ಭಟ್ಕಳ: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ

Update: 2019-06-16 15:33 GMT

ಭಟ್ಕಳ: ತಾಲೂಕಿನಲ್ಲಿನ ಕಾರ್ಮಿಕ ಇಲಾಖೆಯ ಹೆಸರಿನಲ್ಲಿ ನಡೆಯುತ್ತಿರುವ ವಸೂಲಿ ಮತ್ತು ಭ್ರಷ್ಟಾಚಾರವನ್ನು ತಡೆಯುವ ಬಗ್ಗೆ ಹಾಗೂ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘ ಭಟ್ಕಳ ಘಟಕದಿಂದ  ಮನವಿ ಸಲ್ಲಿಸಲಾಯಿತು.

ಕಾರ್ಮಿಕ ಇಲಾಖೆಯಲ್ಲಿ ಏಜೆಂಟರ ಹಾವಳಿ ಜಾಸ್ತಿಯಾಗಿದ್ದು, ಕಾರ್ಮಿಕರ ಇಲಾಖೆಯಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಎನ್ನುವಂತಾಗಿದೆ. ಕಟ್ಟಡ ಕಾರ್ಮಿಕರು ಮತ್ತಿತ್ತರ ಕೂಲಿ ಕಾರ್ಮಿಕರಿಗೆ ಕಾರ್ಡ್ ಮಾಡಿಸಿಕೊಡುತ್ತೇವೆ. ವಿದ್ಯಾರ್ಥಿ ವೇತನ ಕೊಡಿಸುತ್ತೇವೆ, ಮದುವೆ ಪ್ರೋತ್ಸಾಹ ಧನ ತೆಗೆಯಿಸಿಕೊಡುತ್ತೇವೆ ಎಂದು ಹೇಳಿ ಯಾಮಾರಿಸಿ ಮಹಿಳೆಯರು ಮತ್ತು ಕೂಲಿ ಕಾರ್ಮಿಕರ ಬಳಿ 3-5 ಸಾವಿರ ತೆಗೆದುಕೊಂಡು ಕಾರ್ಡ್ ಮತ್ತು ಸೌಲಭ್ಯ ಒದಗಿಸದೇ ಸತಾಯಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಭಟ್ಕಳದಲ್ಲಿ ಗಲ್ಲಿ ಗಲ್ಲಿಗೆ ಕಾರ್ಮಿಕ ಏಜೆಂಟ್ ಹಾವಳಿ ಇದ್ದು, ಇದನ್ನು ಶೀಘ್ರದಲ್ಲೇ ತಡೆಯಬೇಕಿದೆ. ಕಾರ್ಮಿಕ ಇಲಾಖೆ ಹೆಸರಿನಲ್ಲಿ ಹಣ ವಸೂಲಿ ಕಾರ್ಯ ಭರದಿಂದ ಸಾಗಿದ್ದು, ಇಲಾಖೆಯ ಹೆಸರು ಹಾಳಾಗುವಂತೆ ಆಗಿದೆ. ಮಹಿಳೆಯರು ಹಣ ವಸೂಲಿಯಿಂದ ರೊಚ್ಚಿಗೆಗಿದ್ದು, ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ. ಮದುವೆ ಪ್ರೋತ್ಸಾಹ ಧನಕ್ಕೆ ಸರ್ಕಾರದಿಂದ ಸಿಗುವ 50 ಸಾವಿರದಲ್ಲಿ ಕಾರ್ಮಿಕ ಅಧಿಕಾರಿಗೆ 2 ಸಾವಿರ ಏಜೆಂಟರಿಗೆ 3 ಸಾವಿರ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ 5 ಸಾವಿರ ಸೇರಿ ಒಟ್ಟು 10 ಸಾವಿರ ಲಂಚ ಕೇಳಲಾಗುತ್ತಿದೆ. ಲಂಚದ ಹಾವಳಿಯಿಂದ ಕೂಲಿ ಕಾರ್ಮಿಕರು ಸರಕಾರಿ ಸೌಲಭ್ಯ ಸಿಗದೆ ಕಂಗಾಲಾಗುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಯಾರಿಗೂ ಕಾರ್ಡ್ ಬಂದಿಲ್ಲ ಎಲ್ಲರೂ ಹಣ ಕೊಟ್ಟು ಸೌಲಭ್ಯಕ್ಕಾಗಿ ಕಾಯುವಂತಾಗಿದೆ. ಕಾರ್ಮಿಕ ಇಲಾಖೆಯ ಭ್ರಷ್ಟಾಚಾರವನ್ನು ಹತ್ತಿಕ್ಕಿ ಏಜೆಂಟರ ಹಾವಳಿಯನ್ನು ತಡೆಯಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಗಾಯಾಳುಗಳನ್ನು ದೂರದ ಹುಬ್ಬಳ್ಳಿ, ಗೋವಾ, ಉಡುಪಿ, ಮಂಗಳೂರು ಮುಂತಾದ ಪ್ರದೇಶಗಳಿಗೆ ಸಾಗಿಸಲಾಗುತ್ತದೆ. ಇದಕ್ಕೆ ಕಾರಣ ಸರಿಯಾದ ಆಸ್ಪತ್ರೆ ವ್ಯವಸ್ಥೆ ಕಲ್ಪಿಸದಿರುವುದು. ಹೀಗಾಗಿ ಉತ್ತರ ಕನ್ನಡದ ಮಧ್ಯ ಭಾಗವೆನಿಸಿರುವ ಹಾಗೂ ಎಲ್ಲ ತಾಲ್ಲೂಕುಗಳಿಗೂ ಸಮಾನ ದೂರ ಇರುವ ಕುಮಟಾ ಅಥವಾ ಇನ್ನಿತರ ಪ್ರದೇಶದಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಜೊತೆಗೆ ಪ್ರತಿ ತಾಲೂಕಿನಲ್ಲೂ ಸರ್ಕಾರಿ ಆಸ್ಪತ್ರೆ ಸೂಕ್ತ ವ್ಯವಸ್ಥೆ ಅಳವಡಿಸಿ ರೋಗಿಗಳಿಗೆ ತ್ವರಿತ ಚಿಕಿತ್ಸೆ ಮತ್ತು ವೈದ್ಯರು ಸಿಬ್ಬಂದಿಗಳಿಂದ ಸ್ಪಂದನೆ ದೊರಕಿಸಿಕೊಡಬೇಕು ಹಾಗೂ ಆದಷ್ಟು ಬೇಗ ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳು ಪ್ರಯತ್ನ ನಡೆಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿಯನ್ನು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.

ಈ ಸಂಧರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಕೆ.ಎಮ್.ಶರೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಅಲಿ ಮಲ್ಲಿಕ್, ಜಿಲ್ಲಾ ಸಹ ಕಾರ್ಯದರ್ಶಿ ರಾಮಚಂದ್ರ ಗೊಂಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News