ಉಳ್ಳಾಲ ದರ್ಗಾ ಬಳಿ ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ

Update: 2019-06-16 10:51 GMT

ಉಳ್ಳಾಲ, ಜೂ.16: ಐತಿಹಾಸಿಕ ಉಳ್ಳಾಲ ದರ್ಗಾಕ್ಕೆ ಹೊರ ಊರಿನಿಂದ ಬರುವ ಯಾತ್ರಿಕರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ 75 ಲಕ್ಷ ರೂ.ಅನುದಾನದಲ್ಲಿ ದರ್ಗಾ ವಠಾರದಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ರವಿವಾರ ಶಿಲಾನ್ಯಾಸಗೈದರು.

ಉಳ್ಳಾಲದಲ್ಲೂ ಮಂಗಳೂರಿನಂತೆ ದೊಡ್ಡ ಕಟ್ಟಡಗಳು ನಿರ್ಮಾಣಗೊಳ್ಳಬೇಕಿದ್ದರೆ ಒಳಚರಂಡಿ, ಕುಡಿಯುವ ನೀರಿನ ಸಮಸ್ಯೆಯೂ ಇರಬಾರದು. ಅದಕ್ಕಾಗಿ ಶಾಶ್ವತ ಪರಿಹಾರ ಕ್ರಮ ಜರುಗಿಸಲಾಗುವುದು. ಈಗಾಗಲೇ ರಾಜಮಾರ್ಗ ನಿರ್ಮಾಣವಾಗಿದ್ದು, ಮತ್ತೆ 12 ಕೋ.ರೂ. ರಸ್ತೆ ಅಭಿವೃದ್ಧಿಗೆ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ಉಳ್ಳಾಲದ ರಸ್ತೆಗಳು ಜಿಲ್ಲೆಯಲ್ಲೇ ಮಾದರಿ ರಸ್ತೆಯಾಗಿ ಪರಿವರ್ತನೆಯಾಗಲಿದೆ. ಉಳ್ಳಾಲದ ಇತಿಹಾಸ ಮತ್ತೆ ಮರುಕಳಿಸಬೇಕು ಎನ್ನುವ ನೆಲೆಯಲ್ಲಿ ತಾಲೂಕು ಘೋಷಣೆಯನ್ನೂ ಮಾಡಲಾಗಿದೆ ಎಂದು ಯು.ಟಿ.ಖಾದರ್ ನುಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಮತ್ತು ಸೈಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಗಂಜಿ ಕೇಂದ್ರಕ್ಕೆ 25 ಲಕ್ಷ ರೂ., ಸಭಾಂಗಣ ಚಪ್ಪರಕ್ಕೆ 10 ಲಕ್ಷ ರೂ. ಅನುದಾನ ಅಗತ್ಯವಿದೆ. ಯಾತ್ರಿ ನಿವಾಸಕ್ಕೆ ಹೆಚ್ಚಿನ ಅನುದಾನ ಅಗತ್ಯವಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದರ್ಗಾಕ್ಕೆ ಬರುವುದರಿಂದ ಹನ್ನೊಂದು ಕೋಣೆಗಳು ಯಾತ್ರಿ ನಿವಾಸಕ್ಕೆ ಸಾಕಾಗದು. ಮುಂದಿನ ವರ್ಷ ಉರೂಸ್ ನಡೆಯುವುದರಿಂದ ಹೆಚ್ಚಿನ ಕೆಲಸ ನಡೆಯಬೇಕಾಗಿದೆ ಎಂದರು.

ಉಳ್ಳಾಲ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ದುಆಗೈದರು. ಕ್ರೀಡಾ ಸಚಿವ ರಹೀಂ ಖಾನ್, ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಬಾಖವಿ, ಅರಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನುಲ್ ಫೈಝಿ ತೋಡಾರ್, ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಯು.ಕೆ.ಮೋನು ಇಸ್ಮಾಯಿಲ್, ಬಾವ ಮುಹಮ್ಮದ್, ಕೋಶಾಧಿಕಾರಿ ಯು.ಕೆ. ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಜತೆ ಕಾರ್ಯದರ್ಶಿಗಳಾದ ನೌಷಾದ್ ಅಲಿ, ಅಝಾದ್ ಇಸ್ಮಾಯಿಲ್, ಸದಸ್ಯರಾದ ಫಾರೂಕ್ ಉಳ್ಳಾಲ್, ಅಯೂಬ್ ಮಂಚಿಲ, ಅರಬಿಕ್ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಅಮೀರ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಯು.ಕೆ.ಇಬ್ರಾಹಿಂ ಉಪಸ್ಥಿತರಿದ್ದರು.

ಯು.ಕೆ.ಮುಹಮ್ಮದ್ ಮುಸ್ತಫಾ ಮಂಚಿಲ ಕಾರ್ಯಕ್ರಮ ನಿರೂಪಿಸಿದರು.

‘ಉಳ್ಳಾಲ ದರ್ಗಾಕ್ಕೆ ಟೆಂಪೋ, ಲಾರಿಯಲ್ಲಿ ಜನ ಬರುವುದನ್ನು ತಪ್ಪಿಸಲು ಉಳ್ಳಾಲ, ಧರ್ಮಸ್ಥಳ ಮೂಲಕ ಜಾವಗಲ್ ತಲುಪುವ ಸೌಹಾರ್ದ ಸರಕಾರಿ ಬಸ್ ವ್ಯವಸ್ಥೆ ಆರಂಭಿಸುವ ಯೋಜನೆ ಇದೆ. ಈ ಬಗ್ಗೆ ಸರಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು’
ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News