×
Ad

ಎಲ್‌ಐಸಿಯ ಕೋಟ್ಯಾಂತರ ರೂ. ಜೀವನ ಮಧುರ ಪಾಲಿಸಿ ಹಗರಣ: ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದಿಂದ ವಿಚಾರಣೆ

Update: 2019-07-09 20:35 IST

 ಉಡುಪಿ, ಜು.9: ಭಾರತೀಯ ಜೀವವಿಮಾ ನಿಗಮದ ಉಡುಪಿ ವಿಭಾಗಕ್ಕೆ ಸೇರಿದ 57 ಸಾವಿರಕ್ಕೂ ಅಧಿಕ ಮೈಕ್ರೋ ಇನ್ಶೂರೆನ್ಸ್ ಪಾಲಿಸಿದಾರರು ಕಟ್ಟಿದ್ದ ಕೋಟ್ಯಾಂತರ ರೂ. ಪ್ರೀಮಿಯಂ ಹಣವನ್ನು ಎಲ್ಲೈಸಿಯೇ ನೇಮಿಸಿದ್ದ ಮಧ್ಯವರ್ತಿಗಳು ಕಬಳಿಸಿದ ಹಗರಣವನ್ನು ಇದೀಗ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ವಿಚಾರಣೆಗಾಗಿ ಸ್ವೀಕರಿಸಿದೆ ಎಂದು ಈ ಹಗರಣದಲ್ಲಿ ಸಂಪೂರ್ಣ ನಿರಪರಾಧಿಗಳಾದರೂ ಪಾಲಿಸಿದಾರರಿಂದ ಧೂಷಣೆಗೊಳಗಾಗಿರುವ ಚಿಕ್ಕಮಗಳೂರು ಜಿಲ್ಲೆಯ ನೂರಾರು ಬಡ ಸಹಾಯಕ ಏಜೆಂಟರುಗಳ ಪರವಾಗಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಡಾ. ರವೀಂದ್ರನಾಥ ಶಾನುಭಾಗ್ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಈ ಪ್ರಕರಣದ ಕೂಲಂಕಷ ತನಿಖೆ ನಡೆಸಿದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಲ್ಲಿಸಿದ ದೂರನ್ನು ಪರಿಶೀಲಿಸಿದ ಆಯೋಗವು ಪಾಲಿಸಿದಾರರಿಗೆ ಅನ್ಯಾಯವಾಗಿರುವುದು ಮೇಲ್‌ನೋಟಕ್ಕೆ ತೋರಿ ಬಂದಿರುವುದರಿಂದ ಸಂತ್ರಸ್ಥರ ಪರವಾದ ಅರ್ಜಿ ಯನ್ನು ವಿಚಾರಣೆಗಾಗಿ ಸ್ವೀಕರಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಡಾ.ಶಾನುಭಾಗ್ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೀವವಿಮಾ ನಿಗಮ ಉಡುಪಿ ವಿಭಾಗದಲ್ಲಿ ಮಾರಾಟ ಮಾಡಿರುವ ಒಟ್ಟು 58,086 ಜೀವನ ಮಧುರ ಪಾಲಿಸಿಗಳಲ್ಲಿ ಶೇ.90ರಷ್ಟು ಪಾಲಿಸಿಗಳು ರದ್ದಾಗಿದ್ದು, ಕೇವಲ 213 ಪಾಲಿಸಿಗಳು ಮಾತ್ರ ಜೀವಂತವಾಗಿವೆ. ಈ ಪ್ರಕರಣ ದಲ್ಲಿ ಕರ್ತವ್ಯ ನಿರ್ಲಕ್ಷ ತೋರಿಸಿದ ಎಲ್ಲೈಸಿಯ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ಪ್ರತಿಷ್ಠಾನ ನೀಡಿದ ದೂರಿಗೆ ಜೀವವಿಮಾ ನಿಗಮದ ಆಡಳಿತ ಹಾಗೂ ಹಿಂದಿನ ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್ ಜೈಟ್ಲಿ ಸೇರಿದಂತೆ ಆರ್ಥಿಕ ಸಚಿವಾಲಯದಿಂದ ಯಾವ ಸ್ಪಂದನೆಯೂ ಬಾರದ ಹಿನ್ನೆಲೆಯಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಲಾಗಿತ್ತು ಎಂದವರು ವಿವರಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಎಲ್ಲೈಸಿ ಪರವಾಗಿ ಪಾಲಿಸಿದಾರರಿಂದ ಹಣ ಸಂಗ್ರಹಿಸಿದ ಅಮಾಯಕ ಅಂಗನವಾಡಿ ಕಾರ್ಯಕರ್ತೆಯರು ಈ ಹಗರಣದಿಂದಾಗಿ ಪಾಲಿಸಿದಾರರ ಆಕ್ರೋಶಕ್ಕೆ ಬಲಿಯಾಗಿದ್ದರು. ಆಯಾ ಗ್ರಾಮಗಳಲ್ಲಿದ್ದ ಪಾಲಿಸಿದಾರರಿಂದ ಸಂಗ್ರಹಿಸಿದ ಕೋಟ್ಯಾಂತರ ರೂ.ಪ್ರೀಮಿಯಂ ಹಣವನ್ನು ಎಲ್ಲೈಸಿಯೇ ನೇಮಿಸಿದ್ದ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದ ಅಂಗನವಾಡಿ ಕಾರ್ಯಕರ್ತೆಯರು ಇದೀಗ ಆಯೋಗದ ತೀರ್ಪಿನಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದವರು ತಿಳಿಸಿದರು.

