ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆ: ಶಿವಕುಮಾರ್ಗೆ ಪ್ರಥಮ ಬಹುಮಾನ
Update: 2019-07-04 20:17 IST
ಉಡುಪಿ, ಜು.4: ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್ ದಶಮಾನೋತ್ಸವದ ಅಂಗವಾಗಿ ಯಕ್ಷಗಾನ ಸಾಹಿತ್ಯಾಸಕ್ತರಿಗಾಗಿ ಇತ್ತೀಚೆಗೆ ಏರ್ಪಡಿಸಿದ್ದ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ ಬಿ.ಎ.ಅಳಗೋಡು ರಚಿಸಿದ ‘ದೇವಸೇನಾ ಪರಿಣಯ’ (ಸ್ಕಂದ ವಿಜಯ) ಎಂಬ ಪ್ರಸಂಗಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಸೆ.7 ಮತ್ತು 8ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಕುಮಾರ್ ಅವರಿಗೆ ಬಹುಮಾನ ವಿತರಿಸಲಾಗುವುದು. ಮೊದಲ ಬಹುಮಾನವು 10,000ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ.
ಮೂಲತ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಬಳಿಯ ಅಳಗೋಡುನವರಾದ ಶಿವಕುಮಾರ್ ಈಗಾಗಲೇ ‘ಸ್ನೇಹಲೋಕ’, ‘ಲೌಕಿಕದ ಬೆಳಗು’, ‘ಚಿಟ್ಟಾಣಿಯವರ ಕೊನೆಯ ದಿನಗಳು’, ‘ಮಹೀಂದ್ರ ಮಹಾಭಿಷ’ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದು, ಇದು ಅವರು ರಚಿಸುತ್ತಿರುವ ಮೂರನೇ ಯಕ್ಷಕೃತಿಯಾಗಿದೆ.