ವಿಲಿಯಂ ಮೃತದೇಹ ಮಂಗಳೂರಿಗೆ: ಜು.12ಕ್ಕೆ ಅಂತ್ಯಕ್ರಿಯೆ
ಮಂಗಳೂರು, ಜು.10: ಮುಂಬೈ ವಿಮಾನ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದ ವಿಲಿಯಂ ಫೆರ್ನಾಂಡಿಸ್(49) ಮೃತದೇಹವನ್ನು ಗುರುವಾರ ಮಂಗಳೂರಿಗೆ ತರಲಾಗಿದ್ದು, ಜು.12ರಂದು ಕುಲಶೇಖರದ ಹೊಲಿ ಚರ್ಚ್ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ವಿಲಿಯಂ ಫೆರ್ನಾಂಡಿಸ್ ಇಸ್ರೇಲ್ನ ಟೆಲ್ಅವಿವ್ನಲ್ಲಿ ಉದ್ಯೋಗದಲ್ಲಿದ್ದರು. ಅವರು ಬೆನ್ನೆಲುಬಿನ ಗಾಯದ ಚಿಕಿತ್ಸೆಗಾಗಿ ಮಂಗಳೂರಿಗೆ ಹೊರಟಿದ್ದರು. ವಿಲಿಯಂ ಫೆರ್ನಾಂಡಿಸ್ಮುಂಬೈ ವಿಮಾನಕ್ಕೆ ತಲುಪಿದ ದಿನ ಮಂಗಳೂರಿಗೆ ಬರುವ ಸಂದರ್ಭ ವಿಮಾನದ ಟಿಕೆಟ್ ಕ್ಯಾನ್ಸಲ್ ಆಗಿತ್ತು. ಈ ನಡುವೆ ಮುಂಬೈನಿಂದ ಮಂಗಳೂರಿಗೆ ಬರುವ ಎಲ್ಲ ಟಿಕೆಟ್ಗಳು ಬುಕಿಂಗ್ ಆಗಿದ್ದವು. ಇದರಿಂದ ಮರುದಿನದ ಟಿಕೆಟ್ ಮಾಡಿಸಿದ್ದರು. ಅಲ್ಲಿಂದ ಮಂಗಳೂರು ವಿಮಾನ ಹತ್ತಲು ಸಿದ್ಧತೆ ನಡೆಸುತ್ತಿದ್ದಾಗ ತೀವ್ರ ಅಸ್ವಸ್ಥಗೊಂಡು ವಿಲಿಯಂ ಮೃತಪಟ್ಟಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಿಲಿಯಂ ಮೂಲತಃ ಮಂಗಳೂರು ಸಮೀಪದ ಪಡೀಲ್ ವಾಸಿಸುತ್ತಿದ್ದರು. ಇವರಿಗೆ 6, 7 ಮತ್ತು 8ನೇ ಬೆನ್ನೆಲುಬುಗಳು ಹಾನಿಯಾಗಿದ್ದವು. ಬೆನ್ನೆಲುಬು ಚಿಕಿತ್ಸೆಗೆ ಇಸ್ರೆಲ್ನಲ್ಲಿ ಅಧಿಕ ಹಣ ಪಾವತಿಸುವ ಅಗತ್ಯವಿತ್ತು. ಅಧಿಕ ಬೆನ್ನುನೋವಿನ ಕಾರಣ ಅವರಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ವೀಲ್ಚೇರ್ನ್ನು ಬಳಸುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ನಿರ್ಲಕ್ಷ ಆರೋಪ: ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಮಂಗಳೂರು ಕಡೆ ಪ್ರಯಾಣಿಸುವವರಿಗೆ ಸಂಬಂಧಿಸಿ ಮಿತಿ ಮೀರಿದ ಬುಕಿಂಗ್ ಆದ ಪ್ರಯುಕ್ತ ವಿಲಿಯಂ ಫೆರ್ನಾಂಡಿಸ್ ಅವರಿಗೆ ಟಿಕೆಟ್ ನೀಡಲು ನಿರಾಕರಿಸಲಾಗಿತ್ತು. ಹಾಗಾಗಿ ತೀವ್ರ ಅಸ್ವಸ್ಥರಾಗಿ ಅವರು ಸಾವನ್ನಪ್ಪಿದರು ಎಂದು ಕುಟುಂಬದ ಮೂಲಗಳು ಆರೋಪಿಸಿವೆ.