ಲಂಚ ಸ್ವೀಕಾರ ಆರೋಪ: ಪುತ್ತೂರು ತಹಶೀಲ್ದಾರ್ ಎಸಿಬಿ ಬಲೆಗೆ

Update: 2019-06-20 16:10 GMT

ಪುತ್ತೂರು: ಚುನಾವಣೆಯ ಸಂದರ್ಭದಲ್ಲಿ ಊಟ ಉಪಹಾರ ನೀಡಿದ ಕ್ಯಾಟರಿಂಗ್ ಮಾಲಕರೊಬ್ಬರಿಂದ ಲಂಚ ಪಡೆದ ಆರೋಪದಲ್ಲಿ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಅವರು ಗುರುವಾರ ಸಂಜೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಇತ್ತೀಚೆಗೆ ನಡೆದಿ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಮಾಸ್ಟರಿಂಗ್, ಡಿಮಾಸ್ಟರಿಂಗ್ ಇನ್ನಿತರ ಸಂದರ್ಭದಲ್ಲಿ ಅಧಿಕಾರಿಗಳಿಗೆ ಊಟ ಮತ್ತು ಉಪಹಾರ ಸರಬರಾಜು ಮಾಡಿದ್ದ ಪುತ್ತೂರಿನ ಪೈ ಕ್ಯಾಟರಿಂಗ್‍ನ ಮಾಲಕರಿಂದ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಅವರು ರೂ.1,20,000 ಲಂಚ ಪಡೆದಿದ್ದಾರೆನ್ನಲಾಗಿದ್ದು, ತಕ್ಷಣವೇ ಕಾರ್ಯಪ್ರವರ್ತರಾದ ಎಸಿಬಿ ಅಧಿಕಾರಿಗಳು ಹಣದ ಸಮೇತ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕ್ಯಾಟರಿಂಗ್ ಬಿಲ್ಲು 9.37 ಲಕ್ಷ ರೂ. ಬಿಲ್ಲು ತಹಶೀಲ್ದಾರ್ ಮಾಡಬೇಕಿತ್ತು. ಈ ಹಣವನ್ನು ಪಾವತಿಸಲು ಸತಾಯಿಸಿದ ತಹಶೀಲ್ದಾರ್ ಅವರು ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕ್ಯಾಟರಿಂಗ್ ಮಾಲಕ ಎಸಿಬಿಗೆ ದೂರು ನೀಡಿದ್ದರು.

ಗುರುವಾರ ಸಂಜೆ ತನ್ನ ಕಚೇರಿಯಿಂದ ಹಿಂದಿರುಗುತ್ತಿದ್ದ ತಹಶೀಲ್ದಾರ್ ನಗರದ ರಸ್ತೆಯಲ್ಲಿ ಹಣ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಬಳಿಕ ದರ್ಬೆ ಪ್ರವಾಸಿ ಮಂದಿರದಲ್ಲಿ ತನಿಖೆ ನಡೆಸಿದ್ದಾರೆ. ರಾತ್ರಿಯ ತನಕ ತನಿಖೆ ನಡೆಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ಮಂಗಳೂರಿಗೆ ಕೊಂಡೊಯ್ಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News