ಅಸಹಾಯಕರು, ದುರ್ಬಲರಿಗೆ ಈ ದೇಶ ನರಕ: ಜಿ.ರಾಜಶೇಖರ್
ಉಡುಪಿ, ಜೂ.11: ಈ ದೇಶ ಅಸಹಾಯಕರು, ದುರ್ಬಲರು ಹಾಗೂ ಬಲಹೀನರಿಗೆ ಇಂದು ನರಕವೇ ಆಗಿದೆ. ಈ ನರಕದ ವಿರುದ್ಧ ಅನಂತಮೂರ್ತಿ ಹಾಗೂ ಗಿರೀಶ್ ಕಾರ್ನಾಡ್ ಹೋರಾಡಿದ್ದರು ಎಂದು ಹಿರಿಯ ಚಿಂತಕ ಜಿ. ರಾಜಶೇಖರ್ ಹೇಳಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ವತಿಯಿಂದ ಉಡುಪಿಯ ಎಂಜಿಎಂ ಕಾಲೇಜಿನ ಗೋವಿಂದ ಪೈ ಸಂಶೋಧನ ಕೇಂದ್ರದ ಧ್ವನ್ಯಾಲೋಕದಲ್ಲಿ ಮಂಗಳ ವಾರ ನಡೆದ ಗಿರೀಶ್ ಕಾರ್ನಾಡ್ರಿಗೆ ನುಡಿ ನಮನ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
ಈ ದೇಶ ಬಿಟ್ಟು ಬೇರೆ ನೆಲೆ, ಆಶ್ರಯ ಇಲ್ಲ ಎಂಬ ಸತ್ಯ ಅನಂತಮೂರ್ತಿಗೆ ಕೊನೆಯ ಕಾಲದಲ್ಲಿ ಅರಿವಾದರೆ, ಮುಸ್ಲಿಮರಿಗೆ ಅದು ರಕ್ತಗತವಾಗಿಯೇ ತಿಳಿದಿತ್ತು. ಅಂತಹ ಅಸಹಾಯಕರು ಹಾಗೂ ದುರ್ಬಲರನ್ನು ಪಾಕಿಸ್ತಾನಕ್ಕೆ ಹೋಗಿ ಹೇಳುವವರು ಇಂದು ಲೋಕಸಭಾ ಸದಸ್ಯರಾಗಿದ್ದಾರೆ. ಮಾತ್ರವಲ್ಲ ಕೇಂದ್ರ ಸಚಿವರು ಕೂಡ ಆಗಿದ್ದಾರೆ ಎಂದರು.
ಅನಂತಮೂರ್ತಿಗೆ ಕೊನೆ ಕೊನೆಗೆ ವಿಷಾಧದಲ್ಲಿ ನಾನು ಒಂಟಿ ಎಂಬ ಭಾವನೆ ಮೂಡಿತ್ತು. ಆದರೆ ಕಾರ್ನಾಡ್ರಲ್ಲಿ ಅಂತಹ ವಿಷಾಧದ ಭಾವನೆ ಕಾಣಲಿಲ್ಲ. ಇವರಿಬ್ಬರು ಅನ್ಯಾಯದ ವಿರುದ್ಧ ಹಾಗೂ ದುರ್ಬಲರ ಪರವಾಗಿ ಹೋರಾಡಿದ ಮಹಾನ್ ಚೇತನಗಳು. ರಾಜಕೀಯ ನಿಲುವಿನ ಒಂದೇ ಕಾರಣ ದಿಂದ ಗಿರೀಶ್ ಕಾರ್ನಾಡ್ ದೇಶದಾದ್ಯಂತ ಶತ್ರುಗಳು ಸೃಷ್ಠಿಸಿಕೊಂಡಿದ್ದರು. ಅನಂತಮೂರ್ತಿಗೂ ಈ ಸತ್ಯ ತಿಳಿದಿತ್ತು ಎಂದು ಅವರು ಹೇಳಿದರು.
ಹಿರಿಯ ಲೇಖಕಿ ವೈದೇಹಿ ಮಾತನಾಡಿ, ಶಿವರಾಮ ಕಾರಂತ, ಲಂಕೇಶ್, ಅನಂತಮೂರ್ತಿ, ಕಾರ್ನಾಡ್ ಸಮಾಜದ ಓರೆಕೋರೆಗಳನ್ನು ಸರಿಪಡಿಸುವ ವೈದ್ಯರಾಗಿದ್ದರು. ಕಾರ್ನಾಡ್ರನ್ನು ಕೇವಲ ಸಮಾಜ ಮಾತ್ರವಲ್ಲ, ಜಗತ್ತನ್ನು ಹಾಗೂ ಮನುಷ್ಯರನ್ನು ಪ್ರೀತಿಸುವ ಪ್ರತಿಯೊಬ್ಬರು ಕೂಡ ಕೆದುಕೊಂಡಿದ್ದಾರೆ ಎಂದು ಹೇಳಿದರು.