ಪ್ರಕರಣದ ಹಿನ್ನೆಲೆ

ಹಳ್ಳಿಯಲ್ಲಿರುವ ಬಡ ಜನರಿಗೆ ನೆರವಾಗುವ ಈ ಮೈಕ್ರೋ ಇನ್ಶೂರೆನ್ಸ್ ಯೋಜನೆಯ ಪ್ರಕಾರ 600ರೂಗಳಷ್ಟು ಕಡಿಮೆ ಪ್ರೀಮಿಯಂಗೆ ಪಾಲಿಸಿ ಖರೀದಿಸಬಹುದಾಗಿತ್ತು. 15 ವರ್ಷಗಳ ಅವಧಿಗೆ 15 ಸಾವಿರದಿಂದ 50ಸಾವಿರ ರೂ. ಮೊತ್ತದ ಈ ಪಾಲಿಸಿಗೆ ಅತೀ ಕಡಿಮೆ ವಾರ್ಷಿಕ ಪ್ರೀಮಿಯಂ ನಿಗದಿಗೊಳಿಸಲಾಗಿತ್ತು. ಇದರಿಂದಾಗಿ ವಾರ್ಷಿಕವಾಗಿ ಒಂದೇ ಗಂಟಿನಲ್ಲಿ 600ರೂಗಳನ್ನು ಕೊಡಲಾಗದವರಿಗಾಗಿ 50ರೂ ಮಾಸಿಕ ಕಂತುಗಳನ್ನೂ ನಿಗದಿಗೊಳಿಸಲಾಗಿತ್ತು.

ಎಲ್ಲೈಸಿ ಪರವಾಗಿ ಆಯಾ ಗ್ರಾಮಗಳಲ್ಲಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಈ ಪ್ರೀಮಿಯಂ ಹಣವನ್ನು ಸ್ವೀಕರಿಸಿ ಎಲ್ಲೈಸಿಯವರೇ ನೇಮಿಸಿರುವ ಜಿಲ್ಲಾ ವಿಮಾ ಪ್ರತಿನಿಧಿಗಳಿಗೆ ಹಸ್ತಾಂತರಿಸಬೇಕಾಗಿತ್ತು. 2009-10ರ ವರ್ಷದಲ್ಲಿ ಪ್ರಾರಂಭಿಸಿದ ಈ ಯೋಜನೆಯಲ್ಲಿ ಉಡುಪಿ ವಿಭಾಗಕ್ಕೆ ಸೇರಿದ ಕಡೂರು, ಚಿಕ್ಕಮಗಳೂರು, ಅರಸಿಕೆರೆ, ತರೀಕೆರೆ, ಮೂಡಿಗೆರೆ, ಎನ್.ಆರ್.ಪುರ ಮುಂತಾದ ತಾಲೂಕುಗಳ 200ಕ್ಕೂ ಹೆಚ್ಚು ಗ್ರಾಮಗಳಿಂದ 58,000ಕ್ಕೂ ಹೆಚ್ಚಿನ ಬಡ ಹಳಿ್ಳಗರು ಈ ವಿಮಾ ಪಾಲಿಸಿ ಖರೀದಿಸಿದ್ದರು.

