ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ: 189 ಪ್ರಯಾಣಿಕರು ಪವಾಡ ಸದೃಶ ಪಾರು
ಮಂಗಳೂರು, ಜೂ.30: ದುಬೈನಿಂದ ಬರುತ್ತಿದ್ದ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನ ರವಿವಾರ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ವೇ ನಲ್ಲಿ ಜಾರಿದೆ. ಆದರೆ ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ.
ದುಬೈನಿಂದ ರವಿವಾರ ಸಂಜೆ 5:40ರ ಸುಮಾರಿಗೆ ಆರು ಮಂದಿ ಸಿಬ್ಬಂದಿ ಸಹಿತ 189 ಮಂದಿ ಪ್ರಯಾಣಿಕರಿದ್ದ ಏರ್ಇಂಡಿಯಾ ಎಕ್ಸ್ಪ್ರೆಸ್ (ಐಎಕ್ಸ್ 384) ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ವಿಮಾನ ಲ್ಯಾಂಡಿಂಗ್ ವೇಳೆ ಟ್ಯಾಕ್ಸಿ ವೇನಲ್ಲಿ ಸಾಗುತ್ತಿದ್ದಾಗ ಆಕಸ್ಮಿಕವಾಗಿ ಜಾರಿತ್ತು. ಇದರಿಂದಾಗಿ ವಿಮಾನ ಪೂರ್ತಿ ಟ್ಯಾಕ್ಸಿ ವೇ ಬಿಟ್ಟು ಮಣ್ಣಿನ ಇಳಿಜಾರು ಪ್ರದೇಶಕ್ಕೆ ಇಳಿದಿತ್ತು. ವಿಮಾನ ಚಕ್ರಗಳು ಮಣ್ಣಿನಲ್ಲಿ ಪೂರ್ತಿ ಹೂತುಹೋಗಿ, ಅಲ್ಲಿಯೇ ವಿಮಾನ ಲ್ಯಾಂಡ್ ಆಗಿದ್ದರಿಂದ ಸಂಭಾವ್ಯ ದುರಂತವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಮಾನ ತಜ್ಞರು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸುತ್ತಿದ್ದು, ವಿಮಾನದ ಯಾವ ಭಾಗಗಳಿಗೆ ಹಾನಿಯಾಗಿದೆ ಎಂಬುದರ ಪರಿಶೀಲನೆ ನಡೆಸುತ್ತಿದ್ದಾರೆ. ಇಳಿಯುತ್ತಿದ್ದ ವೇಳೆ ಮಿತಿಗಿಂತ ವೇಗ ಇದ್ದುದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಆಂತರಿಕ ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಆದೇಶಿಸಿದೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ಮೂಲಗಳು ತಿಳಿಸಿವೆ.
ಈ ಘಟನೆಯಿಂದ ಕೆಲವು ಕಾಲ ವಿಮಾನದ ಆಗಮನ ಹಾಗೂ ನಿರ್ಗಮನವನ್ನು ಸ್ಥಗಿತಗೊಳಿಸಲಾಯಿತು. ದುಬೈನಿಂದ ಮಂಗಳೂರಿಗೆ ಆಗಮಿಸಬೇಕಿದ್ದ ಸ್ಪೈಸ್ ಜೆಟ್ ವಿಮಾನವನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.
20 ಅಡಿ ಮುಂದೆ ಇತ್ತು ಭಾರಿ ಕಂದಕ !
ವಿಮಾನ ಇಳಿದ ವೇಗ ಎಷ್ಟಿತ್ತೆಂದರೆ, ಇನ್ನು 20 ಅಡಿ ಮುಂದೆ ಹೋಗಿದ್ದರೆ ಈ ಹಿಂದೆ ದುರಂತ ಸಂಭವಿಸಿದ ಕಂದಕಕ್ಕೆ ಉರುಳಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಆದರೆ ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಟ್ಯಾಕ್ಸಿ ವೇ ಮತ್ತು ರನ್ ವೇ ಪಕ್ಕ ಕೆಸರು ನೀರು ನಿಂತಿದ್ದು, ವಿಮಾನ ಸಾಗಿದ ರಭಸಕ್ಕೆ ಕೆಸರು ನೀರು ವಿಮಾನಕ್ಕಿಂತಲೂ ಮೇಲೆ ಚಿಮ್ಮಿದೆ. ಕೆಸರು ಚಿಮ್ಮಿದ ರಭಸಕ್ಕೆ ವಿಮಾನದ ಹಿಂಭಾಗವೆಲ್ಲ ಕೆಸರುಮಯವಾಗಿದೆ. ಟ್ಯಾಕ್ಸಿ ವೇ ಬಿಟ್ಟು ಸಾಗಿದ ವಿಮಾನ ಲ್ಯಾಂಡ್ ಆದ ಜಾಗವೂ ಕೆಸರಿನಿಂದ ತುಂಬಿದ್ದು, ವಿಮಾನದ ಚಕ್ರಗಳು ಕೆಸರಿನಲ್ಲಿ ಹೂತು ಹೋಗಿವೆ.
