ಉಡುಪಿಯ ಒಂಟಿ ಮಹಿಳೆ ಕೊಲೆ ಪ್ರಕರಣ: ಇಬ್ಬರ ಬಂಧನ

Update: 2019-07-10 16:33 GMT

ಉಡುಪಿ, ಜು.11: ಗೋವಾದ ಪಣಜಿಯ ಸೆಂಟಾಕ್ರೂಸ್ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಗೋವಾ ಪೊಲೀಸರ ಸಹಕಾರದಿಂದ ವಶಕ್ಕೆ ಪಡೆದ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಮನೆಯೊಂದರಲ್ಲಿ ವಾಸವಾಗಿದ್ದ ವೃದ್ಧ ಮಹಿಳೆಯ ಕೊಲೆ ಆರೋಪಿಗಳಿಬ್ಬರನ್ನು ಉಡುಪಿ ಪೊಲೀಸರು ಬಂಧಿಸಿ ಬುಧವಾರ ಉಡುಪಿಗೆ ಕರೆ ತಂದಿದ್ದಾರೆ.

ಧಾರವಾಡ ಜಿಲ್ಲೆಯ ನರಗುಂದ ನಿವಾಸಿಗಳಾಗಿದ್ದು, ಅಂಬಣ್ಣ ಯಾನೆ ಅಂಬರೀಶ್ ಯಾನೆ ಅಂಬಣ್ಣ ಬಸಪ್ಪ ಜಾಡರ್ ಯಾನೆ ಶಿವ (31) ಹಾಗೂ ಆತನ ಪತ್ನಿ ರಶೀದಾ ಯಾನೆ ಖಾಜಿ ಯಾನೆ ಜ್ಯೋತಿ (26) ಬಂಧಿತ ಆರೋಪಿಗಳು.

ಸುಬ್ರಹ್ಮಣ್ಯ ನಗರದ 5ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಒಬ್ಬರೇ ವಾಸಿಸುತಿದ್ದ ರತ್ನಾವತಿ ಜಿ.ಶೆಟ್ಟಿ (80) ಅವರನ್ನು ಜು.2ರ ಅಪರಾಹ್ನ 3ರಿಂದ ಜ.5ರ ರಾತ್ರಿ 8:30ರ ನಡುವಿನ ಅವಧಿಯಲ್ಲಿ ಮನೆಯನ್ನು ಪ್ರವೇಶಿಸಿ ಆಯುಧದಿಂದ ಕೊಲೆ ಮಾಡಿ ಅವರ ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ ಎರಡು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಮೃತರ ಮಗಳಾದ ಸುಪ್ರಭಾ ನೀಡಿದ ದೂರಿನಂತೆ ಉಡುಪಿ ನಗರ ಠಾಣೆುಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಆರಂಭಿಸಿದ ಪೊಲೀಸರು ಮನೆಯ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಕೆಲವು ದಿನಗಳ ಹಿಂದೆ ರತ್ನಾವತಿ ಜಿ. ಶೆಟ್ಟಿ ಅವರ ಮನೆಗೆ ಒಬ್ಬ ಗಂಡಸು ಮತ್ತು ಓರ್ವ ಮಹಿಳೆ ಮನೆ ಬಾಡಿಗೆಗೆ ಬಂದಿರುವ ವಿಚಾರ ತಿಳಿದು ಬಂತು. ಸಂಶಯಿತ ವ್ಯಕ್ತಿಗಳ ಮಾಹಿತಿ ಕಲೆ ಹಾಕಿದಾಗ ಅವರು ಧಾರವಾಡ ಜಿಲ್ಲೆ ನರಗುಂದದವರು ಎಂಬ ಮಾಹಿತಿ ಸಿಕ್ಕಿತು. ಆರೋಪಿಗಳ ಇರುವಿಕೆಯ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿದಾಗ ಇಬ್ಬರೂ ಗೋವಾ ರಾಜ್ಯದ ಓಲ್ಡ್ ಗೋವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವುದು ಪತ್ತೆಯಾಯಿತು. ಈ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ ಆರೋಪಿಗಳನ್ನು ವಶಕ್ಕೆ ಪಡೆಯುವಂತೆ ಕೋರಿಕೊಂಡು ವಿಶೇಷ ತಂಡವನ್ನು ಗೋವಾಕ್ಕೆ ಕಳುಹಿಸಿಕೊಡಲಾಯಿತು.

ಉಡುಪಿಯ ವಿಶೇಷ ತನಿಖಾ ತಂಡ, ಗೋವಾ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಸೆಂಟಾಕ್ರೂಸ್‌ನಲ್ಲಿ ಬಂಧಿಸಿ ಬುಧವಾರ ಉಡುಪಿಗೆ ಕರೆ ತಂದಿದೆ.

ಉಡುಪಿ ವೃತ್ತ ನಿರೀಕ್ಷಕ ನೇತೃತ್ವದ ವಿಶೇಷ ತಂಡ, ಡಿಸಿಐಬಿ ತಂಡದ ಸದಸ್ಯರೊಂದಿಗೆ ಜಂಟಿಯಾಗಿ ಪ್ರಕರಣ ದಾಖಲಾಗಿ 5 ದಿನದೊಳಗೆ ಪ್ರಕರಣ ವನ್ನು ಚಾಣಾಕ್ಷತನದಿಂದ ಭೇದಿಸಿ ಆರೋಪಿಗಳನ್ನು ಬಂಧಿಸಿರುವುದಕ್ಕೆ ಎಸ್ಪಿ ನಿಶಾ ಜೇಮ್ಸ್ ಶ್ಲಾಘಿಸಿದ್ದಾರೆ.

ಮೋಜಿನ ಜೀವನಕ್ಕಾಗಿ ಕೊಲೆ ಕೃತ್ಯ

ದುಂದುವೆಚ್ಚ, ಮೋಜಿನ ಜೀವನಕ್ಕೆ ಹಣದ ಅಡಚಣೆಯಾದ ಕಾರಣ ಕೊಲೆ ಕೃತ್ಯ ಎಸಗಿರುವುದಾಗಿ ಅಂಬಣ್ಣ ಪೊಲೀಸರಿಗೆ ವಿಚಾರಣೆಯ ವೇಳೆ ತಿಳಿಸಿದ್ದಾನೆ. ತಮಗೆ ಬಾಡಿಗೆ ಮನೆ ನೀಡಿದ ಯಜಮಾನಿ ರತ್ನಾವತಿ ಶೆಟ್ಟಿ ಅವರ ಕುತ್ತಿಗೆ ಮತ್ತು ಕೈಯಲ್ಲಿದ್ದ ಚಿನ್ನವನ್ನು ನೋಡಿ ಮನೆಯಲ್ಲಿ ತುಂಬಾ ಚಿನ್ನ ಇರಬಹುದೆಂದು ತಿಳಿದು ತಾವು ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆ ಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆರೋಪಿ ಅಂಬಣ್ಣ ಬಸಪ್ಪ ಜಾಡರ್ ಈ ಹಿಂದೆ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ. ಹುಬ್ಬಳ್ಳಿ ಯಲ್ಲಿ ಮೊಬೈಲ್ ಕಳವು , ಬಿಜಾಪುರದಲ್ಲಿ ಸ್ಕೂಟರ್ ಕಳವು, ಬಾದಾಮಿಯಲ್ಲಿ ಸರ ಸುಲಿಗೆ, ಮಂಗಳೂರಿನ ಕಾವೂರಿನಲ್ಲಿ ಮನೆ ಕಳವು ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News