ಬಂಟಕಲ್ಲು: ಕೆಸರುಗದ್ದೆ ಕ್ರೀಡೋತ್ಸವ ಉದ್ಘಾಟನೆ
ಶಿರ್ವ, ಜೂ.30: ಪೂರ್ವಿಕರ ಶ್ರಮದಾಯಕ ಜೀವನದಲ್ಲಿ ಕೃಷಿ ಸಂಸ್ಕೃತಿ ಪ್ರಧಾನವಾಗಿದ್ದು, ಈ ತಳಹದಿಯಲ್ಲಿ ಧಾರ್ಮಿಕ ಪರಂಪರೆ ಬೆಳೆದು ಬಂದಿದೆ. ಇಂದಿನ ಯುವ ಪೀಳಿಗೆಯಲ್ಲಿ ಕೃಷಿ ಪರಂಪರೆಯನ್ನು ಪರಿಚಯಿಸುವಲ್ಲಿ ಕೆಸರುಗದ್ದೆ ಕ್ರೀಡೋತ್ಸವಗಳು ಪ್ರೇರಕವಾಗಿವೆ ಎಂದು ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್ ಹೇಳಿದ್ದಾರೆ.
ಬಂಟಕಲ್ಲು ರಾಜಾಪುರ ಸಾರಸ್ವತ ಯುವವೃಂದ, ಶ್ರೀದುರ್ಗಾ ಮಹಿಳಾ ವೃಂದದ ಜಂಟಿ ಆಶ್ರಯದಲ್ಲಿ ರವಿವಾರ ಸಡಂಬೈಲು ಅನಂತರಾಮ ವಾಗ್ಲೆಯವರ ಗದ್ದೆಯಲ್ಲಿ ಆಯೋಜಿಸಲಾದ ಕೆಸರುಗದ್ದೆ ಕ್ರೀಡೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಶಿರ್ವ/ಬೆಳ್ಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾ ನಾಯಕ್ ಮಾತನಾಡಿ, ಕೆಸರುಗದ್ದೆ ನಮ್ಮ ಸಮಾಜದ ಬಳುವಳಿಯಾಗಿದ್ದು, ಕೃಷಿಯೇ ಜೀವನಾಧಾರವಾಗಿ ಬೆಳೆದ ನಮ್ಮ ಸಮಾಜದ ಇಂದಿನ ಉನ್ನತಿಗೆ ಹಿರಿಯರ ಶ್ರಮವೇ ಮೂಲ ಕಾರಣವಾಗಿದೆ. ಉತ್ತಮ ಪರಿಸರ ಆರೋಗ್ಯದ ಸಂಪತ್ತು ಆಗಿದೆ ಎಂದು ತಿಳಿಸಿದರು.
ಸೂಡ, ಪುನಾರು ಬೆಳ್ಮಣ್ ಒಕ್ಕೂಟದ ಆರ್ಎಸ್ಬಿ ಸಂಘದ ಅಧ್ಯಕ್ಷ ರಂಜಿತ್ ಕೆ.ಎಸ್.ಮಾತನಾಡಿ, ಕೃಷಿಕರಲ್ಲಿದ್ದ ಅನ್ಯೋನ್ಯತೆ, ಪ್ರೀತಿ ಸಹಕಾರ ಮನೋಭಾವ ಇಂದಿನ ವಿದ್ಯಾವಂತರಲ್ಲಿ ಇಲ್ಲ. ಹಿರಿಯರ ಕೃಷಿಭೂಮಿಯನ್ನು ಹಡಿಲು ಬಿಡುವುದು, ಮಾರುವುದನ್ನು ಬಿಟ್ಟು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು.
ಶಿರ್ವ ಕೆನರಾ ಬ್ಯಾಂಕ್ ಶಾಖಾಧಿಕಾರಿ ನಳಿನಾ, ಹಿರಿಯ ಪ್ರಗತಿಪರ ಕೃಷಿಕ ಶ್ರೀನಿವಾಸ ವಾಗ್ಲೆ, ಕ್ರೀಡಾ ಕಾರ್ಯದರ್ಶಿ ಗೌರವ್ ಜಿ.ಪ್ರಭು, ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ, ಉಡುಪಿ ವಲಯ ಜೇಸಿ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ದೇವಳದ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು, ಉಮೇಶ ಪ್ರಭು ಪಾಲಮೆ ಉಪಸ್ಥಿತರಿದ್ದರು.
ಅಧ್ಯಕ್ಷತೆ ಯನ್ನು ಯುವ ವೃಂದದ ಅಧ್ಯಕ್ಷ ವೀರೇಂದ್ರ ಪಾಟ್ಕರ್ ವಹಿಸಿದ್ದರು. ಗೌರವಾಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ವೃಂದದ ಅಧ್ಯಕ್ಷೆ ಅರುಂಧತಿ ಪ್ರಭು ವಂದಿಸಿದರು. ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.