ಹಲಸಿನ ಮೌಲ್ಯವರ್ಧನೆಗೆ ತೋಟಗಾರಿಕಾ ಇಲಾಖೆ ಸಂಶೋಧನೆ ನಡೆಸಬೇಕು: ಗ್ಯಾಬ್ರಿಯಲ್ ವೇಗಸ್

Update: 2019-06-16 14:31 GMT

ಪುತ್ತೂರು: ಹಲಸಿನ ಮೌಲ್ಯವರ್ಧನೆಗಾಗಿ ಸರ್ಕಾರದ ತೋಟಗಾರಿಕಾ ಇಲಾಖೆಯು ಸಮರ್ಪಕ ಸಂಶೋಧನೆ ನಡೆಸುವುದರ ಜೊತೆಗೆ ಸೂಕ್ತ ತಳಿಗಳನ್ನು ಕೃಷಿಕರಿಗೆ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಒದಗಿಸುವ ಕೆಲಸ ಮಾಡಬೇಕು. ಎಂದು ನಿವೃತ್ತ ಅರಣ್ಯಾಧಿಕಾರಿ ಗ್ಯಾಬ್ರಿಯಲ್ ವೇಗಸ್ ಅವರು ಅಭಿಪ್ರಾಯಪಟ್ಟರು.

ಅವರು ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಹಲಸು ಸ್ನೇಹ ಸಂಗಮ, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಮತ್ತು ಮಹಾಲಿಂಗೇಶ್ವರ ದೇವಾಲಯದ ಆಶ್ರಯದಲ್ಲಿ ಪುತ್ತೂರು ಜೇಸಿಐ ಸಂಸ್ಥೆ ಹಾಗೂ  ಸಂಘಟನೆಗಳ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ "ಹಲಸು ಸಾರ ಮೇಳ' ಕಾರ್ಯಕ್ರಮದ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಸರ್ಕಾರದ ಇಲಾಖೆಗಳ ಸಹಕಾರ ಲಭಿಸಿದರೆ ಮಾತ್ರ ರೈತರು ಹಲಸು ಕೃಷಿ ಮಾಡಿ, ಹಲಸಿನ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಸಾಧ್ಯವಾಗಬಹುದು ಎಂದ ಅವರು, ಹಲಸಿನ ಅಭಿವೃದ್ಧಿ, ಅಭಿಯಾನ ಮುಂದಿನ ಪೀಳಿಗೆಗೆ ತಲುಪಿಸಬೇಕಾದರೆ ಉತ್ತಮ ತಳಿಯ ಹಲಸನ್ನು ಬೆಳೆಯುವ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು, ಕಳೆದ ಕೆಲವು ವರ್ಷಗಳಿಂದ ಜನಪ್ರಿಯ ಪಡೆಯುತ್ತಿರುವ ಹಲಸಿನ ಮೇಲೆ ಸಹಕಾರಿ ಸಂಸ್ಥೆ ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಆದ್ಯತೆ ಮೇರೆಗೆ ಕೆಲಸ ಮಾಡಲಿದೆ. ಹಲಸಿನ ಬೀಜದಲ್ಲಿರುವ ಪ್ರೊಟೀನ್‍ಗಳು, ಅದರಿಂದ ತಯಾರಿಸಬಹುದಾದ ಚಾಕಲೇಟ್ ಮೊದಲಾದ ಉತ್ಪನ್ನಗಳ ಸಂಶೋಧನೆಯನ್ನು ಕ್ಯಾಂಪ್ಕೋ ಮಾಡಲಿದ್ದು, ಇದಕ್ಕಾಗಿ ಈಗಾಗಲೇ ತಜ್ಞರ ಜತೆ ಚರ್ಚೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದ ಅವರು ರೈತರ ಆದಾಯ ಹೆಚ್ಚಿಸುವಲ್ಲಿ ಹಲಸು ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಆಲಂಗಾರಿನ ಹಲಸು ಕಸಿ ತಜ್ಞ ಶ್ರೀಕೃಷ್ಣ ಕೆದಿಲಾಯ ಅವರನ್ನು ಸನ್ಮಾನಿಸಲಾಯಿತು. ಮುಳಿಯ ವೆಂಕಟಕೃಷ್ಣ ಶರ್ಮ ಅವರು ಅಭಿನಂದನಾ ಮಾತುಗಳನ್ನಾಡಿದರು.

ಹಲಸು ಸ್ನೇಹ ಸಂಗಮದ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಲಸು ಸ್ನೇಹ ಸಂಗಮದ ಕಾರ್ಯದರ್ಶಿ ಸುಹಾಸ್ ಮರಿಕೆ, ಗೌರವ ಸಲಹೆಗಾರ ಜಯರಾಮ ಕೆದಿಲಾಯ ಶಿಬಿರ, ಸಂಚಾಲಕ ಸತೀಶ್.ಕೆ, ಖಜಾಂಜಿ ಪ್ರಕಾಶ್‍ಕುಮಾರ್ ಕೊಡೆಂಕಿರಿ, ಜೆಸಿಐ ಅಧ್ಯಕ್ಷ ಗೌತಮ್ ರೈ, ಉಪಸ್ಥಿತರಿದ್ದರು.

ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಸ್ವಾಗತಿಸಿದರು. ಅಡಿಕೆ ಪತ್ರಿಕೆಯ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News