ಮಾವೋವಾದಿಗಳಿಂದ ಸಮಾಜವಾದಿ ಪಕ್ಷದ ಮುಖಂಡನ ಅಪಹರಣ, ಕೊಲೆ
Update: 2019-06-19 16:54 GMT
ರಾಯ್ಪುರ, ಜೂ.19: ಮಂಗಳವಾರ ಛತ್ತೀಸ್ಗಢದಲ್ಲಿ ಮಾವೋವಾದಿಗಳಿಂದ ಅಪಹರಿಸಲ್ಪಟ್ಟಿದ್ದ ಸಮಾಜವಾದಿ ಪಕ್ಷದ ನಾಯಕ ಸಂತೋಷ್ ಪೂನೆಮ್ರ ರಕ್ತಸಿಕ್ತ ಮೃತದೇಹ ಬುಧವಾರ ಬೆಳಿಗ್ಗೆ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಟ್ಟಡ ನಿರ್ಮಾಣ ಗುತ್ತಿಗೆದಾರನಾಗಿದ್ದ ಪೂನೆಮ್ರನ್ನು ಮರಿಮಲ್ಲ ಗ್ರಾಮದಿಂದ ಮಾವೋವಾದಿಗಳು ಮಂಗಳವಾರ ಅಪಹರಿಸಿದ್ದರು. ಅಲ್ಲದೆ ಸ್ಥಳದಲ್ಲಿದ್ದ ನಾಲ್ಕು ವಾಹನಗಳಿಗೆ ಬೆಂಕಿಹಚ್ಚಿದ್ದರು. ಬುಧವಾರ ಪೊಲೀಸ್ ಠಾಣೆಗಿಂತ 16 ಕಿ.ಮೀ. ದೂರದ ಕಾಡಿನಲ್ಲಿ ಪೂನೆಮ್ರ ರಕ್ತಸಿಕ್ತ ದೇಹವನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭದ್ರತಾ ಪಡೆಗಳ ತಂಡ ಧಾವಿಸಿದೆ ಎಂದು ಮೂಲಗಳು ತಿಳಿಸಿವೆ.
ಸಮಾಜವಾದಿ ಪಕ್ಷದ ಬಿಜಾಪುರ ಜಿಲ್ಲಾ ಘಟಕದ ಉಪಾಧ್ಯಕ್ಷನಾಗಿರುವ ಸಂತೋಷ್ ಪೂನೆಮ್ ಛತ್ತೀಸ್ಗಢದಲ್ಲಿ ಇತ್ತೀಚೆಗೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು.