ಒಂದೇ ಮಳೆಗೆ ನೂರಾರು ಸಮಸ್ಯೆಗಳು ಸೃಷ್ಠಿ: ಅಪಾಯಕ್ಕೆ ಆಹ್ವಾನ

Update: 2019-06-12 13:57 GMT

ಉಡುಪಿ, ಜೂ.12: ಈಗಾಗಲೇ ಆರಂಭಗೊಂಡಿರುವ ಮಲ್ಪೆ -ತೀರ್ಥ ಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ಇದರ ಕಡಿಯಾಳಿ -ಪರ್ಕಳ ಚತುಷ್ಪಥ ಕಾಮಗಾರಿ ಅಪೂರ್ಣಗೊಂಡಿದ್ದು, ಒಂದೇ ಮಳೆಗೆ ನೂರಾರು ಸಮಸ್ಯೆಗಳನ್ನು ಸೃಷ್ಠಿಸಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

ಸುಮಾರು 98.46 ಕೋಟಿ ರೂ. ವೆಚ್ಚದಲ್ಲಿ 11.7 ಕಿ.ಮೀ. ಉದ್ದದ ಮೊದಲ ಹಂತದ ಕಾಮಗಾರಿಯನ್ನು ಈಗಾಗಲೇ ಆರಂಭಿಸಲಾಗಿದ್ದು, ಎಲ್ಲೂ ಕೂಡ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ನಿಧಾನಗತಿಯಲ್ಲಿ ನಡೆದ ಕಾಮಗಾರಿಯಿಂದ ಈಗ ವಾಹನ ಸವಾರರು, ಸಾರ್ವಜನಿಕರು ಹಾಗೂ ಹೆದ್ದಾರಿ ಇಕ್ಕೆಲಗಳ ನಿವಾಸಿಗು ತೊಂದರೆ ಅನುಭವಿಸುವಂತಾಗಿದೆ.

ಕಡಿಯಾಳಿಯಿಂದ ಪರ್ಕಳವರೆಗಿನ ರಸ್ತೆಯನ್ನು ಕೆಲವು ಕಡೆ ಮಣ್ಣು ಹಾಕಿ ಎತ್ತರಿಸಲಾಗಿದ್ದರೆ, ಇನ್ನೊಂದು ಕಡೆ ಅಗೆದು ತಗ್ಗು ಮಾಡಲಾಗಿದೆ. ಇದರ ಪರಿಣಾಮವಾಗಿ ಇಂದ್ರಾಳಿ ಬಸ್ ನಿಲ್ದಾಣದ ಸಮೀಪ ಕಾಮಗಾರಿ ನಡೆದ ರಸ್ತೆಯ ಬದಿಯಲ್ಲೇ ಮಣ್ಣು ಕುಸಿದು ಬೃಹತ್ ಹೊಂಡ ನಿರ್ಮಾಣವಾಗಿದೆ. ಅಪಾಯಕಾರಿಯಾಗಿರುವ ಈ ಹೊಂಡ ದ್ವಿಚಕ್ರ ವಾಹನ ಸವಾರರಿಗೆ ಕಂಟಕ ಪ್ರಾಯ ಎಂಬಂತೆ ಕಂಡು ಬರುತ್ತಿದೆ.
ಇಂದ್ರಾಳಿ ರೈಲ್ವೆ ನಿಲ್ದಾಣ ಬಳಿ ಮತ್ತು ಪರ್ಕಳ ಸಮೀಪ ಅರ್ಧದಲ್ಲಿ ಸ್ಥಗಿತ ಗೊಂಡ ಕಾಮಗಾರಿಯಿಂದ ಇಡೀ ರಸ್ತೆ ಕೆಸರುಮಯವಾಗಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಾಚಾರಿಗಳು ಸಂಚರಿಸಲು ಪರದಾಡುವ ಸ್ಥಿತಿ ಉಂಟಾಗಿದೆ. ಕೆಲವು ಯು ಟರ್ನ್‌ಗಳಲ್ಲಿ ದ್ವಿಚಕ್ರ ವಾಹನಗಳು ಸ್ಲೀಪ್ ಆಗುವ ರೀತಿಯಲ್ಲಿ ಕಾಮಗಾರಿಯನ್ನು ಅರ್ಧಂಬರ್ಧ ಮಾಡಲಾಗಿದೆ. ಇದೆಲ್ಲವು ಅಪಾಯವನ್ನು ಆಹ್ವಾನಿಸುವಂತಿದೆ.

ಅದೇ ರೀತಿ ಅಲ್ಲಲ್ಲಿ ಫುಟ್‌ಪಾತ್ ಸಹಿತ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿರುವುದರಿಂದ ಪಾದಾಚಾರಿಗಳು ಇದರಲ್ಲಿ ನಡೆಯುವುದೇ ಅಪಾಯ ಎಂಬಂತಿದೆ. ಇಂದ್ರಾಳಿಯ ಕಾರ್ಪೊರೇಶನ್ ಬ್ಯಾಂಕಿನ ಎದುರಿನ ಚರಂಡಿಯಲ್ಲಿ ನೀರು ನಿಂತಿದ್ದು, ಜನ ಚರಂಡಿ ದಾಟಲು ಪರದಾಡುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಡಿಸುತಿದ್ದಾರೆ.

ಅಲ್ಲದೆ ಮಣಿಪಾಲ ಕುಂಡೇಲು ಕಾಡಿನ ಪ್ರದೇಶದಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದು ಬರುವುದರಿಂದ ಮುಂದೆ ಮತ್ತಷ್ಟು ಸಮಸ್ಯೆ ಉಂಟಾಗ ಬಹುದು ಎಂಬುದು ಸಾರ್ವಜನಿಕರ ಆತಂಕವಾಗಿದೆ. ರಾತ್ರಿ ಸಮಯ ಮಳೆ ಸುರಿಯುತ್ತಿರುವ ಸಂದರ್ಭ ಈ ರಸ್ತೆಯಲ್ಲಿ ಸಂಚರಿಸುವುದೇ ಬಹಳಷ್ಟು ಅಪಾಯಕಾರಿಯಾಗಿದೆ. ಮಳೆಗಾಲ ಆರಂಭಕ್ಕೆ ಮುನ್ನವೇ ಜಿಲ್ಲಾಡಳಿತ ಈ ಕುರಿತು ಎಚ್ಚರಿಕೆ ನೀಡಿದರೂ ಹೆದ್ದಾರಿ ಇಲಾಖೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News