ಅಡ್ಡೂರು: ಜೂ.10ರಂದು ಅಲ್ ಬಿರ್ರ್ ಪ್ರೀ ಇಸ್ಲಾಮಿಕ್ ಸ್ಕೂಲ್ ಉದ್ಘಾಟನೆ
ಮಂಗಳೂರು, ಜೂ.9: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ಪ್ರಾರಂಭಗೊಂಡಿರುವ ಅಲ್ಬಿರ್ರ್ ಪ್ರೀ ಇಸ್ಲಾಮಿಕ್ ಸ್ಕೂಲ್ನ ಕರ್ನಾಟಕ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭವು ಜೂ.10ರಂದು ಅಡ್ಡೂರು ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆಶಿರ್ವಚನಗೈಯಲಿದ್ದು, ಕಲ್ಲಿಕೋಟೆಯ ಖಾಝಿ ಹಾಗೂ ಅಲ್ ಬಿರ್ರ್ನ ಚೇರ್ಮ್ಯಾನ್ ಸೈಯದ್ ಮುಹಮ್ಮದ್ ಕೋಯ ಜಮಲುಲೈಲಿ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ನ ಪ್ರಧಾನ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಅಲ್ ಬಿರ್ರ್ ಕನ್ವಿನರ್ ಶೈಖುನಾ ಉಮರ್ ಫೈಝಿ ಮುಕ್ಕಂ ಪ್ರಾಸ್ತಾವಿಕ ಭಾಷಣಗೈಯಲಿದ್ದು, ಅಬ್ದುಲ್ ಸಮದ್ ಪೂಕೋಟೂರು ಮುಖ್ಯ ಪ್ರಭಾಷಣಗೈಯಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ.ಕ. ಸಮಸ್ತ ಮುಶಾವರ ಅಧ್ಯಕ್ಷ ಸೈಯದ್ ಝೈನುಲ್ ಅಬಿದೀನ್ ತಂಙಳ್, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಅಲ್ ಬಿರ್ರ್ ನಿರ್ದೇಶಕ ಡಾ.ಎನ್.ಎ.ಎಂ ಅಬ್ದುಲ್ ಖಾದಿರಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಮೌಲಾನಾ ಅನೀಸ್ ಕೌಸರಿ, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಮ್ಯಾನೇಜರ್ ಮೋಹಿನ್ ಕುಟ್ಟಿ ಮಾಸ್ಟರ್, ಅಡ್ಡೂರು ಜುಮಾ ಮಸ್ಜಿದ್ ಅಧ್ಯಕ್ಷ ಟಿ. ಸೈಯದ್, ಅಲ್ ಬಿರ್ರ್ ಕೇರಳ ಕೋ-ಆರ್ಡಿನೇಟರ್ ಇಸ್ಮಾಯೀಲ್ ಮುಜದ್ದಿದ್, ಎ.ಡಿ. ಇನ್ಚಾರ್ಜ್ ಫೈಝಲ್ ಹುದವಿ ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಮಾಜಿ ಶಾಸಕ ಮೊಯ್ದಿನ್ ಬಾವಾ, ಆರ್ಜೆಎಚ್ಎಚ್ಎಸ್ ಸಿಂಡಿಕೇಟ್ ಸದಸ್ಯ ಪ್ರೊ.ಯು.ಟಿ. ಇಫ್ತಿಕಾರ್ ಅಲಿ, ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯಾ, ಜಿಪಂ ಸದಸ್ಯ ಯು.ಪಿ.ಇಬ್ರಾಹೀಂ, ಅಡ್ಡೂರು ಅಲ್ ಬಿರ್ರ್ ಸಂಸ್ಥೆಯ ಪ್ರಾಂಶುಪಾಲ ಸಿದ್ದೀಕ್ ಫೈಝಿ, ಜಿಲ್ಲಾ ಮದ್ರಸಾ ಮ್ಯಾನೇಜ್ಮೆಂಟ್ ಅಧ್ಯಕ್ಷ ಡಿ.ಎಸ್.ರಫೀಕ್, ಅಡ್ಡೂರು ಬದ್ರಿಯ ಜುಮಾ ಮಸೀದಿಯ ಉಪಾಧ್ಯಕ್ಷ ಎಂ.ಎಸ್.ಶೇಖಬ್ಬ, ಖತೀಬ್ ಶರೀಫ್ ದಾರಿಮಿ, ಅಡ್ಡೂರು ಅಲ್ ಬಿರ್ರ್ ಕೋಆರ್ಡಿನೇಟರ್ ಕೆ. ಉಮರ್ ಫಾರೂಕ್ ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಅಲ್ಬಿರ್ರ್ ಕೋಆರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಏನಿದು ಅಲ್ ಬಿರ್ರ್:
2016ರಲ್ಲಿ ಆಲಪುಝದಲ್ಲಿ ನಡೆದ ಸಮಸ್ತದ 90ನೇ ವಾರ್ಷಿಕ ಸಮ್ಮೇಳನದಲ್ಲಿ ಘೋಷಿಸಲ್ಪಟ್ಟ ‘ಅಲ್ ಬಿರ್ರ್ ಇಸ್ಲಾಮಿಕ್ ಪ್ರೀ ಸ್ಕೂಲ್’ ಕೇವಲ 3 ವರ್ಷಗಳ ಅವಧಿಯೊಳಗೆ ಭಾರೀ ಜನಮನ್ನಣೆಯನ್ನು ಪಡೆದುಕೊಂಡಿದೆ. ಈ ವರ್ಷದೊಂದಿಗೆ ಅಲ್ ಬಿರ್ರ್ 255 ಬ್ಯಾಚುಗಳಲ್ಲಾಗಿ ಕಾರ್ಯನಿರ್ವಹಿಸಲಾರಂಭಿಸಿದೆ. ವಿನೂತನ ಹಾಗೂ ಪ್ರಾಯೋಗಿಕವಾದ ಬೋಧನಾ ಶೈಲಿಗಳಿಗೆ ಹೆಚ್ಚಿನ ಒತ್ತು ನೀಡುವ ಪಠ್ಯಕ್ರಮ ಮತ್ತು ಮೂಲಭೂತ ಸೌಕರ್ಯಗಳನ್ನು ಅಲ್ ಬಿರ್ರ್ ಸಜ್ಜುಗೊಳಿಸಿದೆ. ಶಿಶುಗಳ ಬಹುಮುಖ ಬುದ್ಧಿ ವಿಕಾಸಗಳನ್ನು ಪೂರ್ಣವಾಗಿ ಒಳಗೊಳ್ಳುವ ರೀತಿಯ ಪ್ಲೇವೇ ಮಾದರಿಯಲ್ಲಾಗಿ ಈ ಪಠ್ಯ ಪದ್ಧತಿಯನ್ನು ಸಿದ್ಧಪಡಿಸಲಾಗಿದೆ.
ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಬೆಳೆಯುವ ಮಗುವನ್ನು ಪರಿಪಾಲನೆ ಮಾಡುವುದರ ಜೊತೆಗೆ ಜಾತ್ಯಾತೀತ ಸಮಾಜದಲ್ಲಿ ಬದುಕಲು ಆವಶ್ಯವಾದ ನೈಪುಣ್ಯತೆ, ದೇಶಪ್ರೇಮ, ಸಹಿಷ್ಣುತಾ ಮನೋಭಾವವನ್ನು ರೂಪಿಕರಿಸುವ ಅಲ್ ಬಿರ್ರ್ ಪಠ್ಯ ಪದ್ಧತಿಯನ್ನು ವಿಶೇಷ ತರಬೇತಿ ಪಡೆದುಕೊಂಡ ಅಧ್ಯಾಪಕರ ಮೂಲಕ ಜಾರಿಗೊಳಿಸಲಾಗುತ್ತದೆ. ಧಾರ್ಮಿಕ ಶಿಕ್ಷಣದ ಜೊತೆಗೆ ಇಂಗ್ಲಿಷ್, ಅರಬಿಕ್, ಗಣಿತ, ಸಮಾಜ ವಿಜ್ಞಾನ, ಕನ್ನಡ ಮುಂತಾದ ವಿಷಯಗಳನ್ನು ಶಿಶುಸ್ನೇಹಿ ವಾತಾವರಣದ ಮೂಲಕ ಕಲಿಸಿಕೊಡಲಾಗುತ್ತದೆ.
ಪುಟಾಣಿ ಮಾಸಿಕ, ಸ್ಫೋಟ್ಸ್ ಮೀಟ್, ಕಿಡ್ಸ್ ಫೆಸ್ಟ್ ಮುಂತಾದವುಗಳು ಅಲ್ ಬಿರ್ರ್ ವಿದ್ಯಾ ಸಂಸ್ಥೆಗಳ ವಿಶೇಷತೆಗಳಾಗಿವೆ. ಪ್ರಸಕ್ತ ವರ್ಷದಲ್ಲಿ ಕರ್ನಾಟಕದಲ್ಲಿ ಹಾಗೂ ಗಲ್ಫ್ ರಾಷ್ಟ್ರಗಳಿಗೂ ಅಲ್ ಬಿರ್ರ್ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಕೇರಳದಲ್ಲಿ 255 ಬ್ಯಾಚ್ಗಳು, ಕರ್ನಾಟಕದಲ್ಲಿ 4 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ತರಬೇತಿ ಲಭಿಸಿದ 1,500 ಅಧ್ಯಾಪಕರು, 12,000ದಷ್ಟು ವಿದ್ಯಾರ್ಥಿಗಳು ಅಲ್ ಬಿರ್ರ್ ವಿದ್ಯಾಲಯದಲ್ಲಿದ್ದಾರೆ.
ಕರ್ನಾಟಕದಲ್ಲಿ ಅಲ್ ಬಿರ್ರ್
ಕೇರಳದಲ್ಲಿ ಭಾರೀ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿರುವ ಅಲ್ ಬಿರ್ರ್ ಪ್ರೀ ಇಸ್ಲಾಮಿಕ್ ಸ್ಕೂಲ್ಅನ್ನು ಕರ್ನಾಟಕಕ್ಕೂ ವಿಸ್ತರಿಸುವ ನಿಟ್ಟಿನಲ್ಲಿ ಪಸ್ತುತ ವರ್ಷ ದಕ್ಷಿಣ ಜಿಲ್ಲೆಯ ಅಡ್ಡೂರು, ವಿಟ್ಲ, ಕೈಕಂಬ, ಮೂಡುಬಿದಿರೆ ಮುಂತಾದೆಡೆ ನಾಲ್ಕು ಸ್ಕೂಲ್ಗಳು ಪ್ರಾರಂಭಿಸಲಾಗಿದೆ. ಮುಂದಿನ ವರ್ಷದಲ್ಲಿ ಇದನ್ನು 25 ಸ್ಥಳಗಳಿಗೆ ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.