ಯುವ ಪೀಳಿಗೆಗೆ ಕೃಷಿ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯವಾಗಲಿ: ಪ್ರೊ.ಯಡಪಡಿತ್ತಾಯ

Update: 2019-07-13 17:15 GMT

ಕೊಣಾಜೆ: ಯುವಪೀಳಿಗೆಗೆ ಕೃಷಿ ಸಂಸ್ಕøತಿಯನ್ನು ಪರಿಚಯಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದ್ದು ಈ ನಿಟ್ಟಿನಲ್ಲಿ ಕೊಣಾಜೆಯಲ್ಲಿ ಗ್ರಾಮೋತ್ಸವದ ಮೂಲಕ ಈ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಅವರು ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿ, ಗ್ರಾಮ ಪಂ. ಕೊಣಾಜೆ, ಮಂಗಳಾ ಗ್ರಾಮೀಣ ಯುವಕ ಸಂಘ ಕೊಣಾಜೆ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ ಇದರ ಆಶ್ರಯದಲ್ಲಿ ಕೊಣಾಜೆಯ ಕಲ್ಲಿಮಾರು ಗದ್ದೆಯ ಬಳಿ ಶನಿವಾರ ನಡೆದ ಗ್ರಾಮೋತ್ಸವ-ಕೊಣಾಜೆ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಿಮ್ಮ ವಿದ್ಯಾರ್ಥಿಗಳ ನಡೆ ನಿಮ್ಮೂರ ರೈತರ ಕಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಹಲವು ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯದಡಿಯ ಕಾಲೇಜುಗಳ ಮೂಲಕ ಯೋಜನೆಯನ್ನು ರೂಪಿಸಲಾಗುವುದು. ಮಂಗಳೂರು ವಿಶ್ವವಿದ್ಯಾಲಯವು ಗ್ರಾಮೀಣ ಪ್ರದೇಶದ ಜನರ ಕೂಡಿಕೆ ಯೊಂದಿಗೆ ಹಲವಾರು  ಕಾರ್ಯಕ್ರಮಗಳನ್ನ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಇಂದಿನ ಕಾರ್ಯಕ್ರಮದಲ್ಲಿ ವಿದೇಶಿ ವಿದ್ಯಾರ್ಥಿ ಗಳು ಭಾಗವಹಿಸಿರುವುದರಿಂದ ಗ್ರಾಮೋತ್ಸವದ ಸೊಬಗು ಹೆಚ್ಚಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೂಡದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು,  ಗ್ರಾಮೋತ್ಸವದಂತಹ ಕಾರ್ಯಕ್ರಮಗಳು ದೇಶದ ಸಂಸ್ಕøತಿಗೆ ಪೂರಕವಾದಂತಹ ಕಾರ್ಯಕ್ರಮವಾಗಿದೆ. ಗ್ರಾಮೀಣ ಜನರ ಬದುಕು ಹಾಗೂ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ನಮ್ಮ ಸಂಸ್ಕೃತಿಯ ರಕ್ಷಣೆಯಲ್ಲಿ  ತೊಡಗಿಸಿ ಕೊಳ್ಳಬೇಕು ಎಂದು ಹೇಳಿದರು.

ಕೊಣಾಜೆ ಗ್ರಾಮ ಪಂ. ಅಧ್ಯಕ್ಷ ನಝರ್ ಷಾ ಅವರು ಮಾತನಾಡಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳ ಕೂಡುವಿಕೆಯೊಂದಿಗೆ ಕೊಣಾಜೆಯಲ್ಲಿ ಕೃಷಿ ಹಾಗೂ ನಮ್ಮ ಭಾರತೀಯ ಸಂಸ್ಕೃತಿಯನ್ನು ನೆನಪಿಸುವ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕೊಣಾಜೆ ಗ್ರಾಮೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್,  ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಪ್ರೊ. ವಿನಿತಾ ರೈ, ಎಸ್‍ಕೆಡಿಆರ್‍ಪಿಯ ನಿರ್ದೇಶಕರಾದ ಸತೀಶ್ ಶೆಟ್ಟಿ, ಪ್ರಗತಿಪರ ಕೃಷಿಕ ರಘುರಾಮ ಕಾಜವ  ಪಟ್ಟೋರಿ, ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಎ.ಕೆ., ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಹರೇಕಳ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ವಿಜಯ ಕುಮಾರ್ ಪಾವೂರು, ಮಂಗಳೂರು ವಿವಿ ಪ್ರಾಧ್ಯಾಪಕ ಪ್ರೊ.ರವಿಶಂಕರ್ ರಾವ್, ತಾಲೂಕು ಪಂ. ಸದಸ್ಯೆ ಪದ್ಮಾವತಿ ಪೂಜಾರಿ, ಅಬ್ದುಲ್ ರಹ್ಮಾನ್ ಕೊಣಾಜೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗ್ರಾಮೋತ್ಸವ ಸಮಿತಿಯ ಅಚ್ಯುತ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ನಾಸೀರ್ ಸ್ವಾಗತಿಸಿದರು. ದೈಹಿಕ ನಿರ್ದೇಶಕರಾದ ತ್ಯಾಗಂ ಹರೇಕಳ ಹಾಗೂ ರಾಜೀವ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್  ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೆಸರುಗದ್ದೆಯ ಓಟ, ಮೂರು ಕಾಲಿನ ಓಟ, ಅಡಿಕೆ ಹಾಳೆ ಎಳೆಯುವ ಸ್ಪರ್ಧೆ ಸೇರಿದಂತೆ ಹಲವಾರು ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ನೇಜಿ ನೆಡುವ ಪ್ರಾತ್ಯಾಕ್ಷಿಯನ್ನು ಏರ್ಪಡಿಸಲಾಗಿತ್ತು.

ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೊಸ ಅನುಭವ ಹಾಗೂ ಹುರುಪಿನೊಂದಿಗೆ ಗದ್ದೆಗಿಳಿದ ವಿದೇಶಿ ವಿದ್ಯಾರ್ಥಿಗಳು ಎನ್‍ಎಸ್‍ಎಸ್ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ನೇಜಿ ನೆಟ್ಟು ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News