ಹಮಾಲಿ ಕಾರ್ಮಿಕರಿಗೆ ಅನ್ಯಾಯ ಸಹಿಸಲಾಗದು: ಕೆ ಮಹಾಂತೇಶ್

Update: 2019-07-11 11:55 GMT

ಮಂಗಳೂರು: ಅಸಂಘಟಿತ ಕಾರ್ಮಿಕರಲ್ಲಿ ಅತ್ಯಂತ ಶ್ರಮದಾಯಕ ಮತ್ತು ಅಪಾಯಕಾರಿ ಕೆಲಸ ನಿರ್ವಹಿಸುವ ಹಾಗೂ ವ್ಯಾಪಾರ ವಹಿವಾಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಹಮಾಲಿ ಕಾರ್ಮಿಕರ ಬೇಡಿಕೆಗಳ ನಿರ್ಲಕ್ಷಿಸುವ ನೀತಿಗಳನ್ನು ಒಪ್ಪಲು ಸಾಧ್ಯವಿಲ್ಲ ಹಮಾಲರ ಶ್ರಮಕ್ಕೆ ಸರಿಯಾಗಿ ಪ್ರತಿಫಲ ನೀಡದೆ ಅನ್ಯಾಯ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ  ಹಮಾಲಿ ಕಾರ್ಮಿಕರ ಫೆಡರೇಷನ್ ಅಧ್ಯಕ್ಷರಾದ ಕೆ. ಮಹಾಂತೇಶ್ ಎಚ್ಚರಿಸಿದರು.

ಅವರು ಬೈಕಂಪಾಡಿ ಎಪಿಎಂಸಿ ಕಚೇರಿ ಎದುರು ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರ ಸಂಘಟನೆ ಆಗಿರುವ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಬಂದರು ಸಗಟು ಮಾರುಕಟ್ಟೆಯ ಎಲ್ಲಾ ಹಮಾಲರಿಗೆ ಎಪಿಎಂಸಿ ಲೈಸನ್ಸ್ ನೀಡಲು ಒತ್ತಾಯಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಪಿಎಂಸಿ ಚಲೋ ಪ್ರತಿಭಟನೆ ಉದ್ಘಾಟಿಸಿ  ಮಾತಾಡುತ್ತಿದ್ದರು.

ಮುಂದುವರಿದು ಮಾತನಾಡಿದ ಅವರು ಕೃಷಿ ಮಾರಾಟ ಮಂಡಳಿ ಮತ್ತು ಇಲಾಖೆಯಲ್ಲಿ ಜಾರಿ ಮಾಡಲಾದ ಯಾವುದೇ ಯೋಜನೆಗಳು ಮಂಗಳೂರಿನ ಹಮಾಲಿಗಳಿಗೆ ಸಿಗುತ್ತಿಲ್ಲ ಆಡಳಿತ ಮಂಡಳಿಯ ಇಚ್ಛಾಶಕ್ತಿ ಮತ್ತು ಸಿಬ್ಬಂದಿಗಳ ಕೊರತೆಯೇ ಕಾರಣ ಎಂದು ದೂರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ  ಬಿ.ಕೆ ಇಂತಿಯಾಝ್ ಅವರು ಮಂಗಳೂರು ಎಪಿಎಂಸಿ ಮಾರುಕಟ್ಟೆಯ ಉಪ ಮಾರುಕಟ್ಟೆ ಎಂದು ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ನೀಡಿ 8 ವರ್ಷಗಳಾಗಿದೆ ಆದರೆ ಇದುವರೆಗೂ ಸಮರ್ಪಕವಾಗಿ ಹಮಾಲಿ ಲೈಸನ್ಸ್ ನೀಡಿರುವುದಿಲ್ಲ ಲೈಸನ್ಸ್ ಇಲ್ಲದಿದ್ದರೆ ಯಾವುದೇ ಸೌಲಭ್ಯಗಳು ಪಡೆಯಲು ಸಾಧ್ಯವಿಲ್ಲ ಮಂಗಳೂರು ಎಪಿಎಂಸಿಯಲ್ಲಿ 1000ಕ್ಕೂ ಹೆಚ್ಚು ವರ್ತಕರಿದ್ದಾರೆ ಆದರೆ ಹಮಾಲಿ ಲೈಸನ್ಸ್ ಇರುವುದು ಕೇವಲ 83 ಮಂದಿಗೆ ಮಾತ್ರ ಲೈಸನ್ಸ್ ಇರುವವರು ನವೀಕರಣ ಮಾಡುವಾಗ ಅನಗತ್ಯ ದಾಖಲೆ ಕೇಳಿ ಸತಾಯಿಸಲಾಗುತ್ತಿದೆ. ಮಂಗಳೂರು ಎಪಿಎಂಸಿ ಆಡಳಿತಕ್ಕೆ  ತೆರಿಗೆ ಸೋರಿಕೆ ತಡೆಯಲಾಗುತ್ತಿಲ್ಲ ಎಂದು ಆರೋಪಿಸಿದ ಅವರು ಬೇಡಿಕೆ ಈಡೇರದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಸಂಘದ ಅಧ್ಯಕ್ಷರಾದ ಪಿ.ಎಸ್ ವಿಲ್ಲಿ ವಿಲ್ಸನ್ ಮಾತನಾಡಿದರು. 

ಮನವಿ ಸ್ವೀಕರಿಸಲು ಅಧ್ಯಕ್ಷರು ಬರಬೇಕೆಂದು ಪಟ್ಟುಹಿಡಿದ ಕಾರ್ಮಿಕರ ಒತ್ತಾಯಕ್ಕೆ ಮಣಿದು ಎಪಿಎಂಸಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು ಮತ್ತು ಸ್ಥಳದಲ್ಲೇ ಜಂಟಿ ಸಭೆಯ ದಿನಾಂಕವನ್ನು ಪ್ರಕಟಿಸಿದರು. 

ಪ್ರತಿಭಟನೆ ಹಿನ್ನೆಲೆಯಲ್ಲಿ ಸದಾ ಜಿಗಿಜಿಗಿ ಜಿನುಗುತ್ತಿದ್ದ ಹಳೆ ಬಂದರು ಸಗಟು ಮಾರುಕಟ್ಟೆ ಕಾರ್ಮಿಕರಿಲ್ಲದೆ ಬಿಕೋ ಎನ್ನುತ್ತಿತ್ತು. 

ಪ್ರತಿಭಟನೆಲ್ಲಿ ಬಂದರು ಶ್ರಮಿಕರ ಸಂಘದ ಮುಖಂಡರಾದ ಹರೀಶ್ ಕೆರೆಬೈಲ್, ಹಸನ್ ಮೋನು, ಚಂದ್ರಹಾಸ್ ಬಬ್ಬುಕಟ್ಟೆ, ಯಲ್ಲಪ್ಪ, ಹಂಝ ಜಪ್ಪಿನಮೊಗರು, ಸಿದ್ದಿಕ್ ಬೆಂಗರೆ, ಮಾದವ ಕಾವೂರ್, ಫಾರೂಕ್ ಉಳ್ಳಾಲ, ಶರೀಫ್ ಕುಪ್ಪೆಪದವು, ಮೊಯಿದೀನ್ ಎಂ ಆರ್, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News