ಸಹೋದರಿಯ ಕೊಲೆ ಪ್ರಕರಣ: ಆರೋಪಿ ಸಹೋದರ ದೋಷಿ

Update: 2019-06-22 16:11 GMT

ಕುಂದಾಪುರ, ಜೂ.22: ಹಣಕ್ಕಾಗಿ ಸಹೋದರಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಿ ಆರೋಪಿಯನ್ನು ದೋಷಿ ಎಂಬುದಾಗಿ ತೀರ್ಪು ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಕುಂದಾಪುರ ವಡೇರಹೋಬಳಿ ಗ್ರಾಮದ ಕುಂದೇಶ್ವರ ದೇವಸ್ಥಾನ ಹಿಂಭಾಗದ ನಿವಾಸಿ ಅಣ್ಣಪ್ಪಭಂಡಾರಿ (45) ಪ್ರಕರಣದ ಆರೋಪಿ. 2018ರ ಜುಲೈ 22ರಂದು ರಾತ್ರಿ ಅಣ್ಣಪ್ಪಭಂಡಾರಿ ಮದ್ಯ ಸೇವಿಸಿ ಮನೆಗೆ ಬಂದು ಮನೆಯಲ್ಲಿದ್ದ ಸಹೋದರಿ ವಿಜಯಾ ಭಂಡಾರಿ (50) ಅವರೊಂದಿಗೆ ಜಗಳ ಮಾಡಿದ್ದನು. ಅದೇ ಸಿಟ್ಟಿನಲ್ಲಿ ಆತ ವಿಜಯಾ ಅವರಿಗೆ ಕತ್ತಿಯಲ್ಲಿ ಗಂಭೀರ ವಾಗಿ ಹಲ್ಲೆ ನಡೆಸಿದ್ದನು.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ವಿಜಯಾ ಭಂಡಾರಿ ಚಿಕಿತ್ಸೆ ಫಲಕಾರಿಯಾಗದೆ ಜು.28ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಕುಂದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಅಣ್ಣಪ್ಪಭಂಡಾರಿ ಸಂಗಮ್ ಬಳಿ ಕ್ಷೌರದಂಗಡಿ ನಡೆಸುತ್ತಿದ್ದನು.

ಈ ಬಗ್ಗೆ ತನಿಖೆ ನಡೆಸಿದ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಮನೆಗೆ ಅಕ್ರಮ ಪ್ರವೇಶ(ಐಪಿಸಿ ಸೆಕ್ಷನ್ 448) ಹಾಗೂ ಕೊಲೆ (ಐಪಿಸಿ ಸೆಕ್ಷನ್ 302) ಪ್ರಕರಣದಡಿಯಲ್ಲಿ ಆರೋಪಿಯನ್ನು ದೋಷಿಯೆಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಜೂ.28ರಂದು ಪ್ರಕಟಿಸುವುದಾಗಿ ಆದೇಶಿಸಿದರು.

ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News