ಉಡುಪಿಯಲ್ಲಿ ಸ್ಯಾಂಡ್‌ಬಜಾರ್ ಆ್ಯಪ್ ಮೂಲಕ ಜನರಿಗೆ ಮರಳು: ಹೆಪ್ಸಿಬಾ ರಾಣಿ ಕೊರ್ಲಪಾಟಿ

Update: 2019-07-04 16:24 GMT

ಉಡುಪಿ, ಜು.4: ಉಡುಪಿ ಜಿಲ್ಲೆಯಲ್ಲಿ ಮರಳು ವಿತರಣೆ ಕುರಿತಂತೆ ಸ್ಯಾಂಡ್ ಬಜಾರ್ ಆ್ಯಪ್‌ನ ಅಭಿವೃದ್ದಿ ಕಾರ್ಯ ನಡೆಯುತ್ತಿದ್ದು, ಆ್ಯಪ್ ಅಭಿವೃದ್ಧಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆ್ಯಪ್ ಮೂಲಕ ಸಾರ್ವಜನಿಕರು ನೇರವಾಗಿ ಮರಳು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮರಳು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯ ಜನರಿಗೆ ಕಡಿಮೆ ದರದಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ, ಮನೆ ಬಾಗಿಲಿಗೆ ಮರಳು ತಲುಪಿಸುವ ಕುರಿತಂತೆ ಜಿಲ್ಲಾಡಳಿತದ ವತಿಯಿಂದ ಸ್ಯಾಂಡ್ ಬಜಾರ್ ಆ್ಯಪ್‌ನ ಅಭಿವೃದ್ದಿ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಆರಂಭವಾಗಿರುವ ಆ್ಯಪ್ ಮಾದರಿಯಲ್ಲಿಯೇ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಆ್ಯಪ್‌ನ ಅಭಿವೃದ್ದಿ ನಡೆಯುತ್ತಿದೆ ಎಂದವರು ವಿವರಿಸಿದರು.

ಆ್ಯಪ್ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಅದರಲ್ಲಿ ಅಳವಡಿಸಬಹುದಾದ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಅದನ್ನು ಆ್ಯಪ್ ಅಭಿವೃದ್ದಿಪಡಿಸುವ ಸಂಸ್ಥೆಗೆ ನೀಡಲಾಗಿದೆ. ಸಂಪೂರ್ಣವಾಗಿ ಆ್ಯಪ್ ಅಭಿವೃದ್ದಿಗೊಂಡ ನಂತರ ಸಾರ್ವಜನಿಕರಿಗೆ ಮರಳು ವಿತರಣೆ ಕುರಿತಂತೆ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಇದರ ಮೂಲಕವೇ ಮರಳು ವಿತರಿಸಲಾಗುವುದು ಎಂದ ಜಿಲ್ಲಾಧಿಕಾರಿ, ಶೀಘ್ರದಲ್ಲಿ ಆ್ಯಪ್ ಸಿದ್ಧಪಡಿಸುವಂತೆ ಸಂಬಂದಪಟ್ಟ ಸಂಸ್ಥೆಗೆ ಸೂಚಿಸಿದರು.

ಸ್ಯಾಂಡ್ ಬಜಾರ್ ಆ್ಯಪ್ ಬಳಸುವ ಮೂಲಕ ಸಾರ್ವಜನಿಕರು ತಮಗೆ ಸಮೀಪದ ಸ್ಥಳದಿಂದಲೇ ಮರಳು ಪಡೆಯಬಹುದಾಗಿದ್ದು, ಆನ್‌ಲೈನ್‌ನಲ್ಲಿ ಮರಳಿಗೆ ಸಂಬಂಧಪಟ್ಟ ದರ ವೀಕ್ಷಿಸಿ, ಆನ್‌ಲೈನ್ ಪಾವತಿ ಮಾಡಿದಲ್ಲಿ ಮನೆ ಬಾಗಿಲಿಗೆ ಮರಳು ತಲುಪಲಿದೆ. ಪ್ರತ್ಯೇಕ ವಾಹನ ಬಾಡಿಗೆ ಪಾವತಿಸುವ ಅಗತ್ಯವಿಲ್ಲ. ಅಲ್ಲದೇ ತಾವು ಮರಳು ಬುಕ್ ಮಾಡಿದ ನಂತರ ಮರಳು ಲೋಡ್ ಆದ ಬಗ್ಗೆ, ಯಾವ ವಾಹನದಲ್ಲಿ ಬರುತ್ತಿದೆ ಎಂಬ ಬಗ್ಗೆ ಪ್ರತಿ ಯೊಂದು ಮಾಹಿತಿಗಳೂ ನಿಮ್ಮ ಮೊಬೈಲಿಗೆ ಬರಲಿದೆ. ಅತ್ಯಂತ ಪಾರದರ್ಶಕ ವಾಗಿ ಈ ಪ್ರಕ್ರಿಯೆ ನಡೆಯಲಿದೆ.

ಮರಳು ಗುತ್ತಿಗೆದಾರರ ಮತ್ತು ಮರಳು ಸಾಗಾಟ ಮಾಡುವ ವಾಹನಗಳ ನೊಂದಣಿ ಸಹ ಆ್ಯಪ್‌ನಲ್ಲಿ ನಡೆಯಲಿದೆ ಎಂದು ಹೆಪ್ಸಿಬಾ ರಾಣಿ ನುಡಿದರು.

ಆ್ಯಪ್ ಬಳಕೆಗೆ ಸಿದ್ದಗೊಂಡ ನಂತರ ಮರಳು ಗುತ್ತಿಗೆದಾರರು ಮತ್ತು ಮರಳು ಸಾಗಾಟ ಮಾಡುವ ವಾಹನಗಳ ಚಾಲಕರಿಗೆ ಆ್ಯಪ್ ಬಳಕೆ ಕುರಿತಂತೆ ಸಂಪೂರ್ಣ ಮಾಹಿತಿ ನೀಡಲು ತರಬೇತಿ ಕಾರ್ಯಾಗಾರ ಏರ್ಪಡಿಸುವುದಾಗಿ ಹಾಗೂ ಸಾರ್ವಜನಿಕರಿಗೆ ಸಹ ಆ್ಯಪ್ ಬಳಕೆ ಕುರಿತು ಮಾಹಿತಿ ನೀಡುವುದಾಗಿ ಹೆಪ್ಸಿಬಾ ರಾಣಿ ತಿಳಿಸಿದರು.

ಆ್ಯಪ್‌ನಲ್ಲಿ ಇನ್ನೂ ಅಳವಡಿಸಬಹುದಾದ ಅಂಶಗಳ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಬಾಕರನ್, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ರಾಂಜಿ ನಾಯ್ಕಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 (ಸ್ಯಾಂಡ್ ಬಜಾರ್ ಆ್ಯಪ್ ಕುರಿತು ಹೆಚ್ಚಿನ ಮಾಹಿತಿಗಾಗಿ ನವೀನ್ (9663303409) ಇವರನ್ನು ಸಂಪರ್ಕಿಸಬಹುದು.)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News