ದನಗಳ್ಳತನ ಪ್ರಕರಣ: ಆರೋಪಿ ಸೆರೆ

Update: 2019-06-20 17:16 GMT

ಮಂಗಳೂರು, ಜೂ.20: ಕೃಷ್ಣಾಪುರ ಕಾಟಿಪಳ್ಳದಲ್ಲಿ ನಡೆದ ದನಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಇನ್ನುಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಫರಂಗಿಪೇಟೆ ನಿವಾಸಿ ಮನ್ಸೂರ್ (30) ಬಂಧಿತ ಆರೋಪಿ.

ಜೂ.17ರಂದು ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಲಲಿತಾ ಎಂಬವರ ಹಟ್ಟಿಯಿಂದ ಸುಮಾರು 50 ಸಾವಿರ ರೂ. ಮೌಲ್ಯದ ಜರ್ಸಿ ದನವನ್ನು ಕದ್ದೊಯ್ಯಲಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳವಾರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಮನ್ಸೂರು ಎಂಬಾತನನ್ನು ಬಂಧಿಸಿದ್ದಾರೆ. ಇನ್ನೊಬ್ಬರ ಆರೋಪಿ ಕುಟ್ಟ ಇಮ್ರಾನ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಸುಮಾರು ಐವರು ಆರೋಪಿಗಳಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ. ಬಂಧಿತ ಆರೋಪಿ ಮನ್ಸೂರ್ ಮೇಲೆ ನಗರದ ನಾನಾ ಠಾಣೆಗಳಲ್ಲಿ ದನಕಳವು ಪ್ರಕರಣಗಳಿದ್ದು, ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News