ಶಿಕ್ಷಕ ಬಿ.ಎಂ ತುಂಬೆಗೆ ಬೀಳ್ಕೊಡುಗೆ ಕಾರ್ಯಕ್ರಮ
ಬಂಟ್ವಾಳ, ಜೂ. 18: ಶಿಕ್ಷಕನೋರ್ವ ನಿರಂತರ ಶೈಕ್ಷಣಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಾನು ಬೆಳೆಯುವುದರ ಜೊತೆಗೆ ತನ್ನ ಅಪಾರ ವಿದ್ಯಾರ್ಥಿ ವೃಂದಕ್ಕೂ ಸ್ಫೂರ್ತಿಯುತವಾಗಿ ಕಾರ್ಯ ನಿರ್ವಹಿಸುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಶಿಕ್ಷಕ ಬಿ.ಎಂ ತುಂಬೆಯವರ ಸೇವೆ ಮಾದರಿ ಎಂದು ಬಿಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಯೂಸುಫ್ ವಿಟ್ಲ ಅಭಿಪ್ರಾಯಪಟ್ಟರು.
ಅವರು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಜುಲೈ ತಿಂಗಳಲ್ಲಿ ನಡೆಯಲಿರುವ ಸ್ಕೌಟ್ಸ್ ಗೈಡ್ಸ್ನ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗವಹಿಸಲು ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಸುಜೀರು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಬಿ.ಮುಹಮ್ಮದ್ ತುಂಬೆ ಇವರನ್ನು ಗೋಳ್ತಮಜಲಿನ ಅನಂತಾಡಿ ನಿವಾಸದಲ್ಲಿ ನಡೆದ ಬೀಳ್ಕೊಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿತ್ತಿದ್ದರು.
ಉಪನ್ಯಾಸಕ ಶಮಿವುಲ್ಲಾ ವಗ್ಗ ಅಭಿನಂದನಾ ಮಾತುಗಳನ್ನಾಡಿ, ಮುಹಮ್ಮದ್ ತುಂಬೆಯವರ ಕರ್ತವ್ಯದ ಹಿನ್ನೋಟವನ್ನು ಸಭೆಯ ಮುಂದಿಟ್ಟರು.
ಹವ್ಯಾಸಿ ವಸ್ತು ಸಂಗ್ರಾಹಕ ಅಬ್ದುಲ್ ಸಮದ್ ಬಾವಾ ಹಾಜಿ ಪುತ್ತೂರು ಬಿ. ಮುಹಮ್ಮದ್ ತುಂಬೆ ಅವರನ್ನು ಸನ್ಮಾನಿಸಿದರು. ವಕೀಲ ಅಬೂಬಕರ್ ನೋಟರಿ ವಿಟ್ಲ, ಬಿಎಸೆನ್ನೆಲ್ ಉದ್ಯೋಗಿ ಇಬ್ರಾಹಿಂ ಡಿ.ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿ ಹೊಂದಲಿರುವ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಕ್ಕರಂಗಡಿಯ ಮುಖ್ಯ ಶಿಕ್ಷಕ ಹಾಜಿ ಫಕ್ರುದ್ದೀನ್ ಮತ್ತು ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಅಭಿಯಂತರರಾಗಿ ನೇಮಕಾತಿ ಹೊಂದಿದ ಅಶ್ರಫ್ ಕೆಲಿಂಜ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಚ್ ಇಬ್ರಾಹಿಂ, ರಶೀದ್ ವಿಟ್ಲ, ಮುಹಮ್ಮದ್ ಕೆಎಸ್ಸಾರ್ಟಿಸಿ, ಅಬ್ದುಲ್ ಲತೀಫ್ ಮೆಲ್ಕಾರ್, ಕೆ.ಎಸ್ ಅಬೂಬಕರ್ ಮೂಡಬಿದ್ರೆ, ಸುಲೈಮಾನ್ ಸೂರಿಕುಮೇರು, ನಿವೃತ್ತ ಪಿ.ಡಿ.ಒ ಮುಹಮ್ಮದ್ ಕಲ್ಲಡ್ಕ, ಅಬ್ದುಲ್ ಲತೀಫ್ ನೇರಳಕಟ್ಟೆ, ಅಬ್ಬಾಸ್ ಎನ್.ಎಚ್, ಅಬ್ದುಲ್ ಹಮೀದ್ ಗೋಳ್ತಮಜಲು, ಅಬ್ದುಲ್ ಕರೀಮ್ ಕೋಟೆಕಣಿ, ಪಿ.ಮುಹಮ್ಮದ್, ಅಬ್ದುಲ್ ಹಮೀದ್ ಕಣ್ಣೂರು, ಅಬ್ದುಲ್ ಹಕೀಮ್ ಕಲಾಯಿ, ಇಸಾಕ್ ವಿಟ್ಲ ,ಸುಲೈಮಾನ್ ಪಟ್ಟೆಕೋಡಿ, ಉಮರ್ ಪಂತಡ್ಕ, ಫಾರೂಕ್ ಪಟ್ಟೆಕೋಡಿ, ಹಮೀದ್ ಪಂತಡ್ಕ, ಆದಂ ಸೇರಾ ಉಪಸ್ಥಿತರಿದ್ದರು.
ಅಬ್ದುಲ್ ರಝಾಕ್ ಅನಂತಾಡಿ ಸ್ವಾಗತಿಸಿ, ವಂದಿಸಿದರು. ಮಾಸ್ಟರ್ ಮುಹಮ್ಮದ್ ರಿಶಾನ್ ಕಿರಾಅತ್ ಪಠಿಸಿದರು. ಉಪನ್ಯಾಸಕ ಅಬ್ದುಲ್ ಮಜೀದ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.