ಆದೇಶದ ನೆಪದಲ್ಲಿ ಶಾಲಾ ವಾಹನಗಳ ತಪಾಸಣೆ, ದಂಡ: ನಿಯಮ ಸಡಿಲಿಗೆ ಮನವಿ

Update: 2019-07-11 11:17 GMT

ಬಂಟ್ವಾಳ, ಜು. 11: ಆದೇಶದ ನೆಪದಲ್ಲಿ ವಾಹನ ತಪಾಸಣೆ ಮಾಡಿ ನಿಲ್ಲಿಸಿ, ದಂಡ ವಿಧಿಸುವ ಮೂಲಕ ಸಮಸ್ಯೆ ಉಂಟಾಗು ತ್ತಿದ್ದು, ನಿಯಮಗಳನ್ನು ಸಡಿಲಿಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ವಾಹನ ಸಾಗಾಟ ಮಾಲಕ, ಚಾಲಕರ ಸಂಘ ಕರೆ ನೀಡಿರುವ ಪ್ರತಿಭಟನೆಯನ್ವಯ ಬಂಟ್ವಾಳ ತಾಲೂಕಿನಲ್ಲಿ ಮುಷ್ಕರ ಆರಂಭಗೊಂಡಿದೆ.

ಈ ಹಿನ್ನೆಲೆಯಲ್ಲಿ ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್ ಅವರನ್ನು ಗುರುವಾರ ಭೇಟಿ ಮಾಡಿದ ಸಂಘದ ಸದಸ್ಯರು, ಈ ಕುರಿತು ಮನವಿದರು. ಶುಕ್ರವಾರವೂ ಶಾಲಾ ಮಕ್ಕಳ ವಾಹನಗಳ ಸಾಗಾಟ ಇರುವುದಿಲ್ಲ ಎಂದು ಸಂಘದ ತಾಲೂಕು ಅಧ್ಯಕ್ಷ ಸದಾನಂದ ನಾವೂರ ತಿಳಿಸಿದ್ದಾರೆ.

ಬೆಳಗ್ಗೆ ಮಿನಿ ವಿಧಾನಸೌಧದ ಮುಂಭಾಗ ಸಭೆ ಸೇರಿದ ಚಾಲಕರು, ಬಳಿಕ ಅಲ್ಲಿಂದ ಎಎಸ್ಪಿ ಸೈದುಲು ಅಡಾವತ್ ಅವರ ಕಚೇರಿಗೆ ತೆರಳಿದರು. ನಿಯಮಗಳನ್ನು ಸಡಿಲಿಸಿದರೆ ಬಡ ಚಾಲಕ ವರ್ಗಕ್ಕೆ ಬದುಕಲು ಸಹಾಯವಾಗುತ್ತದೆ. ಅಲ್ಲದೆ ಪೋಷಕ ವರ್ಗದ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ ಎಂದು ಸಂಘದ ಅಧ್ಯಕ್ಷ ಸದಾನಂದ ನಾವರ ಮತ್ತು ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕ- ಮಾಲಕರ ಸಂಘ ಬಂಟ್ವಾಳ ಅಧ್ಯಕ್ಷ ಬಿ.ಎಂ. ಪ್ರಭಾಕರ ದೈವಗುಡ್ಡೆ ಅವರು ಈ ಸಂದರ್ಭ ಹೇಳಿದರು.

ಬಸ್‍ಗಳಲ್ಲಿ ಮಿತಿಮೀರಿ ಪ್ರಯಾಣಿಕರನ್ನು ಹೇರಿಕೊಂಡು ಸಂಚರಿಸುವುದನ್ನು ಗಮನಿಸದೆ ಕೇವಲ ಶಾಲಾ ವಾಹನಗಳನ್ನು ತಪಾಸಿಸಲಾಗುತ್ತದೆ. ಕೆಲವು ವಾಹನಗಳ ಮೇಲೆ ಎರಡೆರಡು ಬಾರಿ ದಂಡ ವಿಧಿಸಿ, ಚಾಲಕರ ಲೈಸನ್ಸ್ ಮುಟ್ಟುಗೋಲು ಹಾಕಿದ್ದುಂಟು, ಇಂಥ ಸನ್ನಿವೇಶದಲ್ಲಿ ನಾವು ಕೆಲಸ ಮಾಡಲು ಸಮಸ್ಯೆ ಉಂಟಾಗುತ್ತದೆ ಎಂದು ಎಎಸ್ಪಿ ಅವರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಉತ್ತರಿಸಿದ ಎಎಸ್ಪಿ ಸೈದುಲು ಅಡಾವತ್, ನಾವು ಸರಕಾರದ ನಿಯಮಗಳನ್ನು ಪಾಲಿಸುತ್ತೇವೆ. ಶಾಲಾ ವಾಹನ ಸಾಗಾಟ ಚಾಲಕರಿಗೆ ತೊಂದರೆ ಮಾಡುವ ಉದ್ದೇಶ ನಮಗಿಲ್ಲ. ನೀವು ಸಂಚಾರಿ ನಿಯಮಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಇಲ್ಲ. ನಿಮ್ಮ ಸಮಸ್ಯೆಗಳ ಮೇಲಾಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ದ.ಕ.ಜಿಲ್ಲಾ ಶಾಲಾ ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಜಯರಾಮ ಆಚಾರ್ಯ, ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಸಂತ ಚಂಡ್ತಿಮಾರ್, ಪ್ರಮುಖರಾದ ರಾಜಾ ಚಂಡ್ತಿಮಾರ್, ಇಕ್ಬಾಲ್, ಸೀತಾರಾಮ, ಕಿರಣ್ ಪಿಂಟೋ, ಮ್ಯಾಕ್ಸಿಂ ಸಹಿತ ಹಲವು ವಾಹನ ಚಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News