ಚಿಂತಕ ಪ್ರೊ. ಫಣಿರಾಜ್ ಮಾತನಾಡಿ, ಸ್ವತಂತ್ರ ಮನೋಭಾವ ಹೊಂದಿದ್ದ ಗಿರೀಶ್ ಕಾರ್ನಾಡ್, ತಾನು ಆಡಿದ ಮಾತಿಗೆ ವಿರೋಧ ಬಂದರೂ ಆ ಮಾತನ್ನು ಎಂದಿಗೂ ಹಿಂದಕ್ಕೆ ಪಡೆಯುತ್ತಿರಲಿಲ್ಲ. ಜನಪದ ಹಾಗೂ ರಾಜ ಕಾರಣಿಗಳು ಅರಿತಿದ್ದ ಟಿಪ್ಪು ಸುಲ್ತಾನ್ನನ್ನು ಬುದ್ದಿಜೀವಿಗಳಿಗೆ ಪರಿಚಯಿಸಿದ ವರು ಗಿರೀಶ್ ಕಾರ್ನಾಡ್ ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ನಟರಾಜ್ ದೀಕ್ಷಿತ್ ಮಾತನಾಡಿ, ಕಾರ್ನಾಡ್ ತನ್ನ ವಿರೋಧಿಗಳ ಆಚಾರವನ್ನು ಟೀಕಿಸುತ್ತಿದ್ದರೆಯೇ ಹೊರತು ವಿಚಾರವನ್ನು ಅಲ್ಲ. ಇದಕ್ಕೆ ಅವರ ಜೀವನದ ಹಿನ್ನೆಲೆಯೇ ಕಾರಣ. ಅದನ್ನು ಅವರು ತನ್ನ ಕೊನೆಯ ಉಸಿರು ಇರುವವರೆಗೂ ಮುಂದುವರೆಸಿದರು. ಹೋರಾಟದ ಮನಸ್ಥಿತಿ ಹೊಂದಿದ್ದ ಕಾರ್ನಾಡ್ ನಮಗೆಲ್ಲ ಆದರ್ಶ ವ್ಯಕ್ತಿ ಎಂದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲೋಸೊಫಿಕಲ್ ಆರ್ಟ್ಸ್ ಆ್ಯಂಡ್ ಸೈಯನ್ಸ್ನ ನಿರ್ದೇಶಕ ಪ್ರೊ.ವರದೇಶ್ ಹೀರೆಗಂಗೆ, ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯಾಯ ನುಡಿನಮನ ಸಲ್ಲಿಸಿದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು.
‘ಸಾವಿನಲ್ಲಿ ಸಂಭ್ರಮಿಸುವ ಸಂಸ್ಕೃತಿ ನಮ್ಮದಲ್ಲ'
ಗಿರೀಶ್ ಕಾರ್ನಾಡ್ರ ನಿಧನದ ಬಗ್ಗೆ ಬಲಪಂಥೀಯ ನೆಟ್ಟಿಗರು ಬಹಳ ಸಂಭ್ರಮಪಟ್ಟರು. ಆದರೆ ಸಾವಿನ ಸೂತಕದಲ್ಲಿ ಸಂಭ್ರಮ ಪಡುವ ಸಂಸ್ಕೃತಿ ನಮ್ಮದಲ್ಲ. ನಾವು ನಮ್ಮ ಶತ್ರು ನಿಧನರಾದರೂ ದುಃಖ ಪಡುವವರು. ಅಂತಹ ದರಲ್ಲಿ ಸಂಪ್ರದಾಯ, ಸಂಸ್ಕೃತಿ, ಪರಂಪರೆ, ಧರ್ಮದ ಬಗ್ಗೆ ಮಾತನಾಡು ವವರು ಇಂದು ಸಾವಿನ ಸೂತಕದಲ್ಲಿ ಸಂಭ್ರಮ ಪಡುತ್ತಿದ್ದಾರೆ. ಇವರು ಈ ಹಿಂದೆ ಅನಂತಮೂರ್ತಿ ಸಾವಿನಲ್ಲೂ ಸಂಭ್ರಮ ಪಟ್ಟಿದ್ದರು ಎಂದು ಜಿ. ರಾಜಶೇಖರ್ ಕಟುವಾಗಿ ಟೀಕಿಸಿದರು.