ಪ್ರತೀ ತಿಂಗಳು ಇವರಿಂದ ಪ್ರೀಮಿಯಂ ಹಣವನ್ನು ಸಂಗ್ರಹಿಸುತಿದ್ದ ಅಂಗನವಾಡಿ ಕಾರ್ಯಕರ್ತೆಯರು ನಿಯಮಿತವಾಗಿ ಅದನ್ನು ಎಲ್ಲೈಸಿಯಿಂದ ನೇಮಿತವಾದ 1. ಸಮನ್ವಯ ಗ್ರಾಮಿಣ ಅಭಿವೃದ್ಧಿ ಸಂಸ್ಥೆ, 2. ಶುಭೋದಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ 3. ಮುಕ್ಕಣ್ಣೇಶ್ವರಿ ಯುವತಿ ವುಂಡಲಗಳಿಗೆ ಹಸ್ತಾಂತರಿಸುತಿದ್ದರು.

2013ರ ಜುಲೈ ತಿಂಗಳಲ್ಲಿ ಪಾಲಿಸಿದಾರರೊಬ್ಬರು ನಿಧನರಾದಾಗ ಸಲ್ಲಿಸಿದ್ದ ‘ಕ್ಲೈಮ್ ಪಾಲಿಸಿ ಜೀವಂತವಾಗಿ ಉಳಿದಿಲ್ಲ’ ಎಂಬ ಕಾರಣಕ್ಕಾಗಿ ತಿರಸ್ಕರಿಸಲ್ಪಟ್ಟಿತ್ತು. ಈ ಪಾಲಿಸಿಯಲ್ಲಿ ಜೀವವಿಮಾ ನಿಗಮ ಕೇವಲ ಒಂದೇ ಪ್ರೀಮಿಯಂ ಕಂತನ್ನು ಸ್ವೀಕರಿಸಿರುವುದನ್ನು ಗಮನಿಸಲಾಯಿತು. ಪಾಲಿಸಿದಾರರು ಕಟ್ಟಿದ್ದ ಹಣವನ್ನು ಎಲೈಸಿ ಪ್ರತಿನಿಧಿಯಾದ ಸಮನ್ವಯ ಗ್ರಾಮೀಣ ಸಂಸ್ಥೆಯವರು ಲಪಟಾಯಿಸಿದುದು ಅಂದು ಮೊದಲ ಬಾರಿ ಬೆಳಕಿಗೆ ಬಂತು.

