ದ.ಕ., ಕಾಸರಗೋಡಿನ ಚಿನ್ನಾಭರಣ ಮಳಿಗೆಗಳಿಗೆ ಐಟಿ ದಾಳಿ
Update: 2019-06-27 07:59 GMT
ಮಂಗಳೂರು, ಜೂ.27: ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಹಲವು ಜ್ಯುವೆಲ್ಲರಿ ಮಳಿಗೆಗಳಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಬುಧವಾರ ಬೆಳಗ್ಗೆ ಖಾಸಗಿ ವಾಹನಗಳಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ಮಂಗಳೂರು, ಸುಳ್ಯ, ಉಪ್ಪಳ, ಕಾಸರಗೋಡು ಮತ್ತಿತರ ಕಡೆಯ ಹಲವು ಜ್ಯುವೆಲ್ಲರಿ ಅಂಗಡಿಗಳಿಗೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರವೂ ದಾಳಿ ಮುಂದುವರಿದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಮಧ್ಯೆ ಐಟಿ ದಾಳಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಗ್ರಾಹಕರು ಎಂದಿನಂತೆ ಚಿನ್ನಾಭರಣಗಳ ಖರೀದಿಗಾಗಿ ಜ್ಯುವೆಲ್ಲರಿ ಅಂಗಡಿಯ ಬಳಿ ಬಂದು ಬರಿಗೈಯಲ್ಲಿ ಮರಳುತ್ತಿದ್ದಾರೆ. ಜ್ಯುವೆಲ್ಲರಿ ಅಂಗಡಿಗಳ ಕಾವಲುಗಾರರು ಒಂದೆರಡು ದಿನ ಬಿಟ್ಟು ಬನ್ನಿ ಎಂದು ಗ್ರಾಹಕರಲ್ಲಿ ಸೂಚಿಸುತ್ತಿರುವುದು ಕಂಡು ಬಂತು.