ತನ್ನ ತಲೆಗೆ ತಾನೇ ಕಲ್ಲಿನಿಂದ ಹೊಡೆದ ಬಿಜೆಪಿ ಶಾಸಕ: ಪೊಲೀಸರಿಂದ ವಿಡಿಯೋ ಬಿಡುಗಡೆ

Update: 2019-06-20 14:45 GMT

ಹೈದರಾಬಾದ್, ಜೂ. 20: ತೆಲಂಗಾಣದ ಏಕೈಕ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಪೊಲೀಸರೊಂದಿಗೆ ಘರ್ಷಣೆಗೆ ಇಳಿಯುವುದು ಅಪರೂಪವಲ್ಲ. ಆದರೆ, ಬುಧವಾರ ರಾತ್ರಿ ರಾಜಾ ಸಿಂಗ್ ತನ್ನ ತಲೆಗೆ ಗಾಯ ಮಾಡಿಕೊಂಡು ಪೊಲೀಸರ ಥಳಿತದಿಂದ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.

 ಗೋಶಾಮಹಲ್ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಸಿಂಗ್ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅವಂತಿ ಬಾಯಿ ಅವರ 20 ಅಡಿ ಎತ್ತರದ ವಿಗ್ರಹವನ್ನು ಬುಧವಾರ ರಾತ್ರಿ 2 ಗಂಟೆಗೆ ಹೈದರಾಬಾದ್‌ನ ಜುಮ್ಮೇರಾತ್ ಬಜಾರ್‌ನಿಂದ ಗೋಶಾಮಹಲ್ ಪ್ರದೇಶಕ್ಕೆ ಸಾಗಿಸಿದ್ದರು. ಅನಂತರ ಆಸ್ಪತ್ರೆಗೆ ದಾಖಲಾಗಿದ್ದರು. ತಲೆಗೆ ಬ್ಯಾಂಡೇಜ್ ಸುತ್ತಿದ ವೀಡಿಯೊ ದೃಶ್ಯಾವಳಿಯೊಂದಿಗೆ ವೈದ್ಯಕೀಯ ವರದಿಯನ್ನು ಪ್ರಚಾರ ಮಾಡಿದ್ದರು.

ನಾಲ್ವರು ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಪೊಲೀಸರು ತಡೆಯಲು ಯತ್ನಿಸಿದ ಸಂದರ್ಭ ರಾಜಾ ಸಿಂಗ್ ಕಲ್ಲಿನಿಂದ ತಲೆಗೆ ಹೊಡೆದುಕೊಂಡಿರುವುದು ವೀಡಿಯೋವೊಂದರಲ್ಲಿ ದಾಖಲಾಗಿದೆ. ‘‘‘ಅವರು ತಾನೇ ತಲೆಗೆ ಕಲ್ಲಿನಿಂದ ಹೊಡೆದುಕೊಂಡಿದ್ದಾರೆ. ಅದರಿಂದ ಅವರ ತಲೆಗೆ ಗಾಯಗಳಾಗಿವೆ. ಪೊಲೀಸ್ ಪಡೆ ಬಳಸಿದ್ದರೆ, ಇತರರಿಗೆ ಗಾಯವಾಗಬೇಕಿತ್ತು’’ ಎಂದು ಪೊಲೀಸ್ ಉಪ ಆಯುಕ್ತ (ಪಶ್ಚಿಮ ವಲಯ) ಎ.ಆರ್. ಶ್ರೀನಿವಾಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News