ಚಾಂದಿನಿ ಚೌಕ್ ಕೋಮು ಹಿಂಸಾಚಾರ ಘಟನೆ ಅಮಿತ್ ಶಾರನ್ನು ಭೇಟಿಯಾದ ದಿಲ್ಲಿ ಪೊಲೀಸ್ ಆಯುಕ್ತ
Update: 2019-07-03 16:13 GMT
ಹೊಸದಿಲ್ಲಿ, ಜು. 3: ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಬುಧವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ ಹಾಗೂ ಚಾಂದಿನಿ ಚೌಕ್ನಲ್ಲಿ ರವಿವಾರ ನಡೆದ ಕೋಮ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಪಾರ್ಕಿಂಗ್ ಕುರಿತ ವಿವಾದ ಹಿಂಸಾಚಾರಕ್ಕೆ ತಿರುಗಿದ ಬಳಿಕ ಉದ್ರಿಕ್ತ ಗುಂಪೊಂದು ಪ್ರಾರ್ಥನಾ ಮಂದಿರದಲ್ಲಿ ದಾಂಧಲೆ ನಡೆಸಿತ್ತು. ಅನಂತರ ಹೌಝ್ ಖಾಝಿ ಪ್ರದೇಶದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.
ಅಮಿತ್ ಶಾ ಅವರಿಗೆ ಹೌಝ್ ಖಾಝಿ ಘಟನೆ ಬಗ್ಗೆ ವಿವರಣೆ ನೀಡಲಾಗಿದೆ. ಅಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಮ್ಮಲ್ಲಿ ಸಿಸಿಟಿವಿ ದೃಶ್ಯಾವಳಿ ಇದೆ. ನಾವು ಈ ದೃಶ್ಯಾವಳಿಯನ್ನು ವಿಶ್ಲೇಷಿಸುತ್ತಿದ್ದೇವೆ ಎಂದು ಪಟ್ನಾಯಕ್ ಹೇಳಿದರು.