ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ: ಕಾಲೇಜಿನಿಂದ ಐವರು ವಿದ್ಯಾರ್ಥಿಗಳು ಅಮಾನತು
ಪುತ್ತೂರು: ಕಾಲೇಜು ವಿದ್ಯಾರ್ಥಿನಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ, ವೀಡಿಯೊ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ವಿವೇಕಾನಂದ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಕಾಲೇಜ್ನಿಂದ ಐವರು ಆರೋಪಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕಾಲೇಜು ಸಮವಸ್ತ್ರ ಧರಿಸಿರುವ ವಿದ್ಯಾರ್ಥಿನಿ, ವಿದ್ಯಾರ್ಥಿಗಳು ಕಾರೊಂದರಲ್ಲಿ ಸರಸ ಮಾಡುತ್ತಿರುವ ದೃಶ್ಯಾವಳಿಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಬೆಳಗ್ಗೆ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಘಟನೆಯ ಕುರಿತು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದರು. ಜೊತೆಗೆ ವಿದ್ಯಾರ್ಥಿನಿ ನೀಡಿದ ದೂರಿನಂತೆ ಅತ್ಯಾಚಾರ ಪ್ರಕರಣ ಮತ್ತು ಐಟಿ ಆ್ಯಕ್ಟ್ ಹಾಗೂ ದಲಿತ ದೌರ್ಜನ್ಯ ಕೇಸು ದಾಖಲಿಸಿಕೊಂಡು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರಿನ ವಿವೇಕಾನಂದ ಕಾಲೇಜಿನ ದ್ವಿತೀಯ ಪದವಿ ತರಗತಿಯ ವಿದ್ಯಾರ್ಥಿಗಳಾದ ಪುತ್ತೂರು ತಾಲೂಕಿನ ಬಜತ್ತೂರು ಗ್ರಾದಮ ಗಾಣದಮೂಲೆ ನಿವಾಸಿ ಗುರುನಂದನ್(19), ಆರ್ಯಾಪು ಗ್ರಾಮದ ಪಿಲಿಗುಂಡ ನಿವಾಸಿ ಸುನಿಲ್(19), ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಡಂಬು ನಿವಾಸಿ ಪ್ರಜ್ವಲ್(19), ಪೆರ್ನೆಯ ಕಿಶನ್(19), ಬರಿಮಾರು ಗ್ರಾಮದ ಬಲ್ಯ ನಿವಾಸಿ ಪ್ರಖ್ಯಾತ್(19) ಬಂಧಿತ ಆರೋಪಿಗಳು.
ಓರ್ವ ಯುವತಿ ಮತ್ತು ಮೂವರು ಯುವಕರು ಸಾಮೂಹಿಕವಾಗಿ ಈ ಕೃತ್ಯದಲ್ಲಿ ತೊಡಗಿರುವ ಹಾಗೂ ಒಬ್ಬ ವ್ಯಕ್ತಿ ಚಿತ್ರೀಕರಣ ಮಾಡುತ್ತಿರುವಂತೆ ಕಂಡು ಬರುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗ ಪರಿಗಣಿಸಿದ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು ಹಾಗೂ ಈ ಆಧಾರದಲ್ಲಿ ತನಿಖೆ ನಡೆಸಿದ್ದರು. ಬಳಿಕ ವಿಚಾರಣೆ ನಡೆಸಿ ಸಂತ್ರಸ್ತ ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದಿದ್ದರು. ಘಟೆನೆಗೆ ಸಂಬಂಧಿಸಿ ಬೆಳಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು ಠಾಣೆಗೆ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿಯನ್ನು ಕರೆಸಿ ವಿಚಾರಣೆ ನಡೆಸಿದ್ದರು.