ವಿಮಾನ ರನ್ ವೇಯಲ್ಲಿ ಇಳಿಯುವ ವೇಗ ಕಂಡು ಅದರೊಳಗಿದ್ದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದರು. ಅಲ್ಲದೆ, ಘಟನೆ ಸಂಭವಿಸಿದ ವೇಳೆ ವಿಮಾನ ನಿಲ್ದಾಣದಲ್ಲಿನ ಕಾರ್ಮಿಕರು ಕೂಡ ದಿಕ್ಕಾಪಾಲಾಗಿ ಓಡಿದ್ದರು ಎನ್ನಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಕ್ಕೆ ಕಾದಿದ್ದ ಪ್ರಯಾಣಿಕರು ಕೂಡ ಈ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ.
2010ರ ಮೇ 23ರಂದು ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ರನ್ವೇನಲ್ಲಿ ಜಾರಿದ ಪರಿಣಾಮ 158 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದು, ಎಂಟು ಮಂದಿ ಬದುಕುಳಿದಿದ್ದರು.
ಎಷ್ಟು ಗಂಟೆಗೆ ? ಹೇಗಾಯಿತು ?
ದುಬೈಯಿಂದ 5:40ರ ಸುಮಾರಿಗೆ ಆಗಮಿಸಿದ ಏರ್ ಇಂಡಿಯಾ-380 ಹೆಸರಿನ ವಿಮಾನ ರನ್ವೇಯಲ್ಲಿ ಇಳಿಯುವುದರ ಬದಲಾಗಿ ರನ್ ವೇ ಬಿಟ್ಟು ಸಾಗಿತ್ತು. ಲ್ಯಾಂಡಿಂಗ್ ಸಂದರ್ಭ ವಿಮಾನ ಓವರ್ ಸ್ಪೀಡ್ಲ್ಲಿದ್ದು, ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದು ಪರಿಣಾಮ ಈ ಘಟನೆ ಸಂಭವಿಸಿದೆ. ವೇಗವಾಗಿ ಇಳಿದ ವಿಮಾನ ಟ್ಯಾಕ್ಸಿ ವೇ ಮೂಲಕ ಟರ್ಮಿನಲ್ನತ್ತ ಸಾಗುತ್ತಿದ್ದಾಗ ಏಕಾಏಕಿಯಾಗಿ ಪಕ್ಕಕ್ಕೆ ಸರಿದು ಮಣ್ಣಿನಲ್ಲಿ ಹೂತು ಹೋಗಿದೆ.
ವಿಮಾನದ ಮೇಲೆ ಚಿಮ್ಮಿದ ಕೆಸರು ಮಣ್ಣು !
ರನ್ ವೇ ಬಿಟ್ಟು ವಿಮಾನ ಸಾಗಿದ್ದರಿಂದ ವೇಗದ ರಭಸಕ್ಕೆ ಅಲ್ಲಿದ್ದ ಕೆಸರು ಮಣ್ಣು ವಿಮಾನಕ್ಕಿಂತಲೂ ಎತ್ತರಕ್ಕೆ ಚಿಮ್ಮಿದೆ. ವಿಮಾನದ ಮುಂಭಾಗ ನೀರು ಹರಿಯುವ ತೋಡನ್ನೂ ದಾಟಿ ಹೋಗಿ ಮಣ್ಣಿನಲ್ಲಿ ಸಿಲುಕಿದೆ. ವಿಮಾನ ರನ್ ವೇಯಲ್ಲಿ ಇಳಿಯುವ ವೇಗ ಕಂಡು ಅದರೊಳಗಿದ್ದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ, ವಿಮಾನ ನಿಲ್ದಾಣದಲ್ಲಿನ ಕಾರ್ಮಿಕರು ಕೂಡ ದಿಕ್ಕಾಪಾಲಾಗಿ ಓಡಿ ಹೋಗಿದ್ದರು.
ಪ್ರಯಾಣಕ್ಕೆ ಹಿಂದೇಟು
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಕ್ಕೆ ಕಾದಿದ್ದ ಪ್ರಯಾಣಿಕರು ಕೂಡ ಈ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ. ತಾವು ಪ್ರಯಾಣಿಸಬೇಕಾದ ವಿಮಾನದತ್ತ ತೆರಳಲು ಕೂಡ ಕೆಲವೊತ್ತು ಹಿಂದೇಟು ಹಾಕಿದ್ದಾರೆ.
ಪ್ರತಿಕೂಲ ಹವಾಮಾನ ಕಾರಣ?
