ಸಿದ್ಧಕಟ್ಟೆ: ಧಾರ್ಮಿಕ ರಸಪ್ರಶ್ನೆ ಕಾರ್ಯಕ್ರಮ

Update: 2019-06-25 17:45 GMT

ಬಂಟ್ವಾಳ, ಜೂ. 25: ಬಂಟ್ವಾಳ ಜೈನ್ ಮಿಲನ್ ಸಂಯೋಜಿತ ಸಿದ್ಧಕಟ್ಟೆ ಸ್ವಸ್ತಿಕ್ ಜೈನ ಯುವ ಸಂಘ ಮತ್ತು ಅನಂತಪದ್ಮ ಮಹಿಳಾ ಸಂಘ ಇದರ ಆಶ್ರಯದಲ್ಲಿ ಧಾರ್ಮಿಕ ರಸಪ್ರಶ್ನೆ ಸ್ಪರ್ಧೆ ನಲ್ಲೂರಂಗಡಿ ಬಸದಿ ಸಿದ್ಧಕಟ್ಟೆಯಲ್ಲಿ ಮಂಗಳವಾರ ಜರಗಿತು. 

ಬಂಟ್ವಾಳ ಜೈನ್ ಮಿಲನ್‍ನ ಜೂನ್ ತಿಂಗಳ ಮಾಸಿಕ ಸಭೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮವಾಗಿ ಮಿಲನ್ ಸದಸ್ಯರಿಗೆ ಹಾಗೂ ತಾಲೂಕಿನ ಜೈನ ಶ್ರಾವಕ ಸಮಾಜದವರಿಗೆ ಧಾರ್ಮಿಕ ರಸಪ್ರಶ್ನೆಯನ್ನು ಹಮ್ಮಿಕೊಳ್ಳಲಾಗಿತ್ತು. 

ಮೈಸೂರು ವರ್ಧಮಾನ್ ಜೈನ್ ಮಿಲನ್‍ನ  ಸದಸ್ಯ, ಸಂಪನ್ಮೂಲ ವ್ಯಕ್ತಿ ಪಿ.ಅಭಿನಂದನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ರಸ ಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜೈನ್ ಮಿಲನ್ ಅಧ್ಯಕ್ಷ, ಸಿದ್ದಕಟ್ಟೆ ವೈದ್ಯ ಡಾ.ಸುದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ಜೈನ್ ಮಿಲನ್ ವಲಯ-8ರ ಉಪಾಧ್ಯಕ್ಷ ಸುದರ್ಶನ್ ಜೈನ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಧಾರ್ಮಿಕ ಚಿಂತನೆಯಲ್ಲಿ ನಾವು ತೊಡಗಿಸಿಕೊಳ್ಳುವುದರಿಂದ ನಮ್ಮ ಧರ್ಮದ ಬಗ್ಗೆ ಒಂದಷ್ಟು ಚಿಂತನೆ ಮಾಡಲು ನಮ್ಮ ಸಮಯವನ್ನು ಬಳಸುವಂತಾಗುತ್ತದೆ ಎಂದು ನುಡಿದರು. 

ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಸಿದ್ದಕಟ್ಟೆ ಬಸದಿಯ ಮೊಕ್ತೇಸರ ಪ್ರಕಾಶ್ ಜಂಕಳ , ಮಾಜಿ ಅಧ್ಯಕ್ಷ ಪಚ್ಚಾಜೆಗುತ್ತು ಜಿನರಾಜ್ ಆರಿಗ, ಅನಂತ ಪದ್ಮ ಮಹಿಳಾ ಸಂಘದ ಅಧ್ಯಕ್ಷೆ ವಿನಯಾ ಅರ್ಕಕೀರ್ತಿ ಇಂದ್ರ, ಜೈನ್ ಮಿಲನ್ ಕಾರ್ಯದರ್ಶಿ ಸನ್ಮತಿ ಜಯಕೀರ್ತಿ ಉಪಸ್ಥಿತರಿದ್ದರು.

ತಾಲೂಕಿನ ವಿವಿಧ ಭಾಗಗಳಿಂದ ಮೂರು ಜನರನ್ನೊಳಗೊಂಡ ಹತ್ತು ತಂಡಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಾಳುಗಳಾಗಿ ಭಾಗವಹಿಸಿದ್ದರು. ಒಟ್ಟು ಮೂರು ಸುತ್ತುಗಳಲ್ಲಿ ಜರಗಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕೊನೆಯ ಸುತ್ತಿಗೆ ಆಯ್ಕೆಯಾದ ನಾಲ್ಕು ತಂಡಗಳಲ್ಲಿ ಮೂರು ತಂಡಗಳನ್ನು ಆಯ್ಕೆಮಾಡಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಮತ್ತು ಪ್ರೋತ್ಸಾಹಕರ ಬಹುಮಾನಗಳನ್ನು ನೀಡಲಾಯಿತು. 

ಈ ಸಂದರ್ಭದಲ್ಲಿ ಪಿ.ಅಭಿನಂದನ್ ಕುಮಾರ್ ದಂಪತಿಯನ್ನು ಸನ್ಮಾನಿಸಲಾಯಿತು.
ಡಾ.ಸುದೀಪ್ ಕುಮಾರ್ ಸ್ವಾಗತಿಸಿದರು. ಸ್ವಸ್ತಿಕ್ ಜೈನ್ ಯುವ ಸಂಘದ ಅಧ್ಯಕ್ಷ ಪ್ರಥಮ್ ವಂದಿಸಿದರು. ವಿನಯ ಕುಮಾರ್ ನೆಕ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧಾ ಕಾರ್ಯಕ್ರಮದಲ್ಲಿ ಸುಮನ್ ಕುಮಾರ್, ಸುಜನ್, ಅಶೋಕ್ ಕುಮಾರ್, ಅರ್ಕಕೀರ್ತಿ ಇಂದ್ರ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News