ಕ್ರಿಕೆಟ್: ಆ್ಯಪ್ ಬಳಸಿ ಬೆಟ್ಟಿಂಗ್ ದಂಧೆ; ಐವರ ಬಂಧನ

Update: 2019-06-25 15:07 GMT

ಮಂಗಳೂರು, ಜೂ.25: ನಗರದಲ್ಲಿ ಆ್ಯಪ್ ಬಳಸಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಐವರನ್ನು ನಗರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ವಶಪಡಿಸಿಕೊಂಡಿದ್ದಾರೆ.

ಅಡ್ಯಾರ್ ನಿವಾಸಿ ಅಶೋಕ್ (40), ಕುಲಶೇಖರ ನಿವಾಸಿ ಉದಯ್ (40), ಪಾಂಡೇಶ್ವರ ನಿವಾಸಿ ರವಿ (35), ವಾಮಂಜೂರು ನಿವಾಸಿಗಳಾದ ರಾಧಾಕೃಷ್ಣ(35), ದಿತ್ತು (30) ಬಂಧಿತ ಆರೋಪಿಗಳು.

ಪ್ರಕರಣ ವಿವರ: ಕರುಣಾಕರ್ ಭಂಡಾರಿ ಎಂಬಾತ ದುಬೈನಲ್ಲಿದ್ದು, ‘ಆರೆಂಜ್ 333’ ಆ್ಯಪ್ ಮೂಲಕ ಐಪಿಎಲ್, ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ವಾರಕ್ಕೆ ಎರಡರಿಂದ ಮೂರು ಬಾರಿ ನಗರಕ್ಕೆ ಬಂದು ಬೆಟ್ಟಿಂಗ್ ವ್ಯವಹಾರದ ಹಣ ಪಡೆದು ಲೆಕ್ಕಪತ್ರ ಚುಕ್ತಾ ಮಾಡುತ್ತಿದ್ದ. ಈ ಬೆಟ್ಟಿಂಗ್ ದಂಧೆಯ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಟ್ಟಿಂಗ್ ದಂಧೆಯ ರೂವಾರಿ ಕರುಣಾಕರ್ ಭಂಡಾರಿ ಎಂಬಾತನಿಗೆ ಅಡ್ಯಾರ್ ಅಶೋಕ್ ನಗರದಲ್ಲಿ ಪ್ರಮುಖ ಏಜೆಂಟ್ ಆಗಿದ್ದು, ಆತನನ್ನು ಆ್ಯಪ್‌ನ ಎಡ್ಮಿನ್‌ಆಗಿ ಮಾಡಿದ್ದ. ಈತನ ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಇದೇ ಮಾದರಿ ಹಲವರು ಎಡ್ಮಿನ್‌ಗಳನ್ನು ಮಾಡಿರುವ ಸಾಧ್ಯತೆಯಿದೆ. ಆರೋಪಿಗಳಾದ ಕರುಣಾಕರನ್ ಸಂಬಂಧಿ ರವಿ ಮತ್ತು ಉದಯ್ ಏಜೆಂಟ್‌ಗಳಿಂದ ಹಣವನ್ನು ಸಂಗ್ರಹ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಶೋಕ್, ರಾಧಾಕೃಷ್ಣ, ದಿತ್ತು ಎಂಬವರನ್ನು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ ಎರಡು ಲಕ್ಷ ರೂ. ವಶಪಡಿಸಿಕೊಂಡರೆ, ಉದಯ್ ಮತ್ತು ರವಿಯನ್ನು ಬಂದರು ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ 52 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಲ್ಲಿ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕೆ, ಪಿಎಸ್ಸೈ ಕಬ್ಬಾಳ್‌ರಾಜ್, ಎಎಸ್ಸೈ ಮೋಹನ್, ಆಶಿತ್, ರಾಜಾ, ಮಣಿ, ವಿಶ್ವನಾಥ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News