ಪಾಲಿಸಿದಾರರಿಂದ ಹಲ್ಲೆ: ಪಾಲಿಸಿದಾರರು ಮೋಸಹೋದ ಸುದ್ದಿ ಕಾಳ್ಗಿಚ್ಚಿ ನಂತೆ ಚಿಕ್ಕಮಗಳೂರಿನ ಎಲ್ಲಾ ಹಳ್ಳಿಗಳಿಗೂ ತಲುಪಿತು. ಪಾಲಿಸಿದಾರರೆಲ್ಲ ಜೀವವಿಮಾ ಕಚೇರಿಗಳನ್ನು ಸಂಪರ್ಕಿಸಿದಾಗ 50,000ಕ್ಕೂ ಹೆಚ್ಚಿನ ಪಾಲಿಸಿ ಗಳಿಗೆ ಇದೇ ಗತಿಬಂದಿರುವುದನ್ನು ಗಮನಿಸಲಾಯಿತು. ಹೀಗಾಗಿ ಹಳ್ಳಿಯ ಬಡ ಪಾಲಿಸಿದಾರರು ಅವರಿಂದ ಹಣ ಪಡೆದ ಆಯಾ ಗ್ರಾಮದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನೇ ಜವಾಬ್ದಾರರನ್ನಾಗಿಸಿ ಅವರ ಮನೆಗಳಿಗೆ ನುಗ್ಗಿ ಗಲಾಟೆ ಎಬ್ಬಿಸಿದರು. ಕೈಗೆ ಸಿಕ್ಕ ಪಾತ್ರೆ, ಹೊಲಿಗೆಯಂತ್ರ, ಕುರ್ಚಿ, ಮೇಜುಗಳನ್ನು ಹೊತ್ತೊಯ್ದರು. ಅನೇಕ ಮಹಿಳೆಯರು ಹಲ್ಲೆಗೂ ಒಳಗಾದರು.

ಎಚ್ಚರಗೊಳ್ಳದ ಎಲ್ಲೈಸಿ: ಆದರೆ ಉಡುಪಿ ವಿಭಾಗದ ಎಲ್ಲೈಸಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಪ್ರಕರಣ ಬೆಳಕಿಗೆ ಬಂದ ಒಂದು ವರ್ಷದ ಬಳಿಕ ತರಿಕೆರೆ ಹಾಗೂ ಕಡೂರು ಪೋಲೀಸ್ ಠಾಣೆಗಳಲ್ಲಿ ಸಮನ್ವಯ ಸಂಸ್ಥೆಯ ಮೇಲೆ ದೂರುಗಳು ದಾಖಲಾದವು. ತನಿಖೆಗಾಗಿ ಎಲ್ಲೈಸಿ ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಸಲಿಲ್ಲ. ಈ ಯೋಜನೆಯಲ್ಲಿ ಸುಮಾರು 30 ಕೋಟಿ ರೂ.ಗಳಷ್ಟು ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇದೆ ಎಂದವರು ದೂರಿದರು.

ಮೈಕ್ರೋ ಇನ್ಶೂರೆನ್ಸ್ ನಿಯಮಗಳ ಪ್ರಕಾರ ಎಲ್ಲೈಸಿಯನ್ನು ಪ್ರತಿನಿಧಿಸುವ ಯಾವುದೇ ಸರ್ಕಾರೇತರ ಸಂಸ್ಥೆ ಮೂರು ವರ್ಷಗಳಲ್ಲಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿಶ್ವಾಸಾರ್ಹ ಸಂಸ್ಥೆಯಾಗಿರಬೇಕು. ಸೊಸೈಟಿ ರಿಜಿಸ್ಟ್ರೇಶನ್ ಕಾಯಿದೆಯ ಪ್ರಕಾರ ನೋಂದಾವಣೆಯಾಗಿರಬೇಕು. ಆದರೆ ಎಲ್ಲೈಸಿ ಈ ನಿಯಮಗಳನ್ನು ಪಾಲಿಸದೇ ಸಂಸ್ಥೆಗಳನ್ನು ನೇಮಿಸಿಕೊಂಡಿರುವುದು ಪ್ರತಿಷ್ಠಾನ ನಡೆಸಿದ ತನಿಖೆಯಿಂದ ಗೊತ್ತಾಗಿೆ ಎಂದು ಡಾ.ಶಾನುಭಾಗ್ ನುಡಿದರು.

