ಪ್ಲಾಸ್ಟಿಕ್ ಮಳಿಗೆಗಳಿಗೆ ಉಳ್ಳಾಲ ನಗರಸಭೆ ಅಧಿಕಾರಿಗಳಿಂದ ದಾಳಿ : ಕಾನೂನು ಕ್ರಮದ ಎಚ್ಚರಿಕೆ
Update: 2019-06-27 15:07 GMT
ಉಳ್ಳಾಲ: ಉಳ್ಳಾಲ ಹಾಗೂ ತೊಕ್ಕೊಟ್ಟು ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿವ ಪ್ಲಾಸ್ಟಿಕ್ ರಖಂ ಮಳಿಗೆಗೆ ಉಳ್ಳಾಲ ನಗರಸಭೆಯ ಆರೋಗ್ಯ ನಿರೀಕ್ಷಕರ ತಂಡ ಗುರುವಾರ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ನ್ನು ವಶಪಡಿಸಿ ವ್ಯಾಪಾರಸ್ಥರಿಗೆ ಮಾರಾಟ ಮಾಡದಂತೆ ಎಚ್ಚರಿಕೆಯನ್ನು ನೀಡಿದೆ.
ಉಳ್ಳಾಲದ ಮಾಸ್ತಿಕಟ್ಟೆ ಜಂಕ್ಷನ್ ಮತ್ತು ತೊಕ್ಕೊಟ್ಟುವಿನಲ್ಲಿರುವ ಎರಡು ಪ್ಲಾಸ್ಟಿಕ್ ಮಳಿಗೆಗಳಿಗೆ ದಾಳಿ ನಡೆಸಲಾಗಿದೆ. ದಿಢೀರ್ ದಾಳಿ ನಡೆಸಿ ನಿಷೇಧಿತ ಸುಮಾರು 50 ಕೆ.ಜಿ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮುಂದೆ ಮಾರಾಟ ಮಾಡದಂತೆ ಎಚ್ಚರಿಸಿರುವ ಅಧಿಕಾರಿಗಳು, ಮಾರಾಟ ಮಾಡುವುದು ಕಂಡುಬಂದಲ್ಲಿ ದಂಡ ವಿಧಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಅನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಉಳ್ಳಾಲ ನಗರಸಭೆ ಆರೋಗ್ಯ ನಿರೀಕ್ಷಕ ಜಯಶಂಕರ್ ಪ್ರಸಾದ್, ಶಾಜಿತ್, ರಾಜೇಶ್ ಹಾಗೂ ಕಿರಿಯ ಅಭಿಯಂತರರಾದ ತುಳಸೀದಾಸ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.