‘ಅಲ್ಪ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ವಿಮಾನ ಇಳಿಸಲು ಪ್ರತಿಕೂಲ ಹವಾಮಾನವಿದೆ’ ಎಂದು ವಿಮಾನದ ಪೈಲೆಟ್ವೊಬ್ಬರು ಎಚ್ಚರಿಕೆಯ ಮನವಿ ಕೊಟ್ಟಿದ್ದರು ಎಂದು ಪ್ರಯಾಣಿಕರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ಆಗುವ ಮೊದಲು ಪೈಲೆಟ್ ಪ್ರಯಾಣಿಕರಿಗೆ ಒಂದು ಸೂಚನೆ ನೀಡಿದ್ದರು. ಈ ಮೊದಲು ನಾವು ವಿಮಾನಿದಿಂದ ಇಳಿಯಲು ತಯಾರಾಗಿದ್ದೇವು. ಇನ್ನೇನು ವಿಮಾನ ಲ್ಯಾಂಡಿಂಗ್ ಆಗುವ ಸಮಯ ವಿಪರೀತ ಮಳೆ ಸುರಿಯುತ್ತಿತ್ತು. ನೆಲದಲ್ಲಿ ಏನೂ ಗೋಚರಿಸುತ್ತಿರಲಿಲ್ಲ. ಆದರೆ ಪೈಲೆಟ್ ವಾಯು ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಹೇಳಿದರು.
ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶಿಸಲು ಪ್ರತಿಕೂಲ ವಾತಾವರಣ ಇದ್ದರಿಂದ ಸುಮಾರು 20ರಿಂದ 25 ನಿಮಿಷಗಳ ಕಾಲ ವಿಮಾನವನ್ನು ಮೇಲೆ ಹಾರಾಡಿಸಿದ್ದಾರೆ. ಕೊನೆಗೆ ವಿಧಿಯಿಲ್ಲದೆ ವಿಮಾನವನ್ನು ರನ್ವೇ ಗೆ ಇಳಿಸಿದ್ದಾರೆ. ನಾವು ವಿಮಾನದಿಂದ ಹೊರಗೆ ಬರಲು ಒಂದು ಗಂಟೆ ಸಮಯ ಹಿಡಿಯಿತು ಎಂದು ಅವರು ತಿಳಿಸಿದ್ದಾರೆ.
ಬಳಿಕ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರನ್ನು ಕರೆದೊಯ್ದರು. ಜತೆಗೆ ಲಗೇಜ್ಗಳನ್ನು ಹೊರತೆಗೆದುಕೊಂಡು ಹೋಗಲು ಅವಕಾಶವಾಯಿತು. ಪೈಲೆಟ್ನ ಸಮಯ ಪ್ರಜ್ಞೆಯಿಂದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದರು. ನಾವು ನಿಜವಾಗಲೂ ಪೈಲೆಟ್ನ್ನು ಪ್ರಶಂಸಿಸಬೇಕು ಎಂದು ಪ್ರಯಾಣಿಕರೊಬ್ಬರು ಸ್ಮರಿಸಿದರು.
ಜೀವ ಕೈಯಲ್ಲಿ ಹಿಡಿದು ಕುಳಿತಿದ್ದೇವು: ಪ್ರಯಾಣಿಕ ಮಹಿಳೆ
ನನ್ನ ಜೀವನದಲ್ಲೇ ಇದೊಂದು ಭಯಾನಕ ಅನುಭವ. ವಿಮಾನವು ತಕ್ಷಣವೇ ರನ್ವೇಯಿಂದ ಹೊರಕ್ಕೆ ನಡೆಯಿತು. ಬಳಿಕ ತೋಡನ್ನು ವಿಮಾನವು ದಾಟಿದೆ. ವಿಮಾನವು ಅಧಿಕ ವೇಗದಲ್ಲಿದ್ದರಿಂದ ದಿಢೀರನೇ ಜಂಪ್ ಆಗಿದ್ದು, ನೆಗೆದ ಅನುಭವವಾಯಿತು. ಪ್ರಯಾಣಿಕರೆಲ್ಲ ಗಾಬರಿಯಿಂದ ಕೂಗಿಕೊಂಡರು. ನಾವಂತೂ ಜೀವವನ್ನು ಕೈಯಲ್ಲೇ ಹಿಡಿದುಕೊಂಡು ಕುಳಿತ್ತಿದ್ದೇವು ಎಂದು ಸುಮಾರು 45 ವರ್ಷದ ಮಹಿಳೆಯೊಬ್ಬರು ತಿಳಿಸಿದ್ದಾರೆ.
ವಿಮಾನವು ಭೂಸ್ಪರ್ಶಿಸುವ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಅಲುಗಾಡಿತು. ನಾವು ಜೀವನ ಇಲ್ಲಿಗೇ ಮುಗಿದುಹೋಯಿತು ಎಂದು ಬದುಕಿನ ಆಸೆಯನ್ನೇ ಕೈಬಿಟ್ಟೆದ್ದೇವು. ಕೈ ಕಾಲುಗಳು ನಡುಗುತ್ತಿದ್ದವು. ಘಟನೆ ಸಂದರ್ಭ ಏನು ಮಾಡಬೇಕು ಎನ್ನುವುದು ಕೂಡ ತೋಚುತ್ತಿರಲಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಪ್ರಯಾಣಿಕಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡರು.