ಕೇಂದ್ರ ಸರಕಾರದಿಂದ ರಾಜ್ಯಗಳ ಸ್ವಾಯತ್ತೆ ಮೇಲೆ ದಾಳಿ: ಕೆ.ಮಹಾಂತೇಶ್

Update: 2019-07-11 15:33 GMT

ಮಂಗಳೂರು, ಜು.11: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಸಾಮಾಜಿಕ ಸುರಕ್ಷತೆ ಹೆಸರಲ್ಲಿ ಕಟ್ಟಡ ಕಾರ್ಮಿಕ ಕಾನೂನು ಗಳನ್ನು ರದ್ದುಗೊಳಿಸಲು ಯತ್ನಿಸುತ್ತಿದೆ. ಇಂತಹ ಕ್ರಮವು ರಾಜ್ಯಗಳ ಸ್ವಾಯತ್ತೆಯ ಮೇಲೆ ದಾಳಿ ನಡೆಸುವುದಾಗಿದೆ ಎಂದು ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಡಬ್ಲುಎಫ್‌ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದ್ದಾರೆ.

ಮಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಈಗಾಗಲೇ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ನೀತಿಗಳನ್ನು ಜಾರಿ ಮಾಡಿ ಕೋಟ್ಯಂತರ ಕಟ್ಟಡ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿಸಿದೆ. ಈಗ ಸಾಮಾಜಿಕ ಸುರಕ್ಷತಾ ಮಸೂದೆ-2019ನ್ನು ಜಾರಿಗೊಳಿಸುವ ಮೂಲಕ ನಾಲ್ಕು ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರು ಈಗ ಪಡೆಯುತ್ತಿರುವ ಪಡೆಯುತ್ತಿರುವ ಹಲವು ಸೌಲಭ್ಯಗಳನ್ನು ಕಸಿಯಲು ಹೊರಟಿದೆ. ಕೇಂದ್ರದ ಈ ನೀತಿಯ ವಿರುದ್ಧ ದೇಶವ್ಯಾಪಿ ಮುಷ್ಕರಕ್ಕೆ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರು ಸನ್ನದ್ಧರಾಗುತ್ತಿದ್ದಾರೆ ಎಂದು ಹೇಳಿದರು.

ದೇಶದ ಕಾರ್ಮಿಕ ವರ್ಗದ ಸ್ವಾತಂತ್ರ ಪೂರ್ವದಿಂದ ಹೋರಾಡುತ್ತಾ ಗಳಿಸಿದ್ದ 44 ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ಕೇಂದ್ರ ಸರಕಾರ ತಿದ್ದುಪಡಿ ರದ್ದು ಮಾಡಲು ಮುಂದಾಗಿದೆ. ಈಗಾಗಲೇ ಆ ಕಾನೂನುಗಳ ಸ್ಥಾನದಲ್ಲಿ ವೇತನ ಪಾವತಿ ಸಂಹಿತೆ, ಔದ್ಯೋಗಿಕ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸಂಹಿತೆ, ವೃತ್ತಿ ಆಧಾರಿತ ಸುರಕ್ಷೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಕುರಿತ ಸಂಹಿತೆ ಎನ್ನುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರೂಪಿಸಿದೆ ಎಂದರು.

ಈ ನಾಲ್ಕು ಕಾರ್ಮಿಕ ಸಂಹಿತೆಗಳು ಕೋಟ್ಯಂತರ ಕಾರ್ಮಿಕ ವರ್ಗದ ಬದುಕಿಗೆ ರಕ್ಷಣೆ ಒದಗಿಸುವ ಬದಲು ಮಾಲಕರು ಅದರಲ್ಲೂ ಕಾರ್ಪೊರೆಟ್ ಮಾಲಕರ ಲಾಭ ಹೆಚ್ಚಿಸಿಕೊಂಡು ಮತ್ತಷ್ಟು ಕಾರ್ಮಿಕರ ಶೋಷಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.

ಕೇಂದ್ರದ ನೂತನ ಸಾಮಾಜಿಕ ಸುರಕ್ಷಾ ಮಸೂದೆಯು ಜಾರಿಯಾದರೆ ಈಗಾಗಲೇ ನೋಂದಣಿಯಾಗಿರುವ ನಾಲ್ಕು ಕೋಟಿ ಕಾರ್ಮಿಕರ ಗುರುತಿನ ಚೀಟಿಗಳು ರದ್ದಾಗುತ್ತವೆ. ಹೊಸದಾಗಿ ಕೇಂದ್ರದಲ್ಲಿ ಪ್ರಧಾನಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆ ಯಲ್ಲಿ ಹಾಗೂ ಕಾರ್ಮಿಕ ಸಚಿವರು ಉಪಾಧ್ಯಕ್ಷರಾಗಿರುವ ಸಲಹಾ ಮಂಡಳಿಗಳು ರಚನೆಯಾಗುತ್ತವೆ. ಈ ಹಿಂದಿನಂತೆ ತೀರ್ಮಾನ ಕೈಗೊಳ್ಳುವ ಬದಲು ಕೇವಲ ಸಲಹೆಗಳನ್ನು ನೀಡಬಹುದಾಗಿದೆ ಎಂದರು.

