ಮಂಗಳೂರು: ಎಸೆಸೆಲ್ಸಿ ಪೂರಕ ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ

Update: 2019-06-20 14:48 GMT

ಮಂಗಳೂರು, ಜೂ.20: ಎಸೆಸೆಲ್ಸಿ ಪೂರಕ ಪರೀಕ್ಷೆಗಳು ಇದೇ ಜೂ.21ರಿಂದ 28ರವರೆಗೆ ದ.ಕ. ಜಿಲ್ಲೆಯ 20 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಸಂದರ್ಭದಲ್ಲಿ ಕಾನೂನು ಬಾಹಿರ ಚಟುವಟಿಕೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಹೊರತುಪಡಿಸಿ 200 ಮೀ. ಸುತ್ತಳತೆಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.

ಈ ಅವಧಿಯಲ್ಲಿ ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು ಅಥವಾ ಇನ್ನಿತರ ವಸ್ತುಗಳನ್ನು ಹಂಚುವುದು/ ರವಾನಿಸುವುದು ಇತ್ಯಾದಿ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಕೊಂಡು ಹೋಗುವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ.

ನಿಷೇಧಿತ ವಲಯದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು/ಮಾಹಿತಿಯನ್ನು ರವಾನಿಸುವ ಅಥವಾ ತಿಳಿಸುವ ಸಲುವಾಗಿ ಸಂಜ್ಞೆಗಳನ್ನು ಮಾಡುವುದು ಹಾಗೂ ಇನ್ನಿತರ ಕ್ರಿಯೆಗಳಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ವಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಯಿಸುವುದನ್ನು ನಿಷೇಧಿಸಲಾಗಿದೆ.

ಪರೀಕ್ಷಾ ಕೇಂದ್ರಗಳು: ಬಂಟ್ವಾಳ ವಲಯದ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ, ವಿಠಲದ ಎಸ್.ವಿ.ಎಸ್. ಪ್ರೌಢಶಾಲೆ, ವಿಟ್ಲದ ಪದವಿ ಪೂರ್ವ ಕಾಲೇಜು(ಪ್ರೌ.ಶಾ), ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆ, ಉಜಿರೆ ಎಸ್‌ಡಿಎಂ ಪ್ರೌಢಶಾಲೆ, ಮಂಗಳೂರು ಉತ್ತರ ವಲಯದ ಕೊಡಿಯಾಲ್‌ಬೈಲ್‌ನ ಸಂತ ಅಲೋಶಿಯಸ್ ಪ್ರೌಢಶಾಲೆ, ಹಂಪನಕಟ್ಟೆಯ ಮಿಲಾಗ್ರೀಸ್ ಪ.ಪೂ. ಕಾಲೇಜು, ರಥಬೀದಿಯ ಸ.ಪ.ಪೂ ಕಾಲೇಜು, ಮಂಗಳೂರು ಉತ್ತರ ವಲಯದ ಡೊಂಗರಕೇರಿ ಕೆನರಾ ಬಾಲಕಿಯರ ಪ್ರೌಢಶಾಲೆ, ಮಂಗಳೂರು ದಕ್ಷಿಣ ವಲಯದ ಜೆಪ್ಪು ಕಾಸ್ಸಿಯಾ ಪ್ರೌಢಶಾಲೆ, ನಂತೂರಿನ ಪದುವಾ ಅನುದಾನಿತ ಪ್ರೌಢಶಾಲೆ, ಬೆಂದೂರ್‌ನ ಸಂತ ಆಗ್ನೇಸ್ ಪ್ರೌಢಶಾಲೆ, ಫಳ್ನೀರು ಸೈಂಟ್ ಮೆರೀಸ್ ಹೆಣ್ಣು ಮಕ್ಕಳ ಪ್ರೌಢಶಾಲೆ, ಕಂಕನಾಡಿಯ ಕಪಿತಾನಿಯೋ ಪ್ರೌಢಶಾಲೆ, ಮೂಡುಬಿದಿರೆ ವಲಯದ ಜೈನ್ ಪ.ಪೂ. ಕಾಲೇಜು, ಪುತ್ತೂರು ವಲಯದ ದರ್ಬೆಯ ಸಂತ ಪಿಲೋಮಿನಾ ಪ್ರೌಢಶಾಲೆ, ಪುತ್ತೂರಿನ ಸಂತ ವಿಕ್ಟರ್ಸ್ ಬಾಲಕಿಯರ ಪ್ರೌಢಶಾಲೆ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪೂರಕ ಪರೀಕ್ಷೆಗಳು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News