ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣದ ಕನಸಿದೆ : ಉಮಾನಾಥ ಕೋಟ್ಯಾನ್
ಮೂಡುಬಿದಿರೆ : ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳ, ಯುವಕ-ಯುವತಿಯರ ಬೇಡಿಕೆಯಂತೆ ಮೂಡುಬಿದಿರೆಗೆ ವೈಫೈ ಸೇವೆಯನ್ನು ಒದಗಿಸಲಾಗಿದೆ. ಎಂಆರ್ಪಿಎಲ್ನವರ ಸಹಕಾರದೊಂದಿಗೆ ನಿಲ್ದಾಣದಲ್ಲಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮುಂದೆ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಾಣದ ಕನಸಿದೆ ಇದಕ್ಕಾಗಿ ನೀಲ ನಕಾಶೆಯನ್ನು ಸಿದ್ಧಗೊಳಿಸಿ ಕಂಪನಿಗೆ ನೀಡಲಾಗುವುದು ಎಂದು ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಮಂಗಳವಾರ ಮೂಡುಬಿದಿರೆಯಲ್ಲಿ ಉಚಿತ ವೈಫೈ ಸೇವೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಶಾಸಕನ ನಿಧಿ 10ಲಕ್ಷ ರೂ ಅನುದಾನವನ್ನು ವಿನಿಯೋಗಿಸಿ ಮೂಲ್ಕಿ-ಬಜ್ಪೆ-ಮೂಡುಬಿದಿರೆಗಳಲ್ಲಿ ವೈಫೈ ಸೇವೆಯನ್ನು ಒದಗಿಸಲಾಗಿದೆ. ಮೂಡುಬಿದಿರೆಯಲ್ಲಿ 500ಮೀ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಕೆ.ಪಿ.ಜಗದೀಶ ಅಧಿಕಾರಿ, ಸುದರ್ಶನ್ ಎಂ, ಮೇಘನಾಧ ಶೆಟ್ಟಿ, ಬಾಹುಬಲಿ ಪ್ರಸಾದ್, ಇಸ್ಮಾಯಿಲ್ ಪುರಸಭಾ ಸದಸ್ಯರು ಮತ್ತಿತರರಿದ್ದರು. ಹರೀಶ್ ಎಂ.ಕೆ.ಕಾರ್ಯಕ್ರಮ ನಿರೂಪಿಸಿದರು.