ಅಪಾಯಕಾರಿ ವಿದ್ಯುತ್ ಕಂಬ, ಮರಗಳನ್ನು ತಕ್ಷಣ ತೆರವುಗೊಳಿಸಲು ಜಿ.ಪಂ ಸದಸ್ಯೆ ಸೂಚನೆ

Update: 2019-07-10 17:20 GMT

ಮೂಡುಬಿದಿರೆ : ಪಡುಮಾರ್ನಾಡು ಪಂಚಾಯತ್ ವ್ಯಾಪ್ತಿಯಲ್ಲಿ ಅಪಾಯಕಾರಿ ವಿದ್ಯುತ್ ಕಂಬಗಳು ಮತ್ತು ಮರಗಳಿವೆ. ಮಳೆಗಾಲಕ್ಕೆ ಮೊದಲು ಅಪಾಯಕಾರಿ ವಿದ್ಯುತ್ ಕಂಬ, ಮರಗಳನ್ನು ತೆರವುಗೊಳಿಸಲು ಹೇಳಿದರೂ ಬೇಜವಾಬ್ದಾರಿಯಿಂದ ವರ್ತಿಸುತ್ತೀರಿ. ತಕ್ಷಣ ತೆರವುಗೊಳಿಸಿ ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸಿ ಎಂದು ಜಿ.ಪಂ ಸದಸ್ಯೆ ಸುಜಾತ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಅವರು ಬುಧವಾರ ಪಡುಮಾರ್ನಾಡು ಗ್ರಾ. ಪಂ ಅಧ್ಯಕ್ಷ ದಯಾನಂದ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ  ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪಡುಮಾರ್ನಾಡು ಪ್ರದೇಶದಲ್ಲಿ ಗಾಳಿಗೆ ಒಂದು ಮರವು ವಿದ್ಯುತ್ ಕಂಬಗಳ  ಮೇಲೆ ಬಿದ್ದಿತ್ತು ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸ್ಪಂದಿಸದೆ ಇರುವುದರಿಂದ  3 ದಿನಗಳ ಕಾಲ ಅಲ್ಲಿಯೇ ಉಳಿದಿತ್ತು. ಈ ಅವಧಿಯಲ್ಲಿ ಏನಾದರೂ ಅನಾಹುತವಾಗಿದ್ದರೆಯಾರು ಹೊಣೆ? ಎಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರು.

ಬನ್ನಡ್ಕದಲ್ಲ್ಲಿರುವ ಟ್ರಾನ್ಸ್‍ಫಾರ್ಮರ್ ಸ್ಥಗಿತಗೊಂಡಿದ್ದು ಅದನ್ನು ಸರಿಪಡಿಸಬೇಕು. ಬಸವನಕಜೆ ಪರಿಸರದಲ್ಲಿ ವಿದ್ಯುತ್ ವಯರ್‍ಗಳ ಮೇಲೆ ಮರದ ಗೆಲ್ಲುಗಳು ಬೀಳುತ್ತಿದ್ದು ಅದನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಗಮನಸೆಳೆದರು. 

ಪಾಡ್ಯಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೊರತೆಯಿದ್ದು ಶಾಲೆ ಮುಚ್ಚುವ ಭೀತಿ ಎದುರಾಗಿದೆ. ಇಲ್ಲಿನ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ನಮ್ಮ ಸಮ್ಮತವಿಲ್ಲ. ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದರೆ ಮಕ್ಕಳನ್ನು ಬಸ್ಸಲ್ಲಿ ಕರೆದುಕೊಂಡು ಹೋಗಿ ವಾಪಸ್ ಅವರನ್ನು ಮನೆಗೆ ಬಿಡುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆಯೇ ಮಾಡಬೇಕು ಎಂದು ಕೆಲವು ಪೋಷಕರು ಪಡುಮಾರ್ನಾಡು ಗ್ರಾಮಸಭೆಯಲ್ಲಿ ಅಹವಾಲು ಸಲ್ಲಿಸಿದರು.

