ಕಡವಿನಕಟ್ಟೆ ಡ್ಯಾಮಿನಲ್ಲಿ ಈಜಲು ತೆರಳಿದ ಯುವಕ ನಾಪತ್ತೆ
ಭಟ್ಕಳ: ಕಳೆದ ಎರಡು ದಿನಗಳಿಂದ ಎಡೆಬಿಡದೆ ಬೀಳುತ್ತಿವ ಮಳೆಯಿಂದಾಗಿ ತಾಲೂಕಿನ ಕಡವಿನಕಟ್ಟೆ ಡ್ಯಾಂ ತುಂಬಿ ಹರಿಯುತ್ತಿದ್ದು ಈಜಲು ತೆರಳಿದ್ದ ಯುವಕನೊಬ್ಬ ನೀರಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಡ್ಯಾಮಿನಲ್ಲಿ ಈಜುತ್ತ ಕಣ್ಮರೆಯಾಗಿರುವ ಯುವಕನನ್ನು ಪುರಸಭೆ ವ್ಯಾಪ್ತಿಯ ಫಾರೂಖಿ ಸ್ಟ್ರೀಟ್ 2ನೇ ಕ್ರಾಸ್ ನಿವಾಸಿ ಹಾಫಿಝ್ ಇಬ್ರಾಹೀಮ್ ಫೈಸಲ್ ಆಬಿದಾ (16) ಎಂದು ಗುರತಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಕಡವಿನಕಟ್ಟೆ ಡ್ಯಾಂ ಗೆ ತೆರಳಿದ್ದು ಸ್ಥಳಿಯರು ನಾಪತ್ತೆಯಾಗಿರುವ ಯುವಕನ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಭಟ್ಕಳ ಪೊಲೀಸ್ ವೃತ್ತ ನಿರೀಕ್ಷಕ ಸಿಪಿಐ ಗಣೇಶ್ ಘಟನಾ ಸ್ಥಳದಲ್ಲೇ ಇದ್ದು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.
ಫೈಸಲ್ ಬುಧವಾರ ಬೆಳಗ್ಗೆ ಮಕ್ಕಾದಿಂದ ಉಮ್ರಾ ಯಾತ್ರೆ ನಿರ್ವಹಿಸಿ ಭಟ್ಕಳಕ್ಕೆ ಬಂದಿದ್ದು ತನ್ನ ಸ್ನೇಹಿತರೊಂದಿಗೆ ಕಡವಿನಕಟ್ಟಾ ಡ್ಯಾಮ್ ಗೆ ಈಜಲು ತೆರಳಿದ್ದ ಎನ್ನಲಾಗಿದೆ.
ಭಟ್ಕಳದಲ್ಲೀಗ ಸೂತಕದ ಛಾಯೆ ಆವರಿಸಿಕೊಂಡಿದೆ.