ಅಂಕ ಪಡೆಯುವ ನಿಟ್ಟಿನಲ್ಲಿ ಮಕ್ಕಳ ಮೇಲೆ ಒತ್ತಡ ಸೃಷ್ಠಿ ಸರಿಯಲ್ಲ: ಅನಿತಾ ಹೇಮನಾಥ್
ಪುತ್ತೂರು: ನಿರಂತರ ಅಭ್ಯಾಸ, ಪರಿಶ್ರಮ, ಶ್ರದ್ಧೆ ಮತ್ತು ಏಕಾಗ್ರತೆಯಿಂದ ವಿದ್ಯಾರ್ಥಿ ಬದುಕಿನ ಗುರಿ ಮುಟ್ಟಲು ಸಾಧ್ಯ. ಪರೀಕ್ಷೆಯಲ್ಲಿ ಅಂಕ ಪಡೆಯುವುದು ಬಹಳ ಮುಖ್ಯವಾಗಿದೆ. ಆದರೆ ಅಂಕ ಪಡೆಯುವ ನಿಟ್ಟಿನಲ್ಲಿ ಮಕ್ಕಳ ಮೇಲೆ ಒತ್ತಡ ಸೃಷ್ಠಿಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.
ಅವರು ಶನಿವಾರ ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ದ.ಕ. ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಉಪನಿರ್ದೇಶಕರ ಕಚೇರಿ ಇವುಗಳ ಸಹಯೋಗದಲ್ಲಿ ನಡೆದ ದ. ಕ. ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಮತ್ತು ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್ಎಸ್ಎಲ್ ವಿದ್ಯಾರ್ಥಿ ಬದುಕಿನ ಪ್ರಮುಖ ಘಟ್ಟವಾಗಿದ್ದು, ಈ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಅವರ ಮುಂದಿನ ಭವಿಷ್ಯಕ್ಕೆ ಪೂರಕವಾಗಿದೆ ಹಾಗೆಂದು ಶಿಕ್ಷಕರು ಹಾಗೂ ಹೆತ್ತವರು ತಮ್ಮ ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿರುವಾಗ ಒತ್ತಡ ಸೃಷ್ಟಿಸುವ ಬದಲು ಶೈಕ್ಷಣಿಕ ವರ್ಷದ ಆರಂಭದಿಂದಲೇ ಅವರನ್ನು ತಯಾರಿಗೊಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸ್ತುತ ಸರಕಾರವು ಮಕ್ಕಳ ಅನುಪಾತದಂತೆ ಸರಕಾರಿ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಅಂಕಗಳಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರತಿ ತರಗತಿಗೊಂದು ಶಿಕ್ಷಕರಂತೆ ನೀಡಿದರೆ ಮಕ್ಕಳ ಫಲಿತಾಂಶವು ವೃದ್ಧಿ ಆಗಬಹುದು ಹಾಗೂ ವಿದ್ಯಾರ್ಥಿ ಉತ್ತಮವಾದ ಅಂಕ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಕ್ಷಕರು ಪ್ರಯತ್ನ ನಡೆಸಿದಲ್ಲಿ ವಿದ್ಯಾರ್ಥಿಗಳಲ್ಲಿ ಉತ್ತಮ ಭವಿಷ್ಯ ರೂಪಿಸ ಬಲ್ಲರು. ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಕೂಡಾ ಹೊರತರಲು ಗುರುವಿಗೆ ಮಾತ್ರ ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳನ್ನು ನಮ್ಮ ಮಕ್ಕಳಂತೆ ಭಾವಿಸಿ ಶಿಕ್ಷಣ ನೀಡಬೇಕು ಎಂದರು.
