ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಿಳಿದ ಬಸ್

Update: 2019-06-19 12:41 GMT

ಬಂಟ್ವಾಳ, ಜೂ. 19: ಎದುರಿನಿಂದ ಓವರ್ ಟೇಕ್ ಮಾಡಿ ಬರುತ್ತಿದ್ದ ಟ್ಯಾಂಕರ್‍ಗೆ ದಾರಿಕೊಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಸರಕಾರಿ ಬಸ್ಸೊಂದು ರಸ್ತೆ ಬದಿಯ ಚರಂಡಿಗಿಳಿದು ವಾಲಿನಿಂತ ಘಟನೆ ವಿಟ್ಲದ ಮಾಣಿ ಸಮೀಪ ಬುಧವಾರ ನಡೆದಿದೆ.

ಘಟನೆಯಿಂದ ಬಸ್‍ನಿರ್ವಾಹಕನೋರ್ವ ಗಾಯಗೊಂಡಿದ್ದು, ಪ್ರಯಾಣಿಕರೆಲ್ಲರು ಅಪಾಯದಿಂದ ಪಾರಾಗಿದ್ದಾರೆ. ಸುಬ್ರಹ್ಮಣ್ಯ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಅಳಿರ ಎಂಬಲ್ಲಿ ಎದುರಿನಿಂದ ಟ್ಯಾಂಕರ್ ಲಾರಿಯು ಓವರ್ ಟೇಕ್ ಮಾಡಿಕೊಂಡು ಬಂದಿದೆ. ಈ ವೇಳೆ ಬಸ್ ಚಾಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಲು ರಸ್ತೆ ಬದಿಗೆ ಸರಿಸಿದಾಗ, ನಿಯಂತ್ರಣ ತಪ್ಪಿದ ಬಸ್ ಚರಂಡಿಗಿಳಿದಿದೆ. ಘಟನೆಯಿಂದ ಬಸ್ ನಿರ್ವಾಹಕನಿಗೆ ಗಾಯವಾಗಿದ್ದು, ಇವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ಸಿನಲ್ಲಿ 40ಕ್ಕಿಂತಲೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದು, ತುರ್ತು ನಿರ್ಗಮನದ ಬಾಗಿಲಿನ ಮೂಲಕ ಹೊರ ಬಂದು ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ವಿಟ್ಲ ಎಸ್ಸೈ ಯಲ್ಲಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News