ಸ್ಥಳೀಯ ಖಾಸಗಿ ವಾಹನಗಳ ಸುಂಕ ಪಾವತಿ ನಿರ್ಧಾರ ಹಿಂತೆಗೆಯದಿದ್ದಲ್ಲಿ ತೀವ್ರ ಹೋರಾಟ: ಎಸ್ ಡಿ ಪಿ ಐ
ಮಂಗಳೂರು: ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರದಲ್ಲಿ ಸ್ಥಳೀಯ ಖಾಸಗಿ ವಾಹನಗಳಿಗೆ ಶುಲ್ಕ ಪಾವತಿ ಕಡ್ಡಾಯ ಗೊಳಿಸಿದ ನಿರ್ಧಾರವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಎಂದು ಎಸ್ ಡಿ ಪಿ ಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್ ತಿಳಿಸಿದ್ದಾರೆ.
ಟೋಲ್ ಸಂಗ್ರಹ ಗುತ್ತಿಗೆ ಪಡೆದ ಕಂಪೆನಿಗೆ ನಷ್ಟವಾಗುತ್ತಿದೆ ಎಂಬ ಟೊಳ್ಳು ಕಾರಣವನ್ನು ನೀಡಿ ನಷ್ಟವನ್ನು ಭರಿಸಲು ಸ್ಥಳೀಯ ಜನತೆಯ ಮೇಲೆ ಹೊರೆಯನ್ನು ಹಾಕುತ್ತಿರುವುದು ಖಂಡನೀಯವಾಗಿದೆ. ನಷ್ಟವನ್ನು ಸರಕಾರ ಸಂದಾಯ ಮಾಡಬೇಕೇ ಹೊರತು ಸ್ಥಳೀಯ ವಾಹನಗಾರರಲ್ಲ ಇದು ಜನ ವಿರೋಧಿ ನೀತಿಯಾಗಿದೆ. ಸುರತ್ಕಲ್ ಟೋಲ್ ಕೇಂದ್ರದ ವಿರುದ್ಧ ಮತ್ತು ಸ್ಥಳೀಯ ವಾಹನಗಳಿಗೆ ಶುಲ್ಕ ಸಂಗ್ರಹ ವಿರೋಧಿಸಿ ಹಲವು ಹೋರಾಟಗಳು ನಡೆದಿರುತ್ತದೆ ಇದೆಲ್ಲವನ್ನೂ ಗೊತ್ತಿದ್ದು ಜಿಲ್ಲಾಡಳಿತ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ .
ಆದುದರಿಂದ ಕೂಡಲೇ ಸ್ಥಳೀಯ ವಾಹನಗಳಿಗೆ ಶುಲ್ಕ ಪಾವತಿ ಮಾಡುವ ನಿರ್ಧಾರವನ್ನು ಗುತ್ತಿಗೆ ಪಡೆದ ಕಂಪೆನಿ ಮತ್ತು ಜಿಲ್ಲಾಡಳಿತ ಹಿಂತೆಗೆಯಬೇಕು ಇಲ್ಲದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಎಸ್ ಡಿ ಪಿ ಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.