್ತಿಯ ಕಲ್ಪೇಟ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿಯ ಸುಳ್ಳು ಮತ್ತು ದ್ವೇಷದ ಭಾವನೆಯನ್ನು ಕಾಂಗ್ರೆಸ್ ಪಕ್ಷ ಪ್ರೀತಿಯ ಮೂಲಕ ಎದುರಿಸುತ್ತದೆ ಎಂದರು.

ಪ್ರಧಾನಿ ಮೋದಿ ಸಿಟ್ಟು, ಸುಳ್ಳು, ಅಸಹಿಷ್ಣುತೆ ಹಾಗೂ ಕೆಟ್ಟ ಭಾವನೆಗಳನ್ನು ಪ್ರತಿನಿಧಿಸಿದರೆ ಕಾಂಗ್ರೆಸ್ ಪಕ್ಷ ಸತ್ಯ, ಪ್ರೀತಿ ಹಾಗೂ ವಿಶ್ವಾಸದ ಪ್ರತೀಕವಾಗಿದೆ. ಮೋದಿಯವರ ಬಳಿ ಹಣವಿರಬಹುದು, ಮಾಧ್ಯಮಗಳನ್ನು ತಮ್ಮ ಪರ ಇರುವಂತೆ ಮಾಡಿರಬಹುದು, ಅವರಿಗೆ ಶ್ರೀಮಂತ ಮಿತ್ರರಿರಬಹುದು. ಆದರೆ ಬಿಜೆಪಿ ಹುಟ್ಟುಹಾಕಿರುವ ಅಸಹಿಷ್ಣುತೆಯ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರಿಸುತ್ತದೆ ಎಂದು ರಾಹುಲ್ ಹೇಳಿದರು.

ವಯನಾಡ್ ಕ್ಷೇತ್ರದಲ್ಲಿ 4.31 ಲಕ್ಷ ಮತಗಳ ಭರ್ಜರಿ ಗೆಲುವು ಸಾಧಿಸಿದ ಬಳಿಕ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿರುವ ರಾಹುಲ್ ಶುಕ್ರವಾರ ಮತ್ತು ಶನಿವಾರ ವಯನಾಡ್‌ನಲ್ಲಿ ರೋಡ್‌ಶೋ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News