ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು: ರವಿ ನಾಯ್ಕ್
ಮಂಗಳೂರು: ಯುವ ತರುಣರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು ಎಂದು ಕೊಣಾಜೆ ಠಾಣೆಯ ಪೊಲೀಸ್ ನಿರೀಕ್ಷಕರಾದ ರವಿ ನಾಯ್ಕ್ ತಿಳಿಸಿದರು.
ಯಾದ್ ಪೌಂಡೇಶನ್ ಮಲಾರ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಪಾವೂರು ಗ್ರಾಮ ಪಂಚಾಯತ್ ಬಳಿಯ ಸಮುದಾಯಭವನದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ನೆರವೇರಿಸಿದರು.
ಅಧ್ಯಕ್ಷತೆಯನ್ನು ಯಾದ್ ಫೌಂಡೇಶನ್ ಮಲಾರ್ ಅಧ್ಯಕ್ಷ ರಿಯಾಜ್ ಅಹಮದ್ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರವಿ ನಾಯ್ಕ್ ರಕ್ತದಾನ ಮಹಾದಾನ, ಯುವ ತರುಣರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು, ನಮ್ಮ ಒಂದೊಂದು ಹನಿ ರಕ್ತವು ಒಂದೊಂದು ಜೀವವನ್ನು ಬದುಕಿಸುತ್ತದೆ, ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ ಎಂದರು. ಯಾರೆಲ್ಲಾ ರಕ್ತದಾನಿಗಳಾಗಲು ಯೋಗ್ಯರು ಮತ್ತು ರಕ್ತದಾನ ಮಾಡುವಾಗ ಮತ್ತು ಮಾಡಿದ ನಂತರ ಗಮನಿಸಬೇಕಾದ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಿದರು.
ಡಾ. ಸುಪ್ರಿಯ ಉಸ್ತುವಾರಿ ಯೇನಪೋಯ ರಕ್ತನಿಧಿ ಮಾತನಾಡುತ್ತಾ ಪ್ರತಿ ಎರಡು ನಿಮಿಷಕ್ಕೆ ಒಂದು ರೋಗಿಗೆ ರಕ್ತದ ಆವಶ್ಯಕತೆ ಇದೆ. ನೀವು ನೀಡುವ ಒಂದು ಯೂನಿಟ್ ರಕ್ತವು ಐದು ರೋಗಿಗಳ ಬಾಳಿಗೆ ಬೆಳಕಾಗುತ್ತೆ ಎಂದರು.ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅತಿಥಿಗಳಾಗಿ ಫಿರೋಝ್ ಮಲಾರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಪಾವೂರ್, ಲೀಲಾವತಿ ಉಪಾಧ್ಯಕ್ಷರು ಗ್ರಾಮ ಪಾವೂರ್, ಫಯಾಝ್ ಮಾಡೂರ್, ಕೋಶಾಧಿಕಾರಿ ಬ್ಲಡ್ ಡೋನರ್ಸ್ ಮಂಗಳೂರು, ಸಿರಾಜ್ ಫಜೀರ್ ಕಾರ್ಯನಿರ್ವಾಹಕ ಬ್ಲಡ್ ಡೋನರ್ಸ್ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ, ಗ್ರಾಮ ಪಂಚಾಯತ್ ಪಾವೂರು ಇದರ ಸದಸ್ಯರು, ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯ ನಿರ್ವಾಹಕರು ಮತ್ತು ಯಾದ್ ಫೌಂಡೇಶನ್ ಮಲಾರ್ ಇದರ ಸದಸ್ಯರು ಉಪಸ್ಥಿತರಿದ್ದರು.
ಒಂದೇ ಕುಟುಂಬದ ತಂದೆ ಎಂ.ಆರ್.ನಝೀರ್ ಮಕ್ಕಳಾದ ಎಂ.ಆರ್.ನೌಷಾದ್ ಮತ್ತು ಎಂ. ಆರ್. ನೌಫಲ್ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮದ ಮುಖ್ಯ ಆಕರ್ಷಕ ಬಿಂದುವಾದರು.
ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೆ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯ ನಿರ್ವಾಹರಾದ ಸಿರಾಜ್ ಪಜೀರ್ ನಿರೂಪಿಸಿದರು. ಯಾದ್ ಫೌಂಡೇಶನ್ ಮಲಾರ್ ಇದರ ಅಧ್ಯಕ್ಷ ರಿಯಾಝ್ ಅಹ್ಮದ್ ವಂದಿಸಿದರು.