ತಾಂತ್ರಿಕ ಶಿಕ್ಷಣದಿಂದ ಸ್ವಾಭಿಮಾನದ ಬದುಕು : ಅಭಯಚಂದ್ರ
ಮೂಡುಬಿದಿರೆ : ತಾಂತ್ರಿಕ ಶಿಕ್ಷಣದಿಂದ ಸ್ವಂತ ಉದ್ದಿಮೆ, ಸ್ವಾಭಿಮಾನದ ಬದುಕು ಸಾಧ್ಯವಾಗುತ್ತಿದೆ. ತಾಂತ್ರಿಕ ಜ್ಞಾನ ಜನರನ್ನು ಶಕ್ತರನ್ನಾಗಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಕಷ್ಟು ಸವಲತ್ತು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ವ್ಯವಸ್ಥೆ ಕಲ್ಪಿಸಿ ಯುವಕರಿಗೆ ದಾರಿದೀಪವಾಗುತ್ತಿದೆ ಎಂದು ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಭಿಪ್ರಾಯಪಟ್ಟರು.
ಎ.ಜಿ.ಸೋನ್ಸ್ ಐ.ಟಿ.ಐ ಮೂಡುಬಿದಿರೆ ಇದರ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ ಮತ್ತು 2018-19ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಂಸ್ಥೆಯ ಸಭಾಂಗಣದಲ್ಲಿ ಜೂ.22 ರಂದು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂಸ್ಥೆಗಳಿಗೆ ಪರಿಸರ ಸ್ನೇಹಿ ಸಂಶೋಧನಾ ಚಟುವಟಿಕೆ ಅಗತ್ಯ. ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಸಂಸ್ಥೆ ಹಾಗೂ ವಿದ್ಯಾರ್ಥಿಗಳು ಬೆಳವಣಿಗೆ ಕಾಣುತ್ತಾರೆ ಎಂದು ಹೇಳಿದರು.
ಹಳೆ ವಿದ್ಯಾರ್ಥಿಗಳಾದ ಅಟೋಝೋನ್ ಪಾಲುದಾರರು ರತ್ನಾಕರ ನಾಯಕ್, ಸುಧೀರ್ ಕುಮಾರ್, ಮಂಗಳೂರು ಪ್ರೇಮ್ ಎಲೆಕ್ಟ್ರಾನಿಕ್ಸ್ನ ಪ್ರೇಮನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಸ್.ಎಂ.ಸಿ ಟ್ರಸ್ಟ್ನ ಕೋಶಾಧಿಕಾರಿ ರಾಮ್ಪ್ರಸಾದ್ ಭಟ್, ಸದಸ್ಯರಾದ ರಮಾನಾಥ ಭಟ್, ಜಯಪ್ರಕಾಶ್ ಪಡಿವಾಳ್, ಐ.ಟಿ.ಐ ಪ್ರಾಂಶುಪಾಲ ಜಯರಾಮ್ ಶೆಟ್ಟಿಗಾರ್, ವಿದ್ಯಾರ್ಥಿ ನಾಯಕ ಪ್ರೇಮ್ ಸಾಗರ್, ಉಪನಾಯಕ ಸುಶಾಂತ್, ಕಾರ್ಯದರ್ಶಿ ವಸಂತ, ಜತೆ ಕಾರ್ಯದರ್ಶಿ ಮುಜಾಮಿಲ್, ಸಾಂಸ್ಕೃತಿಕ ಕಾರ್ಯದರ್ಶಿ ನೌಫಾಲ್, ಕ್ರೀಡಾ ಕಾರ್ಯದರ್ಶಿ ಅಜಯ್ ನಾಯಕ್ ವೇದಿಕೆಯಲ್ಲಿದ್ದರು.
ಕಳೆದ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದೊಂದಿಗೆ ಪದವಿ ಪ್ರದಾನ ಹಾಗೂ ಪ್ರಸಕ್ತ ಸಾಲಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆದರ್ಶ ವಿದ್ಯಾರ್ಥಿ ಶ್ರೀನಿವಾಸ ಭಟ್ರನ್ನು ಗೌರವಿಸಲಾಯಿತು. ವಿದ್ಯಾರ್ಥಿ ಸತೀಶ್ ಪ್ರಾರ್ಥನೆಗೈದರು. ಜಯರಾಮ್ ಶೆಟ್ಟಿಗಾರ್ ಸ್ವಾಗತಿಸಿ ವರದಿ ಮಂಡಿಸಿದರು. ನೌಫಾಲ್ ದನ್ಯವಾದವಿತ್ತರು. ಬೋಧಕರಾದ ರಾಮಚಂದ್ರ ಆಚಾರ್ಯ, ಹರೀಶ್ ಕುಮಾರ್ ಕೆ.ವಿ., ದಾಮೋದರ್ ನಾಯಕ್, ಅತಿಥಿಗಳನ್ನು ಪರಿಚಯಿಸಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ತರಬೇತಿ ಅಧಿಕಾರಿ ಶಿವಪ್ರಸಾದ್ ಹೆಗ್ಡೆ ನಿರೂಪಿಸಿದರು.