ಅಸೈಗೋಳಿ ಸಮೀಪ ಸರಣಿ ಅಪಘಾತ

Update: 2019-06-14 13:22 GMT

ಕೊಣಾಜೆ : ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಸಮೀಪ ಶುಕ್ರವಾರ ಮಧ್ಯಾಹ್ನದ ವೇಳೆ ಸರಣಿ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಅದೃಷ್ಟವಶಾತ್  ಪ್ರಾಣಪಾಯದಿಂದ ಪಾರಾಗಿದ್ದಾರೆ.

ಪಾವೂರು ಗ್ರಾಮದ ಇನೋಳಿ ಕಂಬಳಪದವು ನಿವಾಸಿ ನಝೀರ್ ಎಂಬವರೇ ಅಪಾಯದಿಂದ ಪಾರಾದವರು. ಇವರು ಎಂದಿನಂತೆ ಶುಕ್ರವಾರ ಮಧ್ಯಾಹ್ನದ ವೇಳೆ ತಮ್ಮ ಕಾರಿನಲ್ಲಿ ಮನೆಯಿಂದ ದೇರಳಕಟ್ಟೆಯಲ್ಲಿರುವ ತಮ್ಮ ಬಟ್ಟೆ ಅಂಗಡಿಗೆ ಹೋಗುತ್ತಿದ್ದರು. ಅಸೈಗೋಳಿ ದಾಟಿ ತಿಬ್ಲೆಪದವು ತಲುಪಿದಾಗ ಎದುರಿನಲ್ಲಿ ಜೆಸಿಬಿ ರಸ್ತೆಬದಿ ಕಾಮಗಾರಿಯಲ್ಲಿ ನಿರತವಾಗಿದ್ದರಿಂದ ಕಾರಿನ ಮುಂದಿನಿಂದ ಹೋಗುತ್ತಿದ್ದ ಸರ್ಕಾರಿ ಬಸ್ಸು ನಿಲ್ಲಿಸಲಾಯಿತು. ಈ ಸಂದರ್ಭ ನಝೀರ್ ಕಾರನ್ನು ನಿಲ್ಲಿಸಿದ್ದಾರೆ. 

ಈ ಸಂದರ್ಭ ಹಿಂದಿನಿಂದ ವೇಗವಾಗಿ ಬಂದ ಸರ್ವೀಸ್ ಬಸ್ಸು ಕಾರಿನ ಹಿಂಭಾಗಕ್ಕೆ ಬಲವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಮುಂದಕ್ಕೆ ಚಲಿಸಿ ಸರ್ಕಾರಿ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನ ಮುಂಭಾಗ ಮತ್ತು ಹಿಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಚಾಲನೆ ಮಾಡುತ್ತಿದ್ದ ನಝೀರ್ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಈ ಬಗ್ಗೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News