ರಾಜ್ಯ ಗ್ರಾಹಕರ ಆಯೋಗಕ್ಕೆ ದೂರು: ಈ ಹಗರಣದಿಂದ ಕಷ್ಟನಷ್ಟ ಕ್ಕೊಳಗಾಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಷ್ಠಾನ ಬರೆದ ಪತ್ರಕ್ಕೆ ವಿಮಾ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಂದ ಹಾಗೂ ಆರ್ಥಿಕ ಸಚಿವಾಲಯದಿಂದ ಸೂಕ್ತ ಸ್ಪಂದನೆ ದೊರೆಯದ್ದರಿಂದ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ನೀಡಿದ ಪ್ರಾತಿನಿಧಿಕ ದಾವೆಯನ್ನು ಇದೀಗ ಆಯೋಗ ವಿಚಾರಣೆಗಾಗಿ ಸ್ವೀಕರಿಸಿದೆ. ಪಾಲಿಸಿದಾರರು ಕಟ್ಟಿದ ಪ್ರೀಮಿಯಂ ಹಣವನ್ನು ಬಡ್ಡಿ ಸಹಿತ ಹಿಂದಿರುಗಿಸುವಂತೆ ಪ್ರತಿಷ್ಠಾನ ಆಯೋಗವನ್ನು ವಿನಂತಿಸಿದೆ.

ಇದೇ ವೇಳೆ ಕರ್ನಾಟಕದ ಬೆಳಗಾವಿ, ಮೈಸೂರು ಅಲ್ಲದೇ ಮಧ್ಯಪ್ರದೇಶದ ಇಂದೋರ್, ಒಡಿಸ್ಸಾದ ಭುವನೇಶ್ವರ್ ಮುಂತಾದ ಅನೇಕ ಕಡೆಗಳಿಂದ ಇಂತಹದೇ ದೂರುಗಳನ್ನು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸ್ವೀಕರಿಸಿದೆ. ಈ ಎಲ್ಲಾ ದೂರುದಾರರರಿಗೆ ಸಂಪೂರ್ಣ ಕಾನೂನು ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು.

ಅಮಾಯಕ ಸಹಾಯಕ ಏಜೆಂಟರನ್ನು ಹಿಂಸಿಸಬೇಡಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್‌ಐಸಿಯ ಮೈಕ್ರೋ ಇನ್ಶೂರೆನ್ಸ್ ಮುಖ್ಯ ಎಜೆಂಟರಾಗಿದ್ದ ಸಮನ್ವಯ ಸಂಸ್ಥೆ ಹಾಗೂ ಶುಬೋಧಯ ಸಂಸ್ಥೆಯವರೇ ಪಾಲಿಸಿದಾರರ ಹಣ ಲಪಟಾಯಿಸಿದ್ದಾರೆ ವಿನಹ, ಹಳ್ಳಿಹಳ್ಳಿಯಲ್ಲಿ ಪ್ರೀಮಿಯಂ ಹಣ ಸಂಗ್ರಹಿಸಿದ ಸಹಾಯಕ ಏಜೆಂಟರು ಯಾವುದೇ ಮೋಸ ಮಾಡಿಲ್ಲ. ಕರ್ನಾಟಕ ರಾಜ್ಯ ಗ್ರಾಹಕರ ದೂರು ಪರಿಹಾರ ಆಯೋಗವು ಈ ಹಗರಣದ ತನಿಖೆಯನ್ನು ಈಗಾಗಲೇ ಕೈಗೆತ್ತಿಕೊಂಡಿದ್ದು, ಶೀಘ್ರವೇ ಪಾಲಿಸಿದಾರರಿಗೆ ನ್ಯಾಯ ಸಿಗಲಿದೆ. ಪ್ರೀಮಿಯಂ ಹಣ ಸಂಗ್ರಹಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಸಹಾಯಕ ಏಜೆಂಟರಾಗಿ ದುಡಿದ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ರೈತ ಯುವಕರಿಗೆ ಹಿಂಸೆ ಮಾಡಬೇಡಿ ಎಂದು ಡಾ.ಶಾನುಭಾಗ್ ಚಿಕ್ಕಮಗಳೂರಿನ ಬಡ ಪಾಲಿಸಿದಾರರಿಗೆ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರಿನಿಂದ ಆಗಮಿಸಿದ ಹತ್ತಕ್ಕೂ ಅಧಿಕ ಸಹಾಯಕ ಏಜೆಂಟರಾಗಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗೃಹಿಣಿಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News