ಬಂಟ್ವಾಳ: ಮನೆಗೆ ನುಗ್ಗಿ ಕಳವು

Update: 2019-06-19 15:48 GMT

ಬಂಟ್ವಾಳ, ಜೂ. 19: ತಾಲೂಕಿನ ಮಂಚಿ ಗ್ರಾಮದ ಮೊಂತಿಮಾರುಪಡ್ಪು ಎಂಬಲ್ಲಿ ಮನೆಯೊಂದರ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಸುಲಿದ ಅಡಿಕೆಯನ್ನು ಕಳವು ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮೊಂತಿಮಾರುಪಡ್ಪು ನಿವಾಸಿ ಮೊಯ್ದಿನ್ ಎಂಬವರಿಗೆ ಸೇರಿದ ಹಳೆಯ ಮನೆಯಲ್ಲಿ ಈ ಕಳವು ನಡೆದಿದೆ. ಸುಮಾರು 76 ಸಾವಿರ ರೂ. ಮೌಲ್ಯದ ಸುಮಾರು 3 ಕಿಂಟ್ವಾಲ್‍ನಷ್ಟು ಸುಲಿದ ಅಡಿಕೆಯನ್ನು ಕಳವುಗೈದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಯ್ದಿನ್ ಅವರು ಅಡಿಕೆ ಲೀಸ್ ಪಡೆಯುವ ವ್ಯಾಪಾರಿಯಾಗಿದ್ದು, ಲೀಸ್‍ಗೆ ಪಡೆದ ಅಡಿಕೆಯನ್ನು ಸುಲಿದು 9 ಗೋಣಿ ಚೀಲದಲ್ಲಿ ತುಂಬಿಸಿ ಹಳೇ ಮನೆಯಲ್ಲಿ ದಾಸ್ತಾನಿಟ್ಟು ಬೀಗ ಹಾಕಿ ತೆರಳಿದ್ದರು. ಬುಧವಾರ ಬೆಳಿಗ್ಗೆ ಅಡಿಕೆ ಸುಲಿಯಲು ಬಂದಿದ್ದ ಕಾರ್ಮಿಕರೊಂದಿಗೆ ಹಳೆ ಮನೆಗೆ ಬಂದಾಗ ಚಿಲಕ ಮುರಿದಿತ್ತು. ಒಳ ಹೋಗಿ ನೋಡಿದಾಗ 9 ಗೋಣಿ ಚೀಲದಲ್ಲಿ ಕೇವಲ 3 ಗೋಣಿಗಳು ಮಾತ್ರ ಉಳಿದಿದ್ದು, ಅಡಿಕೆ ತುಂಬಿದ 6 ಗೋಣಿಚೀಲ ಕಳವಾಗಿರುವುದು ಕಂಡು ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಪ್ರಸನ್ನ ಮತ್ತವರ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ,ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News