ಶಿಕ್ಷಣ ಇಲಾಖೆಯ ಪ್ರಸನ್ನ ಶೆಣೈ ಇಲಾಖಾ ಮಾಹಿತಿ ನೀಡಿ ಪಾಡ್ಯಾರು ಶಾಲೆಯ ಕಟ್ಟಡದ ಒಂದು ಬದಿ ಕುಸಿಯುವ ಹಂತಕ್ಕೆ ತಲುಪಿದ್ದು ಇದನ್ನು ದುರಸ್ಥಿಪಡಿಸಬೇಕು ಎಂದು ಹೇಳಿದಾಗ ಕೆಲವು ಪೋಷಕರು ಆಕ್ಷೇಪಿಸಿ ಶಾಲೆಯಲ್ಲಿ ಮಕ್ಕಳೇ ಇಲ್ಲದಿರುವಾಗ ಕಟ್ಟಡ ದುರಸ್ಥಿಪಡಿಸುವುದು ಯಾಕೆ? ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಜಲಾನಯನ ಇಲಾಖೆಯ ಮಹಿಳೆಯರ ಸಬಲೀಕರಣಕ್ಕಾಗಿ ಸ್ವಉದ್ಯೋಗ ನಡೆಸಲು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಅನುದಾನ ನೀಡುತ್ತಿದೆ. ಇದನ್ನು ಸ್ವಸಹಾಯ ಗುಂಪುಗಳಿಗೆ ಬಿಡುಗಡೆ ಮಾಡುವ ಜವಬ್ದಾರಿಯನ್ನು ಅಂಗನವಾಡಿ ಟೀಚರ್‍ಗಳಿಗೆ ನೀಡಿದೆ. ಪಡುಮಾರ್ನಾಡ್‍ನಲ್ಲಿ ಫಲಾನುಭವಿಗಳಿಗೆ ನೀಡದೆ ಬ್ಯಾಂಕ್‍ನಲ್ಲಿ ಠೇವಣಿ ಇಡಲಾಗಿದೆ ಎಂದು ನೇಮಿರಾಜ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿ ಶುಭ ಅವರ ಗಮನಕ್ಕೆ ತಂದು ಈ ಜವಾಬ್ದಾರಿಯನ್ನು ಅವರಿಂದ ತೆರವುಗೊಳಿಸಿ ಬೇರೆಯವರಿಗೆ ನೀಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ತನಿಖೆ ನಡೆಸುವುದಾಗಿ ಶುಭ ಅವರು ಭರವಸೆಯನ್ನು ನೀಡಿದರು.

ಪಡುಮಾರ್ನಾಡು ಗ್ರಾಮದ ಬಸವನಕಜೆಯಲ್ಲಿ ಡಿಸಿ ಮನ್ನಾ ಭೂಮಿ ಅತಿಕ್ರಮಣವಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ಅಂಬೇಡ್ಕರ್ ಭವನಕ್ಕೆ ಸ್ಥಳ ಮೀಸಲಿಡಬೇಕು ಎಂದು ದಲಿತ ಸಂಘಟನೆಯ ಮುಖಂಡರುಗಳು ಸಭೆಯ ಗಮನ ಸೆಳೆದರು.

ಡಿಸಿ ಮನ್ನಾ ಭೂಮಿ ಹಂಚಿಕೆಯ ಕುರಿತು ಫಲಾನುಭವಿಗಳ ಪಟ್ಟಿಯನ್ನು ತಹಸೀಲ್ದಾರ್‍ರವರಿಗೆ ನೀಡಿದ್ದೇವೆ. ಅದನ್ನು ಹಂಚಿಕೆ ಮಾಡುವ ಅಧಿಕಾರ ತಹಸೀಲ್ದಾರರಿಗಿದೆ, ಭೂಮಿ ಅತಿಕ್ರಮಣವಾಗಿದ್ದರೆ ಅಳತೆ ಮಾಡಿ ತೆರವುಗೊಳಿಸಲಾಗುವುದು ಎಂದು ಗ್ರಾಮಕರಣಿಕ ಕಿಶೋರ್ ಉತ್ತರಿಸಿದರು.

ಈ ಕುರಿತು ಚರ್ಚೆ, ವಾಗ್ವಾದ ನಡೆಯಿತು. ಸದಸ್ಯರಾದ ಸೂರಜ್ ಬನ್ನಡ್ಕ, ಶ್ರೀನಾಥ್ ಸುವರ್ಣ, ವಾಸುದೇವ ಭಟ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಬಿಸಿಎಂ ವಿಸ್ತರಣಾಧಿಕಾರಿ ಶ್ರೀಕಾಂತ್ ಗುಣಗಾ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.  ಉಪಾಧ್ಯಕ್ಷೆ ಅರುಣಾ ಹೆಗ್ಡೆ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News