ಅಸ್ಸಾಂ ನೆರೆ: 6 ಸಾವು, 8 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತ
ಗುವಾಹತಿ, ಜು. 13: ಅಸ್ಸಾಂನಲ್ಲಿ ಶುಕ್ರವಾರ ಮತ್ತೆ ನಾಲ್ಕು ಜಿಲ್ಲೆಗಳು ನೆರೆ ಪೀಡಿತವಾಗಿದ್ದು, ಇದರಿಂದ ರಾಜ್ಯದಲ್ಲಿರುವ ಒಟ್ಟು 33 ಜಿಲ್ಲೆಗಳಲ್ಲಿ ನೆರೆ ಪೀಡಿತ ಜಿಲ್ಲೆಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಮಳೆ ಸಂಬಂಧಿ ಘಟನೆಗಳಲ್ಲಿ ಮತ್ತೆ ಮೂವರು ಮೃತಪಟ್ಟಿದ್ದು, ಇದರೊಂಂದಿಗೆ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಈ ವರ್ಷ ಸಂಭವಿಸಿದ ಎರಡನೇ ನೆರೆಯಿಂದ 68 ಕಂದಾಯ ವಲಯದ 1,556 ಗ್ರಾಮಗಳಲ್ಲಿ 8.69 ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ದ ವರದಿ ಹೇಳಿದೆ.
ಜಗತ್ತಿನ ಅತಿ ದೊಡ್ಡ ನದಿಯಾದ ಬ್ರಹ್ಮಪುತ್ರ ಹಾಗೂ ಇತರ ಐದು ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಾರಾಂತ್ಯದಲ್ಲಿ ಇನ್ನಷ್ಟು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಕಚೇರಿ ಪ್ರಕಟಿಸಿದ ಬಳಿಕ ಶುಕ್ರವಾರದಿಂದ ಅಸ್ಸಾಮಿನಾದ್ಯಂತ ದೋಣಿ ಸೇವೆ ಸ್ಥಗಿತಗೊಳಿಸಲಾಗಿದೆ.
ಧೇಮಾಜಿ, ಲಖಿಮ್ಪುರ, ಬಿಸ್ವಾಂತ್, ಸೋಂಟಿಪುರ, ದರ್ರಾಂಡ್, ಬಕ್ಸಾ, ಬಾರ್ಪೇಟಾ, ನಲ್ಬರಿ, ಚಿರಾಗ್, ಬೋಂಗೈಗಾಂವ್, ಗೋಪಾಲ್ಪುರ, ಹಾಜೋಯಿ, ನಾಗಾಂವ್, ಗೋಲಾಘಾಟ್, ಮಜುಲಿ, ಜೊರ್ಹಾತ್, ದಿಬ್ರುಗಢ, ತೀನ್ಸುಕಿಯಾ ಹಾಗೂ ಶಿಬಸಾಗರ್ ಜಿಲ್ಲೆಗಳು ನೆರ ಪೀಡಿತವಾಗಿವೆ.
ಸುಮಾರು 27000 ಹೆಕ್ಟೇರ್ ಕೃಷಿಭೂಮಿ ಜಲಾವೃತವಾಗಿದೆ. 7 ಸಾವಿರ ಜನರನ್ನು ರಾಜ್ಯಾದ್ಯಂತ ಇರುವ 68 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.