ಕಾರ್ಮಿಕರ ಬದುಕಿಗೆ ಸಂಚಕಾರ: ನರೇಂದ್ರ ಮೋದಿ ಸರಕಾರ ಹೀಗೆ ರದ್ದು ಮಾಡಲು ಹೊರಟಿರುವ ಪ್ರಮುಖ ಕಾನೂನುಗಳಲ್ಲಿ ದೇಶದ ಕೋಟ್ಯಂತರ ಕಟ್ಟಡ ನಿರ್ಮಾಣ ಕಾರ್ಮಿಕರು ನೋಂದಣಿಯಾಗಿರುವ ಹಾಗೂ ಸೌಲಭ್ಯ ಪಡೆಯುತ್ತಿರುವ ಕಟ್ಟಡ ನಿರ್ಮಾಣ ಕಾರ್ಮಿಕ ಕಾನೂನು, ಕಾರ್ಮಿಕ ಸೆಸ್ ಕಾನೂನು ಸೇರಿದಂತೆ 44 ಕಾರ್ಮಿಕ ಕಾನೂನುಗಳು ರದ್ದಾಗಲಿವೆ. ಇದರಿಂದ ಕಟ್ಟಡ ಕಾರ್ಮಿಕರ ಬದುಕಿಗೆ ಸಂಚಕಾರ ಬರಲಿದೆ ಎಂದು ಸಿಡಬ್ಲುಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಿಡಬ್ಲುಎಫ್‌ಐ ರಾಜ್ಯ ಘಟಕದ ಜಿಲ್ಲಾಧ್ಯಕ್ಷ ಸುನೀಲ್‌ಕುಮಾರ್ ಬಜಾಲ್, ಯೋಗೀಶ್ ಜೆಪ್ಪಿನಮೊಗರು ಉಪಸ್ಥಿತರಿದ್ದರು.

ಬಾಲ ಕಾರ್ಮಿಕ ಪದ್ಧತಿಗೆ ಉತ್ತೇಜನ: ಆತಂಕ

ಕೇಂದ್ರ ಸರಕಾರದ ನೂತನ ಸಾಮಾಜಿಕ ಸುರಕ್ಷಾ ಮಸೂದೆಯು ಜಾರಿಯಾದರೆ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ರಿಬ್ಬರೂ ಹೊಸ ರಾಜ್ಯ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರು ಹೆಸರು ನೋಂದಾಯಿಸಿಕೊಳ್ಳಬೇಕು. ಆದರೆ ಈ ನೋಂದಣಿ ಕಡ್ಡಾಯವಲ್ಲ. ಅಸಂಘಟಿತ ವಲಯದ ಕಾರ್ಮಿಕರು 14ನೇ ವಯಸ್ಸಿನಿಂದ ನೋಂದಣಿ ಮಾಡಬಹುದು. ಇದರಿಂದ ಬಾಲ ಕಾರ್ಮಿಕ ಪದ್ಧತಿಗೆ ಉತ್ತೇಜನ ನೀಡುತ್ತದೆ ಎಂದು ಸಿಡಬ್ಲುಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಜು.17: ಬೆಂಗಳೂರಲ್ಲಿ ದುಂಡು ಮೇಜಿನ ಸಭೆ

ಕಾರ್ಮಿಕರ ಬದುಕನ್ನು ರಕ್ಷಿಸುವ ಉದ್ದೇಶದಿಂದ ಹೋರಾಟ ಮುಂದುವರಿದ ಭಾಗವಾಗಿ ಜು.17ರಂದು ಬೆಂಗಳೂರಿನ ಶಾಸಕರ ಭವನದ ವಿಧಾನ ಪರಿಷತ್ ಸಭಾಂಗಣದಲ್ಲಿ ದುಂಡು ಮೇಜಿನ ಸಭೆ ಕರೆಯಲಾಗಿದೆ ಎಂದು ಸಿಡಬ್ಲುಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದ್ದಾರೆ.

ಸಭೆಯನ್ನು ಸವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನ್ಯಾ.ವಿ.ಗೋಪಲಗೌಡ ಉದ್ಘಾಟಿಸಲಿದ್ದಾರೆ. ಮಾಜಿ ಜಂಟಿ ಕಾರ್ಮಿಕ ಆಯುಕ್ತ ವಸಂತಕುಮಾರ್ ಹಿಟ್ಟಣಗಿ, ದಿಲ್ಲಿಯ ಎನ್‌ಸಿಸಿ-ಸಿಎಲ್‌ನ ರಾಷ್ಟ್ರೀಯ ಸಂಯೋಜಕ ಸುಭಾಷ್ ಭಟ್ನಾಗರ್, ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅಭಿಪ್ರಾಯ ಮಂಡಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News