ಉತ್ತಮ ನೇಕಾರರಾಗಿ ಆನಂದ ಶೆಟ್ಟಿಗಾರ್ ಆಯ್ಕೆ: ಕಿನ್ನಿಗೋಳಿಯಲ್ಲಿ ಪ್ರಶಸ್ತಿ ಪ್ರದಾನ
ಉಡುಪಿ, ಜೂ.27: ಕರಾವಳಿಯ ಕೈಮಗ್ಗ ನೇಕಾರರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಕಳದ ಕದಿಕೆ ಟ್ರಸ್ಟ್ನ ಕಾರ್ಯಕ್ರಮದಂತೆ ಈ ಬಾರಿಯ ‘ಉತ್ತಮ ನೇಕಾರ’ರಾಗಿಕಿನ್ನಿಗೋಳಿಯ ಆನಂದ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.
ತಮ್ಮ 15ನೇ ಪ್ರಾಯದಲ್ಲಿ ಕೈಮಗ್ಗ ನೇಕಾರಿಕೆಯನ್ನು ಆರಂಭಿಸಿರುವ ಆನಂದ ಶೆಟ್ಟಿಗಾರ್ ಕಳೆದ 47 ವರ್ಷಗಳಿಂದ ಸತತವಾಗಿ ನೇಕಾರಿಕೆಯನ್ನು ತಪಸ್ಸಿನಂತೆ ಮುಂದುವರಿಸಿಕೊಂಡು ಬಂದಿದ್ದಾರೆ. ಇವರು ನೇಯುವ ಪರಿಸರ ಸ್ನೇಹಿ ನವಿರಾದ ಉಡುಪಿ ಸೀರೆಗಳು ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದಿವೆ.
ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘದ ಸದಸ್ಯ ರಾಗಿರುವ ಇವರು, ಈಗ ಸಹಜ, ಪ್ರಾಕೃತಿಕ ಬಣ್ಣದ ಉಡುಪಿ ಸೀರೆಗಳನ್ನು ನೇಯುತಿದ್ದಾರೆ. ಪ್ರಕೃತ ಇವರು 60 ಕೌಂಟ್ (ನಂ.) ಉಡುಪಿ ಸೀರೆಯನ್ನು ನೇಯುವ ಕರಾವಳಿಯ ಕೆಲವೇ ನೇಕಾರರಲ್ಲಿ ಒಬ್ಬರು.
ಎಲ್ಲಾ ಅಡೆತಡೆಗಳನ್ನು ಎದುರಿಸಿ, ರಜೆಯನ್ನೂ ಪಡೆಯದೇ ಕಾಯಕ ಜೀವಿ ಯಾಗಿ ತಾಳಿಪಾಡಿ ಸೊಸೈಟಿಗೆ ಸೀರೆಯನ್ನು ನೆಯ್ದುಕೊಡುವ ಆನಂದ್ ಶೆಟ್ಟಿಗಾರ್ ಅವರಿಗೆ ಜೂ.28ರ ಶುಕ್ರವಾರ ಕಿನ್ನಿಗೋಳಿಯ ನೇಕಾರ ಸಭಾಭವನದಲ್ಲಿ ಅಪರಾಹ್ನ 3 ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡ ಲಾಗುವುದು ಎಂದು ಕದಿಕೆ ಟ್ರಸ್ಟ್ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.