​ರೇಷನ್ ಕಾರ್ಡ್ ‘ಇ-ಕೆವೈಸಿ’ ಅಪ್ಲೋಡ್‌ಗೆ ಜು.15ರವರೆಗೆ ತಡೆ

Update: 2019-06-20 13:31 GMT

ಮಂಗಳೂರು, ಜೂ.20: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ನಿಯಮದಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಆಹಾರಧಾನ್ಯ ಪಡೆಯುತ್ತಿರುವ (ಅಂತ್ಯೋದಯ, ಬಿಪಿಎಲ್, ಎಪಿಎಲ್) ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ತೆರಳಿ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ಜೂ.1ರಿಂದ ಅಪ್ಲೋಡ್ ಮಾಡಲು ನೀಡಿದ್ದ ಆದೇಶಕ್ಕೆ ಇದೀಗ ತಡೆ ಬಿದ್ದಿದೆ.

ಅಂದರೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರು ಜೂ.20ರಂದು ಹೊರಡಿಸಿದ ಹೊಸ ಆದೇಶದಲ್ಲಿ ಜುಲೈ 15ರವರೆಗೆ ಅಪ್ಲೋಡ್ ಮಾಡದಂತೆ ತಾತ್ಕಾಲಿಕ ತಡೆ ನೀಡಿದ್ದಾರೆ.

ಈ ಬಗ್ಗೆ ಇಲಾಖೆಯ ಎಲ್ಲಾ ಜಂಟಿ ನಿರ್ದೇಶಕರು, ಉಪನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗೆ ಆದೇಶದ ಪ್ರತಿ ರವಾನಿಸಲಾಗಿದೆ. ಇದರಿಂದ ‘ಇ-ಕೆವೈಸಿ’ ಮಾಡಲು ಓಡಾಡುತ್ತಿದ್ದ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿದಾರರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಜೂ.1ರಿಂದ ಜುಲೈ 31ರೊಳಗೆ ಇ ಕೆವೈಸಿ ಮಾಡಬೇಕು ಎಂದು ಇಲಾಖಾಧಿಕಾರಿಗಳು ಸೂಚಿಸಿದ ಹಿನ್ನಲೆಯಲ್ಲಿ ಜಿಲ್ಲೆಯ 435 ನ್ಯಾಯಬೆಲೆ ಅಂಗಡಿಗಳ ಮಾಲಕರು ಕಂಪ್ಯೂಟರ್ ಬಲ್ಲವರ ಹುಡುಕಾಟದಲ್ಲಿ ತೊಡಗಿದ್ದರು. ಕೆಲವರು ಅಪ್ಲೋಡ್ ಪ್ರಕ್ರಿಯೆಯನ್ನು ನಿಧಾನಗತಿಯಲ್ಲಿ ಆರಂಭಿಸಿದ್ದರೆ ಇನ್ನು ಕೆಲವರು ಈ ಕೆಲಸಕ್ಕೆ ಜನರು ಸಿಗದೆ ಹತಾಶರಾಗಿದ್ದರು. ಇದೀಗ ತಾತ್ಕಾಲಿಕ ಆದೇಶ ಹೊರ ಬಿದ್ದ ಕಾರಣ ಎಲ್ಲರೂ ಓಡಾಟದಿಂದ ಮುಕ್ತರಾಗಿದ್ದಾರೆ.

‘ನಮಗೆ ಉಚಿತ ಅಕ್ಕಿ ಇಲ್ಲ. ಸೌಲಭ್ಯಗಳಲ್ಲೂ ಕಡಿತವಿದೆ. ಹಾಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ನಾವ್ಯಾಕೆ ಸಾಲುಗಟ್ಟಿ ನಿಲ್ಲಬೇಕು?’ ಎಂದು ಎಪಿಎಲ್ ಕಾರ್ಡ್‌ದಾರರು ಪ್ರಶ್ನಿಸಿದ್ದರು. ಅಲ್ಲದೆ ವಿದೇಶ ಹಾಗೂ ಹೊರ ರಾಜ್ಯಗಳಲ್ಲಿ ಕೆಲಸಕ್ಕಿದ್ದವರು ಪಡಿತರ ಚೀಟಿಯಿಂದ ತಮ್ಮ ಹೆಸರು ಡಿಲೀಟ್ ಆದೀತು ಎಂದು ಆತಂಕಿತರಾಗಿದ್ದರು. ಹಾಗಾಗಿ ಈ ಪ್ರಕ್ರಿಯೆಗೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಸರಕಾರದ ಆದೇಶದಿಂದ ಎಲ್ಲರೂ ಖುಷಿಯಾಗಿದ್ದಾರೆ.

ಜುಲೈ 15ರವರೆಗೆ ‘ಇ ಕೆವೈಸಿ’ ಅಪ್ಲೋಡ್ ಮಾಡದಂತೆ ಇಲಾಖೆಯ ಆಯುಕ್ತರಿಂದ ಆದೇಶ ಬಂದಿದೆ. ಅದನ್ನು ಎಲ್ಲಾ ನ್ಯಾಯಬೆಲೆ ಅಂಗಡಿದಾರರಿಗೆ ತಿಳಿಸಲಿದ್ದೇವೆ. ಜುಲೈ 15ರ ಬಳಿಕ ಮುಂದೇನು ಎಂಬುದರ ಬಗ್ಗೆ ಆಯುಕ್ತರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.
- ಸುನಂದಾ ವ್ಯವಸ್ಥಾಪಕಿ,
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
ದ.ಕ.ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News