ಉಡುಪಿ: ಸಾವಯುವ ಕೃಷಿ, ದೃಢೀಕರಣ ಯೋಜನೆ

Update: 2019-06-21 15:15 GMT

ಉಡುಪಿ, ಜೂ.21: ಸಾವಯವ ಕೃಷಿ ಪ್ರಮಾಣೀಕೃತ ಪ್ರದೇಶವನ್ನು ಹೆಚ್ಚಿಸುವುದರೊಂದಿಗೆ ಮಾರುಕಟ್ಟೆಗೆ ನಿರಂತರವಾಗಿ ಒಳ್ಳೆಯ ಗುಣಮಟ್ಟದ ಸಾವಯವ ಕೃಷಿ ಉತ್ಪನ್ನಗಳನ್ನು ಪೂರೈಕೆ ಮಾಡಲು ಸಾವಯವ ಕೃಷಿ ಮತ್ತು ದೃಢೀಕರಣ ಯೋಜನೆಯನ್ನು ಕರ್ನಾಟಕ ರಾಜ್ಯ ಸಾವಯವ ಪ್ರಮಾಣ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ.

ಈ ಯೋಜನೆಯ ಸೌಲಭ್ಯ ಪಡೆಯಲು ಕ್ಷೇತ್ರವನ್ನು ಸಾವಯವ ಪ್ರಮಾಣೀ ಕರಣಕ್ಕೆ ಈಗಾಗಲೇ ಪ್ರಥಮ ವರ್ಷಕ್ಕೆ ನೋಂದಾಯಿಸಲಾಗಿರುವ ಮತ್ತು ನೋಂದಾಯಿಸಲು ಆಸಕ್ತಿ ಇರುವ ಅರ್ಹ ನೋಂದಾಯಿತ ಸಂಘ ಸಂಸ್ಥೆಗಳು, ಕೃಷಿಕರ ಸಂಘಗಳು, ಖಾಸಗಿ ಸಂಸ್ಥೆಗಳು, ರೈತ ಉತಾಕ್ತದನಾ ಸಂಸ್ಥೆಗಳು ಹಾಗೂ ರೈತರು ಜು.31ರ ಒಳಗಾಗಿ ಕೃಷಿ ಇಲಾಖೆಯ ಕಚೇರಿಗಳಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ.

ಪ್ರಸ್ತಾವನೆ ಸಲ್ಲಿಸುವ ರೈತ ಫಲಾನುಭವಿಗಳು ಕನಿಷ್ಟ ಒಂದು ಎಕರೆ ಹಾಗೂ ಸಂಘ ಸಂಸ್ಥೆಗಳು ಗುಚ್ಚ ಮಾದರಿಯಲ್ಲಿ ಕನಿಷ್ಟ 50 ಎಕರೆ ಪ್ರದೇಶವನ್ನು ಹೊಂದಿರಬೇಕು. ಫಲಾನುಭವಿಗಳು ಬಹುಬೆಳೆ ಬೆಳೆಯುವ ರೈತರಾಗಿದ್ದು, 1 ಅಥವಾ 2 ನಿರ್ದಿಷ್ಟ ಪ್ರಮುಖ ಬೆಳೆ ಬೆಳೆಯುವ ಆಸಕ್ತಿ ಹೊಂದಿರಬೇಕು. ಸಂಘ ಸಂಸ್ಥೆಗಳ ಪ್ರಸ್ತಾವನೆಗಳು 2 ಅಥವಾ 3 ಹಳ್ಳಿಗಳನ್ನು ಒಳಗೊಂಡ ಗುಚ್ಚ ಗ್ರಾಮದ ಪ್ರಸ್ತಾವನೆಗಳಾಗಿದ್ದಲ್ಲಿ ಮಾತ್ರ ಪರಿಗಣಿಸಲಾಗುವುದು.

ಅರ್ಜಿ ನಮೂನೆಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗಳಿಂದ ಪಡೆದು ಭರ್ತಿ ಮಾಡಿದ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News