ಯುವಕನಿಗೆ ಹಲ್ಲೆ, ಜಾತಿ ನಿಂದನೆ ಆರೋಪ: ಇಬ್ಬರು ಸೆರೆ

Update: 2019-06-20 17:28 GMT

ಬಂಟ್ವಾಳ, ಜೂ. 20: ದಲಿತ ಯುವಕನ ಮೇಲೆ ಹಲ್ಲೆ, ಜಾತಿನಿಂದನೆ ಮಾಡಿದ ಪ್ರಕರಣವೊಂದು ಬಿ.ಸಿ.ರೋಡಿನಲ್ಲಿ ನಡೆದಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ತಾಲೂಕಿನ ಅಮ್ಟಾಡಿ ಗ್ರಾಮದ ಗೋರೆಮಾರ್ ಮನೆಯ ಮುಗೇರ ಸಮುದಾಯಕ್ಕೆ ಸೇರಿದ ಸಂತೋಷ್ (22) ಹಲ್ಲೆಗೊಳಗಾದ ವ್ಯಕ್ತಿ. 
ಗಾಯಾಳು ಸಂತೋಷ್ ನೀಡಿದ ದೂರಿನ ಮೇರೆಗೆ ಹಲ್ಲೆ ಮತ್ತಿತರ ಪ್ರಕರಣಗಳೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಶರಣ್ ರೈ ಮತ್ತು ಯತೀಶ್ ಬ್ರಹ್ಮರಕೂಟ್ಲು ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಬುಧವಾರ ರಾತ್ರಿ ಸುಮಾರು 8.30ರ ವೇಳೆ ಬಿ.ಸಿ. ರೋಡಿನ ಬಸ್ ನಿಲ್ದಾಣದ ಬಳಿ ನಿಂತುಕೊಂಡಿರುವ ಸಂದರ್ಭ ಶರಣ್ ರೈ ಮತ್ತು  ಯತೀಶ್ ಸಂತೋಷ್‍ಗೆ ಜಾತಿನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಎಸ್ಸೈ ಚಂದ್ರಶೇಖರ್, ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News