ಉಡುಪಿಗೆ ವಾರಾಹಿ ನೀರು; ಶಾಸಕರಿಂದ ಸಭೆ
Update: 2019-06-11 16:20 GMT
ಉಡುಪಿ, ಜೂ.11:ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರಿಗಾಗಿ ಕುಂದಾಪುರ ತಾಲೂಕಿನ ವಾರಾಹಿ ನದಿಯಿಂದ ನೀರು ತರುವ ಕುಡಿಯುವ ನೀರು ಯೋಜನೆಯ ಕುರಿತಂತೆ ಉಡುಪಿ ನಗರಸಭೆಯಲ್ಲಿ ಸತ್ಯಮೂರ್ತಿ ಸಭಾಂಗಣದಲ್ಲಿ ಇಂದು ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಕೆಯುಐಡಿಎಫ್ಸಿ ಅಧಿಕಾರಿಗಳು ಯೋಜನೆಯ ಕುರಿತು ಮಾಹಿತಿಗಳನ್ನು ನೀಡಿದರು. ಯೋಜನೆಯಲ್ಲಿರುವ ನ್ಯೂನ್ಯತೆಗಳನ್ನು ಶಾಸಕು ಅಧಿಕಾರಿಗಳ ಗಮನ ಸೆಳೆದರು.
ಈ ಬಗ್ಗೆ ಮುಂದಿನ ವಾರದಲ್ಲಿ ಕೆಯುಐಡಿಎಫ್ಸಿ ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡುವುದಾಗಿ ತಿಳಿಸಿದರು. ನಂತರ ನಗರಸಭಾ ವ್ಯಾಪ್ತಿಯೊಳಗಿನ ಒಳಚರಂಡಿ ಯೋಜನೆಯ ಸ್ಥಳ ಪರಿಶೀಲನೆ ಯನ್ನು ನಡೆಸಿದರು.
ಸಭೆಯಲ್ಲಿ ಕುಡ್ಸೆಂಪ್ನ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಅಂಪಾಳಿ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣ, ಉಡುಪಿ ನಗರಸಭಾ ಪೌರಾಯುಕ್ತ ಆನಂದ ಕಲ್ಲೋಳಿಕರ, ನಗರಸಭೆಯ ಕಾರ್ಯಪಾಲಕ ಅಭಿಯಂತರ ಗಣೇಶ್ ಉಪಸ್ಥಿತರಿದ್ದರು.