ಫೆಬ್ರವರಿಯಲ್ಲಿ ನಡೆದ ಘಟನೆ
ವಿಚಾರಣೆಯ ಸಂದರ್ಭದಲ್ಲಿ ವಿದ್ಯಾರ್ಥಿನಿಯು ಅತ್ಯಾಚಾರ ಘಟನೆ ಫೆಬ್ರವರಿ ತಿಂಗಳಲ್ಲಿ ನಡೆದಿದೆ ಎಂದು ತಿಳಿಸಿದ್ದು, ನಾನು ಕಾಲೇಜು ಮುಗಿಸಿ ಸಂಜೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇದ್ದ ವೇಳೆ ಕಾರಿನಲ್ಲಿ ಬಂದ ಅರೋಪಿತ ವಿದ್ಯಾರ್ಥಿಗಳು ಸ್ವಲ್ಪ ಮಾತನಾಡಲು ಇದೆ ಎಂದು ಕಾರಿನಲ್ಲಿ ಹತ್ತಿಸಿ ಮುಖ್ಯರಸ್ತೆಯಿಂದ ಒಳ ರಸ್ತೆಗೆ ಕರೆದುಕೊಂಡು ಹೋದರು. ಅಲ್ಲಿ ಹೋಗುತ್ತಿದ್ದಂತೆ ಈ ರಸ್ತೆಯಲ್ಲಿ ಯಾಕೆ ಕರೆದು ಕೊಂಡು ಬಂದಿದ್ದೀರಿ ಎಂದು ವಿಚಾರಿಸಿದ್ದೆ. ಇದೇ ವೇಳೆ ಕಾರನ್ನು ನಿಲ್ಲಿಸಿದ ವಿದ್ಯಾರ್ಥಿಗಳು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಬಾರದು. ಹೇಳಿದರೆ ಅಥವಾ ಪೊಲೀಸರಿಗೆ ತಿಳಿಸಿದರೆ ನಿನ್ನ ವೀಡಿಯೊ ತೆಗೆದಿದ್ದೇವೆ. ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುತ್ತೇವೆ ಎಂದು ಬೆದರಿಸಿದ್ದರು. ಇದರಿಂದಾಗಿ ಹೆದರಿದ ನಾನು ಮನೆಯಲ್ಲಿ ಸಹಿತ ಯಾರಿಗೂ ಹೇಳಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದು, ಈ ಸಂದರ್ಭದಲ್ಲಿ ತನಗೆ ಯಾವುದೆ ಅಮಲು ಪದಾರ್ಥ ನೀಡಿಲ್ಲ ಎಂದು ವಿಚಾರಣೆ ವೇಳೆಗೆ ವಿದ್ಯಾರ್ಥಿನಿ ಮಾಹಿತಿ ನೀಡಿದ್ದರು.
ಈ ಬಗ್ಗೆ ತನಿಖೆ ಮುಂದುವರಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಿ ತನಿಖೆಯನ್ನು ಚುರುಕುಗೊಳಿಸಿದ್ದರು. ಸಂಜೆ ವೇಳೆಗೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತ ವಿದ್ಯಾರ್ಥಿನಿಯನ್ನು ಡಿಎನ್ಎ ಪರೀಕ್ಷೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಘಟನೆಗೆ ಸಂಬಂಧಿಸಿ ಐಪಿಟಿ 12/19 ಸೆಕ್ಷನ್ 37, 63, 41, ಐಟಿ ಆ್ಯಕ್ಟ್ ಹಾಗೂ ವಿದ್ಯಾರ್ಥಿನಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದವರಾಗಿದ್ದರಿಂದ ದಲಿತ ದೌರ್ಜನ್ಯ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೃಶ್ಯಾವಳಿಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ವಿದ್ಯಾರ್ಥಿನಿ ನೀಡಿರುವ ದೂರಿನಂತೆ ಅತ್ಯಾಚಾರ ಪ್ರಕರಣ ಮತ್ತು ಐಟಿ ಆಕ್ಟ್ ಹಾಗೂ ದಲಿತ ದೌಜನ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ
- ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್
ಇನ್ಫಾರ್ಮೆಶನ್ ಟೆಕ್ನಾಲಜಿ ಆಕ್ಟ್ ಪ್ರಕಾರ ಕಾಣಿಸ ಬಾರದಾಗಿರುವ ಅಂಗಾಂಗಗಳನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲ ವೀಡಿಯೊ ವೈರಲ್ ಅಥವಾ ಫೇಸ್ಬುಕ್ನಲ್ಲಿ ಅಪ್ಲೋಡ್ ಹಾಗೂ ತಮ್ಮ ಮೊಬೈಲ್ ಫೋನ್ ಮೆಮೊರಿ, ಕಂಪ್ಯೂಟರ್ ಗಳಲ್ಲಿ ಇಟ್ಟಿರುವುದು ಅಪರಾಧವಾಗಿದೆ. ಈ ಕುರಿತು ರವಾನಿಸುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಆರೋಪಿಗಳಿಗೆ 5 ವರ್ಷಗಳ ಜೈಲು ಶಿಕ್ಷೆಯಾಗಲಿದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಕಡಿಮೆಯಿದೆ. ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರು ಈ ಕುರಿತು ಸಲಹೆ ಜಾಗೃತಿ ಮೂಡಿಸುವ ಅಗತ್ಯವಿದೆ.
-ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್
ಎಲ್ಲರೂ ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯರು
ಬಂಧಿತ ಎಲ್ಲಾ ಆರೋಪಿಗಳು ಕಾಲೇಜಿನ ಎಬಿವಿಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು ಹಾಗೂ ಸಂತ್ರಸ್ತ ಯುವತಿಯೂ ಎಬಿವಿಪಿ ಸದಸ್ಯೆಯಾಗಿ ಗುರುತಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಸಂಘ ಪರಿವಾರ ಬೆಂಬಲಿತ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಇಂತಹ ಪೈಶಾಚಿಕ ಕೃತ್ಯ ಎಸಗಿರುವ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಕಾಲೇಜ್ನಿಂದ ಐವರು ಆರೋಪಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.