ಜಿಪಂ ಸದಸ್ಯರಾದ ಎಂ.ಎಸ್. ಮಹಮ್ಮದ್, ಮಂಜುಳಾ ಮಾಧವ ಮಾವೆ, ತಾಪಂ ಸದಸ್ಯ ರಾಧಾಕೃಷ್ಣ ಆಳ್ವ ಶುಭಹಾರೈಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಸ್ಥಾನ ಪಡೆದ ಜಿಲ್ಲೆ ವಿದ್ಯಾರ್ಥಿಗಳಾದ ಅಂಕ ಪಡೆದ ಮೂಡಬಿದ್ರೆ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಸುಜನ್ ಆರ್. ಶೆಟ್ಟಿ, ಬಂಟ್ವಾಳ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನುಪಮಾ ಕಾಮತ್, ವಿಟ್ಲ ವಿಠ್ಠಲ ಜೆಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಚಿನ್ಮಯಿ, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಿಂಚನ ಲಕ್ಷ್ಮಿ, ಸುಬ್ರಹ್ಮಣ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕೃಪಾ ಕೆ.ಆರ್., ಮೂಡಬಿದರೆ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಾ ಪೈ ಹಾಗೂ ವಿದ್ಯಾಶ್ರೀ ಯು ಅವರನ್ನು ಅಭಿನಂದಿಸಲಾಯಿತು. ಅಲ್ಲದೇ ಸರಕಾರಿ ಶಾಲೆಯಲ್ಲಿ ಜಿಲ್ಲೆಯಲ್ಲಿ ಪುತ್ತೂರು ಸರಕಾರಿ ಪ್ರೌಢ ಶಾಲೆಯ ಶ್ರೀಲಕ್ಷ್ಮಿ ಎನ್., ಬೆಳ್ತಂಗಡಿ ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿತಿನ್ ಕುಮಾರ್ ಹಾಗೂ ರಚನ್, ಸುಳ್ಯ ಎಣ್ಮೂರು ಸರಕಾರಿ ಪ್ರೌಢ ಶಾಲೆಯ ಮಹಮ್ಮದ್ ಮಜೀಫ್ನ್ನು ಗೌರವಿಸಲಾಯಿತು.
ದ.ಕ. ಜಿಲ್ಲೆಯಲ್ಲಿ 2018-19ನೆ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ ಪಡೆದ 116 ಶಾಲೆಗಳನ್ನು ಗುರುತಿಸಿ ಗೌರವಿಸಲಾಯಿತು. ಪುತ್ತೂರಿನಲ್ಲಿ 2 ವರ್ಷಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಎನ್. ಅವರು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಯಾದ ಹಿನ್ನಲೆಯಲ್ಲಿ ದ.ಕ. ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ವತಿಯಿಂದ ಗೌರವಿಸಿದರು.
ವೇದಿಕೆಯಲ್ಲಿ ಮಾಯೀದೆ ದೇವುಸ್ ಶಾಲಾ ಸಂಚಾಲಕ ರೇಫಾ ಆಲ್ಫ್ರೆಡ್ ಜೆ. ಪಿಂಟೋ, ಕ್ಷೇತ್ರ ಶಿಕ್ಷಾಣಾಧಿಕಾರಿಗಳಾದ ಪುತ್ತೂರಿನ ಸುಕನ್ಯಾ ಡಿ.ಎನ್, ಬಂಟ್ವಾಳದ ಶಿವಪ್ರಕಾಶ್, ಮಂಗಳೂರು ದಕ್ಷಿಣದ ಲೋಕೇಶ್, ಮಂಗಳೂರು ಉತ್ತರದ ಮಂಜುಳಾ, ಮೂಡಬಿದರೆಯ ಆಶಾ, ಸುಳ್ಯದ ಮಹಾದೇವ, ಜಿಲ್ಲಾ ಅಕ್ಷರ ದಾಸೋಹದ ನಿರ್ದೇಶಕಿ ಜಯಲಕ್ಷ್ಮೀ, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಜಯಶ್ರೀ ಹಾಗೂ ಬಬಿತಾ ಉಪಸ್ಥಿತರಿದ್ದರು.
ದ.ಕ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೈ. ಶಿವರಾಮಯ್ಯ ಸ್ವಾಗತಿಸಿದರು. ಸಮಂತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.